ಕೋಲ್ಕತ್ತಾ, ಡಿಸೆಂಬರ್ 26: ಡೇವಿಡ್ ವಿಲಿಯಮ್ಸ್ 47ನೇ ನಿಮಿಷದಲ್ಲಿ ಗಳಿಸಿದ ಏಕೈಕ ಗೋಲಿನಿಂದ ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ತಂಡವನ್ನು 1-0 ಗೋಲಿನ ಅಂತರದಲ್ಲಿ ಸೋಲಿಸಿದ ಮಾಜಿ ಚಾಂಪಿಯನ್ ಎಟಿಕೆ ಹಳೆಯ ಸೇಡನ್ನು ತೀರಿಸಿಕೊಂಡಿತು. ಇದೇ ಮೊದಲ ಬಾರಿಗೆ ಬೆಂಗಳೂರು ತಂಡ ಮೊದಲ ಬಾರಿಗೆ ಎಟಿಕೆ ವಿರುದ್ಧ ಸೋಲನುಭವಿಸಿತು. 10 ಪಂದ್ಯಗಳನ್ನಾಡಿ 18 ಅಂಕಗಳನ್ನು ಗಳಿಸಿದ ಎಟಿಕೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು.
ಎಟಿಕೆಗೆ ಮುನ್ನಡೆ
ಪ್ರಥಮಾರ್ಧದಲ್ಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಎಟಿಕೆ ತಂಡಕ್ಕೆ ಯಶಸ್ಸು ಸಿಕ್ಕಿರಿಲಿಲ್ಲ, ಆದರೆ ಡೇವಿಡ್ ವಿಲಿಯಮ್ಸ್ 47ನೇ ನಿಮಿಷದಲ್ಲಿ ತಂಡಕ್ಕೆ ಅಗತ್ಯ ಇರುವ ಗೋಲು ಗಳಿಸಿ ಮುನ್ನಡೆ ಕಲ್ಪಿಸಿದರು. ಇದರೊಂದಿಗೆ ಬೆಂಗಳೂರು ವಿರುದ್ಧ ಇದುವರೆಗೂ ಜಯ ಕಾಣದ ಕೋಲ್ಕೊತಾ ಪಡೆ ಈ ಬಾರಿ ಹೊಸ ಇತಿಹಾಸಕ್ಕೆ ವೇದಿಕೆ ನಿರ್ಮಿಸಿತು.
ಗೋಲಿಲ್ಲದ ಪ್ರಥಮಾರ್ಧ
ಮೊದಲ 45 ನಿಮಿಷಗಳ ಆಟದಲ್ಲಿ ಇತ್ತಂಡಡಗಳಿಗೆ ಯಾವುದೇ ರೀತಿಯಲ್ಲಿ ಉತ್ತಮ ಆವಕಾಶ ಸಿಗಲಿಲ್ಲ. ಬೆಂಗಳೂರು ಹೆಚ್ಚಿನ ಅವಧಿಯಲ್ಲಿ ಚೆಂಡನ್ನು ತನ್ನ ಸ್ವಾಧೀನದಲ್ಲಿ ಇರಿಸಿಕೊಂಡಿತ್ತು. ಆದರೆ ಗೋಲು ಗಳಿಸುವ ಅವಕಾಶ ಸಿಕ್ಕಿರಲಿಲ್ಲ. ಎಟಿಕೆ ಎಂದಿನಂತೆ ತನ್ನ ಆಕ್ರಮಣಕಾರಿ ಆಟ ಮುಂದುವರಿಸಿತ್ತು. ಮೈಕಲ್ ಸುಸೈರಾಜ್ ಆತಿಥೇಯರ ಪರ ಉತ್ತಮ ಅವಕಾಶಗಳನ್ನು ಗಳಿಸಿದರೂ ಅದಕ್ಕೆ ಗೋಲಿನ ರೂಪು ನೀಡುವಲ್ಲಿ ವಿಫಲರಾಗುತ್ತಿದ್ದರು. ಬೆಂಗಳೂರು ಎಫ್ ಸಿ ಗೆ ಯಾವುದೇ ರೀತಿಯಲ್ಲಿ ಗೋಲು ಗಳಿಸುವ ಅವಕಾಶ ಸಿಗಲಿಲ್ಲ. ಉದಾಂತ್ ಸಿಂಗ್ ಮಿಂಚಿನ ಆಟ ಪ್ರದರ್ಶಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಅಗ್ರ ಸ್ಥಾನದ ಗುರಿ
ಅಗ್ರ ಸ್ಥಾನದ ಗುರಿ ಹೊತ್ತಿರುವ ಎಟಿಕೆ ಹಾಗೂ ಬೆಂಗಳೂರು ಎಫ್ ಸಿ ತಂಡಗಳು ಇಂಡಿಯನ್ ಸೂಪರ್ ಲೀಗ್ ನ 45ನೇ ಪಂದ್ಯದಲ್ಲಿ ಮುಖಾಮುಖಿಯಾದವು. ಬ್ಲೂಸ್ ತಂಡ ಇದುವರೆಗೂ ಸೋತಿರುವುದು ಒಂದು ಪಂದ್ಯದಲ್ಲಿ ಮಾತ್ರ. ಮಾಜಿ ಚಾಂಪಿಯನ್ ಎಟಿಕೆ ಇದುವರೆಗೋ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದೆ. ಚಾಂಪಿಯನ್ಷಿಪ್ ಇತಿಹಾಸದಲ್ಲೇ ಎಟಿಕೆ ತಂಡ ಬೆಂಗಳೂರು ತಂಡವನ್ನು ಸೋಲಿಸಿಲ್ಲ. ಅದರೆ ಈ ಬಾರಿ ಕೋಲ್ಕೊತಾ ತಂಡ ಹಿಂದಿನ ತಂಡವಾಗಿ ಕಾಣುತ್ತಿಲ್ಲ. ರಾಯ್ ಕೃಷ್ಣ, ಡೇವಿಡ್ ವಿಲಿಯಮ್ಸ್ ಮತ್ತು ಸುಸೈರಾಜ್ ಇದುವರೆಗೂ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ. ಡಿಫೆನ್ಸ್ ವಿಭಾಗದಲ್ಲಿ ಆಗಸ್ಟಿನ್ ಹಾಗೂ ಪ್ರೀತಮ್ ಕೊತಾಲ್ ಉತ್ತಮ ರೀತಿಯಲ್ಲಿ ತಂಡಕ್ಕೆ ನೆರವಾಗಿದ್ದಾರೆ.
ಬೆಂಗಳೂರು ಎಫ್ ಸಿ ತಂಡ ಮನೆಯಂಗಣದಲ್ಲಿ ಮುಂಬೈ ಸಿಟಿ ಎಫ್ ಸಿ ವಿರುದ್ಧ ಸೋತಿರುವುದನ್ನು ಹೊರತುಪಡಿಸಿದರೆ ಹಾಲಿ ಚಾಂಪಿಯನ್ ಇದುವರೆಗೂ ಸೋಲು ಕಂಡಿಲ್ಲ. ಸುನಿಲ್ ಛೆಟ್ರಿ ಇದುವರೆಗೂ ಪ್ರತಿಯೊಂದು ಪಂದ್ಯದಲ್ಲೂ ತಂಡಕ್ಕೆ ನೆರವಾಗಿದ್ದಾರೆ. ಆಶಿಕ್ ಕುರುನಿಯನ್, ಉದಾಂತ್ ಸಿಂಗ್ ಮತ್ತು ದಿಮಾಸ್ ಡೆಲ್ಗಾಡೋ ಮಿಡ್ ಫೀಲ್ಡ್ ವಿಭಾಗದಲ್ಲಿ ಪ್ರಮುಖರೆನಿಸದ್ದಾರೆ. ಬ್ಯಾಕ್ ಲೈನ್ ನಲ್ಲಿ ರಾಯ್ ಕೃಷ್ಣ ಅವರನ್ನು ನಿಯಂತ್ರಿಸಲು ಅಲ್ಬರ್ಟ್ ಸೆರಾನ್, ಜುವಾನನ್ , ಹರ್ಮನ್ಜೋತ್ ಖಬ್ರಾ ಹಾಗೂ ನಿಶು ಕುಮಾರ್ ತಮ್ಮ ನೈಜ ಸಾಮರ್ಥ್ಯ ತೋರಬೇಕಾಗಿದೆ. ಗುರ್ಪ್ರೀತ್ ಸಿಂಗ್ ಸಂಧೂ ಗೋಲ್ ಕೀಪಿಂಗ್ ನಲ್ಲಿ ಇರುವಾಗ ಬೆಂಗಳೂರು ತಂಡದ ಮನೋಬನವನ್ನು ಹೆಚ್ಚಿಸಲಿದೆ.