ಮುಂಬೈ, ಫೆಬ್ರವರಿ 20: ಶುಕ್ರವಾರ ಮುಂಬೈ ಫುಟ್ಬಾಲ್ ಅರೆನಾದಲ್ಲಿ ನಡೆಯಲಿರುವ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮುಂಬೈ ಸಿಟಿ ಎಫ್ ಸಿ ಹಾಗೂ ಚೆನ್ನೈಯಿನ್ ಎಫ್ ಸಿ ತಂಡಗಳು ಸೆಮಿಫೈನಲ್ ತಲಪುವುದನ್ನೇ ಗುರಿಯಾಗಿಸಿಕೊಂಡು ಅಂಗಣಕ್ಕಿಳಿಯಲಿವೆ, ಇಲ್ಲಿ ಎರಡೂ ತಂಡಕ್ಕೂ ಜಯದ ಅನಿವಾರ್ಯತೆ ಇದೆ.
ಇಲ್ಲಿ ಗಳಿಸುವ ಜಯ ಇತ್ತಂಡಗಳಿಗೆ ಸೆಮಿಫೈನಲ್ ಅವಕಾಶವನ್ನು ಕಲ್ಪಿಸಲಿದೆ. ಆದ್ದರಿಂದ ಇದು ಇತ್ತಂಡಗಳಿಗೂ ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ. 17 ಪಂದ್ಯಗಳನ್ನು ಆಡಿರುವ ಮುಂಬೈ ತಂಡ 26 ಅಂಕಗಳನ್ನು ಗಳಿಸಿದ್ದರೆ, 25 ಅಂಕಗಳನ್ನು ಗಳಿಸಿರುವ ಓವೆನ್ ಕೊಯ್ಲ್ ಪಡೆ ಐದನೇ ಸ್ಥಾನದಲ್ಲಿದೆ. ಚೆನ್ನೈಯಿನ್ ತಂಡಕ್ಕೆ ಡ್ರಾ ಗಳಿಸಿದರೂ ಮುಂದಿನ ಹಂತಕ್ಕೆ ಪ್ರಯತ್ನಿಸಬಹುದು ಏಕೆಂದರೆ ಇನ್ನೂ ಒಂದು ಪಂದ್ಯ ಬಾಕಿ ಇದೆ. ಜಯ ಗಳಿಸಿದರೆ ಚೆನ್ನೈಯಿನ್ ತಂಡ ನೇರವಾಗಿ ಸೆಮಿಫೈನಲ್ ತಲುಪಲಿದೆ. ಪಂದ್ಯ ಡ್ರಾಗೊಂಡರೆ ಮತ್ತೊಂದು ಅವಕಾಶಲ್ಲಿ ಸೆಮಿಫೈನಲ್ ತಲುಪಲು ಪ್ರಯತ್ನಿಸಲಿದೆ. ಒಂದು ವೇಳೆ ಚೆನ್ನೈಯಿನ್ ತಂಡ ಇಲ್ಲಿ ಸೋಲು ಅನುಐವಿಸಿದರೆ ಸ್ಪರ್ಧೆಯಿಂದ ಹೊರಗುಳಿಯಲಿದೆ.
ಆರನೇ ಸ್ಥಾನದಲ್ಲಿರುವ ಒಡಿಶಾ ತಂಡಕ್ಕೆ ಡ್ರಾ ಹೊರತಾಗಿ ಯಾವುದೇ ಫಲಿತಾಂಶ ಬಂದರೂ ಅವಕಾಶವನ್ನು ಕಳೆದುಕೊಳ್ಳಲಿದೆ. ಮುಂಬೈ ತಂಡಕ್ಕೆ ಮನೆಯಂಗಣದಲ್ಲಿ ಆಡುತ್ತಿರುವುದೇ ಸಮಾಧಾನಕರ ಸಂಗತಿ. ಮನೆಯಂಗಣದಲ್ಲಿ ನಡೆದ ಮೂರು ಪಂದ್ಯಗಳಲ್ಲಿ ಮುಂಬೈ ಜಯ ಗಳಿಸಿದೆ. ಜಾರ್ಜ್ ಕೋಸ್ಟಾ ಪಡೆ ಮನೆಯಂಗಣದಲ್ಲಿ ಸತತ ನಾಲ್ಕನೇ ಜಯ ಗಳಿಸಲು ಸಜ್ಜಾಗಿದೆ.
ಅಮಾನತಿನಿಂದ ಮುಕ್ತಿಗೊಂಡು ಅಮೈನ್ ಚೆರ್ಮಿಟಿ ತಂಡವನ್ನು ಸೇರಿಕೊಂಡಿರುವುದು ಮುಂಬೈನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಡಿಯಾಗೊ ಕಾರ್ಲೋಸ್ ಮತ್ತು ಮೊಡೌ ಸೌಗೌ ಸೇರಿ ಮೂವರು ಸಂಘಟಿತ ಹೋರಾಟ ನೀಡಿದರೆ ಚೆನ್ನೈಗೆ ಜಯದ ಹಾದಿ ಕಠಿಣವಾಗುವುದು ಸಹಜ.
''ನಾಳೆಯ ಪಂದ್ಯ ನಮ್ಮ ಮೇಲೆಯೇ ಅವನಂಬಿತವಾಗಿದೆ ಎಂಬುದು ಗಮನಾರ್ಹ. ನಾವು ಗೆದ್ದರೆ ನಾಲ್ಕರ ಒಳಗೆಯೇ ಇರುತ್ತೇವೆ ಎಂಬುದು ಸಮಾಧಾನ. ನಮ್ಮಲ್ಲಿ ಒಂದು ಪಂದ್ಯವನ್ನು ಗೆಲ್ಲಲು ಈಗ 90 ರಿಂದ 95 ನಿಮಿಷ ಇದೆ. ನಾವು ಅದನ್ನು ಸಾಧಿಸುತ್ತೇವೆ ಎಂಬ ನಂಬಿಕೆ ಇದೆ. ನಾವು ನಮ್ಮಿಂದಾದ ಉತ್ತಮ ಪ್ರಯತ್ನವನ್ನು ಮಾಡುತ್ತಿದ್ದೇವೆ. ಅಂತಿಮವಾಗಿ ನಾವು ನಾಲ್ಕರ ಹಂತ ತಲುಪಿದೆವು ಎಂದು ಹೇಳಯವಂತವರಾಗುತ್ತೇವೆ ಎಂಬ ನಂಬಿಕೆ ಇದೆ, '' ಎಂದು ಕೋಸ್ಟಾ ಹೇಳಿದ್ದಾರೆ.
ಉತ್ತಮ ಡಿಫೆನ್ಸ್ ವಿಭಾಗವನ್ನು ಹೊಂದಿರುವ ಚೆನ್ನೈಯಿನ್ ವಿರುದ್ಧ ಮುಂಬೈ ಡಿಫೆನ್ಸ್ ಹಾಗೂ ಮಿಡ್ ಫೀಲ್ಡ್ ವಿಭಾಗದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ನೆರಿಜುಸ್ ವಾಸ್ಕಿಸ್ ಹಾಗೂ ರಫಾಯಲ್ ಕ್ರಿವೆಲ್ಲರೋ ವಿರುದ್ಧ ಮುಂಬೈನ ಪ್ರತೀಕ್ ಚೌಧರಿ ಮತ್ತು ಮಾಟೊ ಗ್ರಿಜಿಕ್ ಉತ್ತಚ ರೀತಿಯಲ್ಲಿ ರಣತಂತ್ರವನ್ನು ರೋಪಿಸಬೇಕಾಗಿದೆ.
ಚೆನ್ನೈಯಿನ್ ಬತ್ತಳಿಕೆಯಲ್ಲಿ ವಾಸ್ಕಿಸ್ ಹಾಗೂ ಕ್ರಿವೆಲ್ಲರೊ ಪ್ರಮುಖವಾದ ಅಸ್ತ್ರ ಎನಿಸಿದ್ದಾರೆ. ಈ ಇಬ್ಬರು ಆಟಗಾರರು ಪಂದ್ಯದಲ್ಲಿ ಬದಲಾವಣೆ ತರಬಲ್ಲರು ಎಂದು ಕೋಚ್ ಕೊಯ್ಲ್ ನಂಬಿದ್ದಾರೆ. ಈ ಋತುವಿನಲ್ಲಿ ಚೆನ್ನೈಯಿನ್ ತಂಡದ ಯಶಸ್ಸಿನಲ್ಲಿ ಈ ಇಬ್ಬರು ಆಟಗಾರರು ಪ್ರಮುಖ ಪಾತ್ರವಹಿಸಿರುತ್ತಾರೆ.
''ನಮ್ಮ ಬತ್ತಳಿಕೆಯಲ್ಲಿ ಸಾಕಷ್ಟು ಉತ್ತಮ ಆಟಗಾರರಿದ್ದಾರೆ. ಅವರಲ್ಲಿ ವಾಸ್ಕಿಸ್ ಹಾಗೂ ಕ್ರಿವೆಲ್ಲರೋ ಇದುವರೆಗೂ ನಿರೀಕ್ಷೆಯಂತೆ ಉತ್ತಮವಾಗಿ ಆಡಿದ್ದಾರೆ. ಅದೇ ರೀತಿ ನಮ್ಮಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲ ವೈಯಕ್ತಿಕ ಆಟಗಾರರಿದ್ದಾರೆ. ಆದರೆ ಗುಂಪಾಗಿ ಆಡುವುದೇ ನಮ್ಮ ಶಕ್ತಿ. ಇದುವರೆಗೂ ನಾವು ಆ ಶಕ್ತಿಯಂದಲೇ ಯಶಸ್ಸು ಕಂಡಿದ್ದೇವೆ,'' ಎಂದು ಕೊಯ್ಲ್ ಹೇಳಿದ್ದಾರೆ. ಕುತೂಹಲದ ಸಂಗತಿಯೆಂದರೆ ಮುಂಬೈ ತಂಡದ ಆಟಗಾರ ಲೂಸಿಯನ್ ಗೊಯನ್ ಈಗ ಚೆನ್ನೈ ತಂಡದಲ್ಲಿದ್ದು, ತನ್ನ ಮಾಜಿ ತಂಡವಾದ ಮುಂಬೈ ವಿರುದ್ಧ ಕ್ಲೀನ್ ಶೀಟ್ ಸಾಧನೆ ಮಾಡುವ ಗುರಿ ಹೊಂದಿದ್ದಾರೆ.