ಪಾಕ್ ಹಾಕಿ ದಂತಕತೆಯ ಕೂಗಿಗೆ ಭಾರತದಿಂದ ಮಾನವೀಯ ಸ್ಪಂದನೆ
ಮುಂಬೈ, ಏ. 27: ಮಾನವೀಯತೆಗೆ ಜಾತಿ, ಧರ್ಮ, ಲಿಂಗ ಬೇಧವಿಲ್ಲ. ಮೇಲು-ಕೀಳು, ಬಡವ-ಬಲ್ಲಿದ, ಪಶು-ಪಕ್ಷಿ ಅನ್ನೋ ಗೊಡವೆಯಿಲ್ಲ. ಅಷ್ಟೇ ಯಾಕೆ ಭಾಷೆ, ಗಡಿ, ದೇಶದ ಹಂಗೂ ಇಲ್ಲ. ಎಲ್ಲಾ ಬೇಧಗಳನ್ನು ಬದಿಗಿಟ್ಟು ಭಾವನೆಗೆ ಮಿಡಿಯೋದೆ ಮಾನವೀಯತೆ. ಹೃದಯ ಸಮಸ್ಯೆಗೆ ತುತ್ತಾಗಿರುವ ಪಾಕಿಸ್ತಾನಿ ಹಾಕಿ ಮಾಜಿ ಆಟಗಾರ ಮನ್ಸೂರ್ ಅಹ್ಮದ್ಗೆ ಭಾರತದ ಆಸ್ಪತ್ರೆಗಳು ಉಚಿತ ಹೃದಯ ಕಸಿಗೆ ಆಹ್ವಾನ ನೀಡುವ ಮೂಲಕ ಮಾನವೀಯತೆ ಮೆರೆದಿವೆ.

ಚಿತ್ರಕೃಪೆ: ಜಾಗ್ರಣ್
ಹೃದಯ ಸಮಸ್ಯೆಗೆ ಒಳಗಾಗಿದ್ದ ವರ್ಲ್ಡ್ ಕಪ್ ವಿಜೇತ ಪಾಕಿಸ್ತಾನ ಹಾಕಿ ತಂಡದ ಗೋಲ್ ಕೀಪರ್ ಮನ್ಸೂರ್, ಚಿಕಿತ್ಸೆಗಾಗಿ ಭಾರತದ ಮೊರೆ ಬಂದಿದ್ದರು. ಅವರಿಗೆ ಚೆನ್ನೈ ಮೂಲದ ಹಿರಿಯ ಹೃದಯ ಕಸಿ ಸರ್ಜನ್ ಡಾ. ಕೆ. ಆರ್. ಬಾಲಕೃಷ್ಣನ್ ನೆರವಾಗುವ ಇಂಗಿತ ವ್ಯಕ್ತಪಡಿಸಿದ್ದರು. ಅದರಂತೆ ಈಗ ಭಾರತದ ಫೋರ್ಟಿಸ್ ಗ್ರೂಪ್ನ ಆಸ್ಪತ್ರೆಗಳು ಮಾನ್ಸೂರ್ ಅವರನ್ನು ಹೃದಯ ಕಸಿಗೆ ದಾಖಲಾಗುವಂತೆ ಆಹ್ವಾನ ನೀಡಿವೆ. ಜೊತೆಗೆ ಚಿಕಿತ್ಸೆಗೆ ಬೀಳುವ ಎಲ್ಲಾ ಖರ್ಚನ್ನು ತಾವೇ ಭರಿಸುವುದಾಗಿ ತಿಳಿಸಿವೆ.
ಸದ್ಯ ಕರಾಚಿಯ ಪೋಸ್ಟ್ ಗ್ರ್ಯಾಜ್ಯುಯೇಟ್ ಮೆಡಿಕಲ್ ಸೆಂಟರ್ ನಲ್ಲಿ ಡಾ. ಫರ್ವೇಜ್ ಚೌದರಿ ಅವರಿಂದ ಚಿಕಿತ್ಸೆ ಪಡೆಯುತ್ತಿರುವ ಮನ್ಸೂರ್, ಫರ್ವೇಜ್ ಸೂಚನೆ ಮೇರೆಗೆ ಹೃದಯ ಚಿಕಿತ್ಸೆಗೆ ಭಾರತದ ಮೊರೆ ಬಂದಿದ್ದರು. ಇದಕ್ಕೆ ಸ್ಪಂದಿಸಿರುವ ಫೋರ್ಟಿಸ್ ಗ್ರೂಪ್ ತನ್ನ ಅಧೀನದಲ್ಲಿರುವ ಮುಂಬೈ ಮತ್ತು ಚೆನ್ನೈ ಆಸ್ಪತ್ರೆಗಳಲ್ಲಿ ಉಚಿತ ಹೃದಯ ಕಸಿ ನಡೆಸಲು ಮನ್ಸೂರ್ಗೆ ಆಹ್ವಾನವನ್ನಿತ್ತಿದೆ.
ಫೋರ್ಟಿಸ್ ಮುಂಬೈ ಝೋನಲ್ ಡೈರೆಕ್ಟರ್ ಆಗಿರುವ ಡಾ. ಎಸ್. ನಾರಾಯಣಿ ಅವರು ಮನ್ಸೂರ್ಗೆ ಉಚಿತ ಹೃದಯ ಕಸಿಗೆ ಆಹ್ವಾನಿಸಿರುವ ವಿಚಾರವನ್ನು ಖಾತರಿಪಡಿಸಿದ್ದಾರೆ. 'ಸರ್ಕಾರಕ್ಕೆ ಸಂಬಂಧಿಸಿದ ವಿಚಾರಗಳೆಲ್ಲ ಮುಗಿದು ಅವರಿಗೆ ಕ್ಲಿಯರೆನ್ಸ್ ದೊರೆತರೆ ಅವರು ಭಾರತಕ್ಕೆ ಪ್ರಯಾಣ ಬೆಳೆಸುವಷ್ಟು ಶಕ್ತರೇ ಎನ್ನುವುದನ್ನು ನಾವು ಮತ್ತೆ ನಿಮಗೆ ಖಾತರಿಪಡಿಸಲಿದ್ದೇವೆ' ಎಂದು ನಾರಾಯಣಿ ತಿಳಿಸಿದ್ದಾರೆ.
ಭಾರತದಲ್ಲಿ ಹೃದಯ ಚಿಕಿತ್ಸೆಗೆ ಒಳಗಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದ ಅಹ್ಮದ್, ಈ ಹಿಂದೆ ಭಾರತೀಯರನ್ನು ಉದ್ದೇಶಿಸಿ, 'ಹಾಕಿ ಮೈದಾನದಲ್ಲಿ ಹಣಾಹಣಿಗಿಳಿದಿರುವಾಗ ನಾನು ಭಾರತೀಯ ಅಭಿಮಾನಿಗಳಿಗೆ ನೋವನ್ನುಂಟು ಮಾಡಿರಬಹುದು.
ಆದರೆ ಅದು ಬರೀ ಆಟವಷ್ಟೇ. ನನಗೀಗ ಹೃದಯ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ. ಅದಕ್ಕಾಗಿ ಭಾರತ ಸರ್ಕಾರದ ನೆರವನ್ನು ನಿರೀಕ್ಷಿಸುತ್ತಿದ್ದೇನೆ' ಎಂದಿದ್ದರು.
ಮನ್ಸೂರ್ ಅಹ್ಮದ್ ಅವರು 1990ರಲ್ಲಿ ಪಾಕಿಸ್ತಾನ ಹಾಕಿ ತಂಡಕ್ಕೆ ನಾಯಕನಾಗಿ ಸೇರಿಕೊಂಡಿದ್ದರು. ಇವರಿದ್ದ ಪಾಕ್ ತಂಡ 1994ರಲ್ಲಿ ವಿಶ್ವಕಪ್ ಮತ್ತು ಚಾಂಪಿಯನ್ ಟ್ರೋಫಿ ಜಯಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications