ಚೆನ್ನೈನಲ್ಲಿ ನಡೆಯುತ್ತಿರುವ 44ನೇ ಚೆಸ್ ಒಲಿಂಪಿಯಾಡ್ ಅಂತಿಮ ದಿನಕ್ಕೆ ಕಾಲಿಟ್ಟಿದೆ. ಕೊನೆಯ ದಿನದಂದು ಪ್ರಜ್ಞಾನಂದ, ಗುಕೇಶ್, ನಿಹಾಲ್, ರೌನಾಕ್ ಮತ್ತು ಅಧಿಬಾನ್ ಅವರನ್ನು ಒಳಗೊಂಡ ಭಾರತ ತಂಡ ಕಂಚಿನ ಪದಕವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. 2014ರಲ್ಲಿ ಕಂಚಿನ ಪದಕ ಗೆದ್ದ ಬಳಿಕ ಭಾರತದ ಎರಡನೇ ಪದಕ ಇದಾಗಿದೆ.
ತಾನಿಯಾ ಸಚ್ದೇವ್ ಅವರ ನೇತೃತ್ವದ ಭಾರತ ಮಹಿಳಾ ತಂಡ ನಿರಾಸೆ ಅನುಭವಿಸಿದೆ. ಮಹಿಳಾ ತಂಡ ಯುಎಸ್ಎ ವಿರುದ್ಧ 1-3 ಅಂತರದಿಂದ ಸೋಲು ಕಾಣುವ ಮೂಲಕ ಪದಕದ ಕನಸು ಭಗ್ನಗೊಂಡಿದೆ. ಪುರುಷರ ವಿಭಾಗದಲ್ಲಿ ಟೂರ್ನಮೆಂಟ್ನ 14ನೇ ಶ್ರೇಯಾಂಕಿತ ಉಜ್ಬೇಕಿಸ್ತಾನ ತಂಡ ಚಿನ್ನದ ಪದಕವನ್ನು ಗೆದ್ದುಕೊಂಡಿದೆ.
ತಮಿಳುನಾಡಿನ ಮಾಮಲ್ಲಪುರಂನಲ್ಲಿ ನಡೆಯುತ್ತಿರುವ 44ನೇ ಚೆಸ್ ಒಲಿಂಪಿಯಾಡ್ 11ನೇ ಮತ್ತು ಅಂತಿಮ ಸುತ್ತಿನ ನಂತರ ಮಂಗಳವಾರ ಅಂತ್ಯಗೊಳ್ಳಲಿದೆ. ಬಳಿಕ ಸಮಾರೋಪ ಸಮಾರಂಭ ನಡೆಯಲಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ಪ್ರತಿಷ್ಠಿತ ಒಲಿಂಪಿಯಾಡ್ ಟೂರ್ನಿ ನಡೆದಿದ್ದು ಓಪನ್ ಮತ್ತು ಮಹಿಳೆಯರ ವಿಭಾಗದಲ್ಲಿ ದಾಖಲೆ ಸಂಖ್ಯೆಯಲ್ಲಿ ತಂಡಗಳು ಭಾಗವಹಿಸಿದ್ದವು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ವಹಿಸಲಿದ್ದಾರೆ.
ಅಂತರರಾಷ್ಟ್ರೀಯ ಚೆಸ್ ಫೆಡರೇಶನ್ ಅಧ್ಯಕ್ಷ ಅರ್ಕಾಡಿ ಡ್ವೊರ್ಕೊವಿಚ್ ಮತ್ತು ಇತ್ತೀಚೆಗೆ ಚುನಾಯಿತ ಉಪಪಾಧ್ಯಕ್ಷ ಮತ್ತು ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಭಾರತ ಪುರುಷರ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸ್ಟಾರ್ ಮಹೇಂದ್ರ ಸಿಂಗ್ ಧೋನಿ ಕೂಡ ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.