
ಬೆಂಗಳೂರು, ಜನವರಿ 06: ಹರ್ಯಾಣದ ಸರ್ಕಾರದಿಂದ ಸಿಗಬೇಕಿದ್ದ ನಗದು ಪುರಸ್ಕಾರದ ಬಗ್ಗೆ ಶೂಟರ್ ಮನು ಭಾಕರ್ ಅವರು ಮಾಡಿದ್ದ ಟ್ವೀಟ್ ವಿವಾದಕ್ಕೆ ಕಾರಣವಾಗಿದೆ. ನಗದು ಪುರಸ್ಕಾರಕ್ಕೆ ಸಂಬಂಧಿಸಿದಂತೆ ಹರ್ಯಾಣದ ಕ್ರೀಡಾ ಸಚಿವ ಅನಿಲ್ವಿಜ್ಅವರು ಮನು ಅವರಿಂದ ಕ್ಷಮೆಯಾಚಿಸಿದ್ದಾರೆ.
ಬೊನಸ್ ಐರೀಸ್ ನಲ್ಲಿ ನಡೆದ ಯೂತ್ ಒಲಂಪಿಕ್ ಗೇಮ್ಸ್-2018ನ ಶೂಟಿಂಗ್ನಲ್ಲಿ ಜಯ ಗಳಿಸಿದ್ದ 16 ವರ್ಷದ ಭಾಕರ್ಗೆ 2 ಕೋಟಿ ನಗದು ಪುರಸ್ಕಾರ ನೀಡುವುದಾಗಿ ಕ್ರೀಡಾ ಸಚಿವರು ಭರವಸೆ ನೀಡಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಭಾಕರ್, ಈ ಭರವಸೆ ಸತ್ಯವೇ? ಅಥವಾ ಸುಳ್ಳೇ ಎಂದು ದಯಮಾಡಿ ತಿಳಿಸಿ ಎಂದು ಟ್ವೀಟ್ ಮಾಡಿದ್ದರು.
ಈ ಹಿಂದಿನ ಸರ್ಕಾರ ಭಾಕರ್ಗೆ ನೀಡಿದ್ದ 10 ಲಕ್ಷಕ್ಕೆ ಹೆಚ್ಚುವರಿಯಾಗಿ ನಾವು 2 ಕೋಟಿ ನಗದು ಪುರಸ್ಕಾರ ನೀಡುತ್ತೇವೆ ಎಂದು ಹೇಳಿಕೆ ನೀಡಿದ್ದನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದರು.
ಈ ಟ್ವೀಟ್ ಬಗ್ಗೆ ಕ್ರೀಡಾ ಸಚಿವ ವಿಜ್ಪ್ರತಿ ಟ್ವೀಟ್ ಮಾಡಿ, ಸಾರ್ವಜನಿಕವಾಗಿ ಹೀಗೆ ಪೋಸ್ಟ್ ಮಾಡುವ ಮುನ್ನ ಕ್ರೀಡಾ ಇಲಾಖೆಯಿಂದ ಈ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯಬೇಕಿತ್ತು. ದೇಶದಲ್ಲಿಯೇ ಅತಿದೊಡ್ಡ ಪುರಸ್ಕಾರ ನೀಡುತ್ತಿರುವ ರಾಜ್ಯ ಸರ್ಕಾರಕ್ಕೆ ಹೀಗೆ ಛೇಡಿಸುವುದು ಸರಿಯಲ್ಲ. ಆಗಿನ ಅಧಿಸೂಚನೆ ಹಾಗೂ ನಾನೇ ಮಾಡಿದ್ದ ಟ್ವೀಟ್ನಂತೆ ಭಾಕರ್ 2 ಕೋಟಿ ಪಡೆಯಲಿದ್ದಾರೆ ಎಂದಿದ್ದಾರೆ.
'ಆಟಗಾರರಿಗೆ ಶಿಸ್ತು ಇರಬೇಕು. ಭಾಕರ್ ಇನ್ನೂ ತುಂಬಾ ಸಾಧನೆ ಮಾಡುವುದಿದೆ. ಆಟದತ್ತ ಹೆಚ್ಚು ಗಮನ ಕೊಡಲಿ. ಈಗ ಉಂಟುಮಾಡಿರುವ ವಿವಾದಕ್ಕೆ ಆಕೆ ಕ್ಷಮೆಯಾಚಿಸಬೇಕು' ಎಂದು ಅನಿಲ್ ವಿಜ್ ಆಗ್ರಹಿಸಿದ್ದಾರೆ.
ಹರ್ಯಾಣದ ಮುಖ್ಯಮಂತ್ರಿ ಮನೋಹರ್ಲಾಲ್ ಕಟ್ಟರ್ ಸಹ ಈ ವಿವಾದಲ್ಲಿ ಮಧ್ಯೆಪ್ರವೇಶಿಸಿ ಭಾಕರ್ನಡವಳಿಕೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇಲಾಖೆ ನೀತಿಯಂತೆ ಭಾಕರ್ ನಗದು ಪುರಸ್ಕಾರ ಪಡೆಯಲಿದ್ದಾರೆ. ಆದರೆ ಈ ರೀತಿ ಟ್ವೀಟ್ ಮಾಡುವುದು ಸರಿಯಲ್ಲ ಎಂದಿದ್ದಾರೆ.