ನೆಟ್ಟಕಲ್ಲಪ್ಪ ಈಜು ಕೇಂದ್ರದ (ಎನ್ಎಸಿ) ಆಶ್ರಯದಲ್ಲಿ ನವೆಂಬರ್ 12 ಹಾಗೂ 13 ರಂದು ಬೆಂಗಳೂರಿನಲ್ಲಿ 'ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು ಚಾಂಪಿಯನ್ಷಿಪ್' ಆಯೋಜಿಸಲಾಗಿದ್ದು, ನಗದು ಬಹುಮಾನ ಮತ್ತು ಸ್ಪರ್ಧೆಯಲ್ಲಿ ಹೊಸ ಮಾದರಿಯನ್ನು ಪರಿಚಯಿಸಲಾಗಿದೆ.
ಈಜುಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ನಗರದಲ್ಲಿ 2012 ರಲ್ಲಿ ಎನ್ಎಸಿ ಆರಂಭಿಸಲಾಗಿದೆ. ಈಜು ಕೇಂದ್ರದ ದಶಮಾನೋತ್ಸವ ಆಚರಣೆ ಅಂಗವಾಗಿ ಈಗ ಕೂಟ ಆಯೋಜಿಸಲಾಗುತ್ತಿದೆ ಎಂದು ಕೇಂದ್ರದ ಮುಖ್ಯಸ್ಥ ಡಾ.ವರುಣ್ ನಿಜಾವನ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಂದ ಮಾತ್ರವಲ್ಲದೆ ಹರಿಯಾಣ, ಗುಜರಾತ್ ಮತ್ತು ಪಶ್ಚಿಮ ಬಂಗಾಳದಿಂದಲೂ ಈಜುಪಟುಗಳು ಭಾಗವಹಿಸಲಿದ್ದಾರೆ. ಕರ್ನಾಟಕದ 100ಕ್ಕೂ ಅಧಿಕ ಸ್ಪರ್ಧಿಗಳು ಸೇರಿದಂತೆ 255 ಈಜುಪಟುಗಳು ಈ ಆಹ್ವಾನಿತ ಕೂಟದಲ್ಲಿ ಭಾಗವಹಿಸುವರು ಎಂದು ಮಾಹಿತಿ ನೀಡಿದರು.
''ಬಾಲಕ ಮತ್ತು ಬಾಲಕಿಯರಿಗೆ 12 ರಿಂದ 14 ವರ್ಷ (ಗುಂಪು 2), 15 ರಿಂದ 17 ವರ್ಷ (ಗುಂಪು 1) ಹಾಗೂ 18 ವರ್ಷಕ್ಕಿಂತ ಮೇಲಿನ (ಸೀನಿಯರ್) ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಛಾಪು ಮೂಡಿಸಿರುವ ಶಿವ ಶ್ರೀಧರ್, ವೈಷ್ಣವ್ ಹೆಗ್ಡೆ, ಎಸ್.ಧನುಷ್ ಮತ್ತು ರಿಧಿಮಾ ವೀರೇಂದ್ರಕುಮಾರ್ ಅವರು ಪಾಲ್ಗೊಳ್ಳುವರು'' ಎಂದು ಡಾ.ವರುಣ್ ನಿಜಾವನ್ ತಿಳಿಸಿದ್ದಾರೆ.
''ಇಂತಹ ದೊಡ್ಡಮಟ್ಟಿನ ಕೂಟ ಆಯೋಜಿಸಿ, ಈಜು ಸ್ಪರ್ಧೆಗೆ ಹೊಸ ದಿಶೆಯನ್ನು ತೋರುವುದು ನಮ್ಮ ಉದ್ದೇಶ. ಸ್ಪರ್ಧಿಗಳನ್ನು ಪ್ರೋತ್ಸಾಹಿಸಲಿಕ್ಕಾಗಿ ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು. ಈ ಚಾಂಪಿಯನ್ಷಿಪ್ 10 ಲಕ್ಷ ರೂಪಾಯಿ ಬಹುಮಾನ ಮೊತ್ತ ಒಳಗೊಂಡಿದೆ. ಇದು ಭಾರತದಲ್ಲಿ ಖಾಸಗಿ ಈಜು ಸಂಸ್ಥೆಯೊಂದು ಆಯೋಜಿಸುವ ಅತಿದೊಡ್ಡ ಕೂಟ ಎನಿಸಿಕೊಳ್ಳಲಿದೆ'' ಎಂದು ಹೇಳಿದರು.
''ಪ್ರತಿ ವರ್ಷವೂ ಈ ಚಾಂಪಿಯನ್ಷಿಪ್ ಆಯೋಜಿಸುವುದು ನಮ್ಮ ಗುರಿ. ಮುಂದಿನ ಬಾರಿ ಅಂತರರಾಷ್ಟ್ರೀಯ ಮಟ್ಟದ ಕೂಟ ಆಯೋಜಿಸುವ ಚಿಂತನೆಯೂ ಇದೆ'' ಇದೇ ವೇಳೆಯಲ್ಲಿ ತಿಳಿಸಿದ್ದಾರೆ.
ಗೆದ್ದವರಿಗೆ 10 ಸಾವಿರ ರೂಪಾಯಿ ನಗದು ಬಹುಮಾನ
ವಿವಿಧ ವಿಭಾಗಗಳ ವಿಜೇತರಿಗೆ ಪದಕದ ಜತೆ ನಗದು ಬಹುಮಾನ ಲಭಿಸಲಿದೆ. ಪ್ರತಿ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆಯುವವರು ಕ್ರಮವಾಗಿ ತಲಾ 10 ಸಾವಿರ, 7 ಸಾವಿರ ಹಾಗೂ 5 ಸಾವಿರ ರೂಪಾಯಿ ನಗದು ಬಹುಮಾನ ಪಡೆಯಲಿದ್ದಾರೆ.
ಸ್ಕಿನ್ಸ್ ಮಾದರಿ ಸ್ಪರ್ಧೆಯಲ್ಲಿ ಮೊದಲ ಎಂಟು ಸ್ಥಾನ ಪಡೆಯುವವರಿಗೆ 6,000 ರೂಪಾಯಿಯಿಂದ 500 ರೂಪಾಯಿ ವರೆಗಿನ ನಗದು ಬಹುಮಾನ ದೊರೆಯಲಿದೆ.