
ಭಾನುವಾರ ರಾತ್ರಿ ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ ಪಂದ್ಯದ ಬಳಿಕ ನಡೆದ ಘಟನೆಯೊಂದು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು. ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ರೋಚಕ ಗೆಲುವಿನ ಬಳಿಕ ಅಭಿಮಾನಿಗಳಂತೆ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕುಣಿದು ಕುಪ್ಪಳಿಸಿದ್ದರು.
ಏಷ್ಯಾ ಕ್ರಿಕೆಟ್ ಕೌನ್ಸಿಲ್ ಇತರೆ ಸದಸ್ಯರಂತೆ ಜಯ್ ಶಾ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಕಾಣಿಸಿಕೊಂಡಿದ್ರು. ಈ ಹೈವೋಲ್ಟೇಜ್ ಕದನದಲ್ಲಿ ಭಾರತ ಗೆಲುವು ಸಾಧಿಸುತ್ತಿದ್ದಂತೆ ಭಾರತೀಯ ಅಭಿಮಾನಿಗಳು ಸಂಭ್ರಮದಿಂದ ಸಂಭ್ರಮಿಸಿದರು.
ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರು ರಾಷ್ಟ್ರೀಯ ಧ್ವಜಗಳನ್ನು ಬೀಸಿದರು ಮತ್ತು ವಂದೇ ಮಾತರಂ ಅನ್ನು ಸಾಮೂಹಿಕವಾಗಿ ಹಾಡಿ ಭಾರತದ ವಿಜಯವನ್ನು ಆಚರಿಸಿದರು. ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ ಅಧ್ಯಕ್ಷರಾಗಿ ಇತರ ಕ್ರಿಕೆಟ್ ಮಂಡಳಿಯ ಅಧಿಕಾರಿಗಳೊಂದಿಗೆ ಪಂದ್ಯವನ್ನು ವೀಕ್ಷಿಸಿದ ಜೈ ಶಾ ಕೂಡ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಆಟಗಾರರನ್ನು ಚಪ್ಪಾಳೆಯೊಂದಿಗೆ ಸ್ವಾಗತಿಸಲಾಯಿತು. ಇದೇ ವೇಳೆ ಭಾರತದ ವ್ಯಕ್ತಿಯೊಬ್ಬರು ಜೈ ಶಾಗೆ ರಾಷ್ಟ್ರಧ್ವಜ ನೀಡಲು ಯತ್ನಿಸಿದ್ದಾರೆ. ಇದನ್ನು ಜಯ್ ಶಾ ನಯವಾಗಿ ತಿರಸ್ಕರಿಸಿದರು. ಆದರೆ ಇದೆಲ್ಲವೂ ಟಿವಿ ಕ್ಯಾಮೆರಾಗಳಲ್ಲಿ ಸೆರೆ ಆಗಿದ್ದು, ಈ ವಿಡಿಯೋಗಳು ವೈರಲ್ ಆಗಿವೆ.
ಬಿಜೆಪಿ ವಿರೋಧಿಗಳು ಈ ವಿಡಿಯೋವನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಟೀಕೆ ಮಾಡುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ರಾಷ್ಟ್ರಧ್ವಜ ಹಿಡಿದಿರಲಿಲ್ಲ. ರಾಷ್ಟ್ರಪ್ರೇಮ ಎಂದು ಕೊಂಡಾಡುವ ಬಿಜೆಪಿ ಪ್ರಮುಖ ನಾಯಕರೇ ಮಗನೇ ಹೀಗೆ ಅಲ್ಲಗೆಳೆಯಬಹುದೇ ಎಂದೆಲ್ಲಾ ಸಾಕಷ್ಟು ಟೀಕೆಗಳಿಗೆ ಕಾರಣವಾಗಿದೆ. ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ಟೀಕಿಸಿದ್ದಾರೆ.
ಇನ್ನು ಜಯ್ ಶಾ ಜಾಗದಲ್ಲಿ ಬೇರೆ ಯಾರಾದರೂ ಗಲಾಟೆ ಮಾಡುತ್ತಿದ್ದರು, ಅಮಿತ್ ಶಾ ಅವರ ಮಗ ಎಂಬ ಕಾರಣಕ್ಕೆ ಜೈ ಷಾ ಬದುಕುಳಿದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಆದ್ರೆ ಜೈ ಶಾ ರಾಷ್ಟ್ರಧ್ವಜವನ್ನು ತೆಗೆದುಕೊಳ್ಳದಿದ್ದರ ಹಿಂದೆ ಬಲವಾದ ಕಾರಣವಿತ್ತು. ಅವರು ಪಂದ್ಯಕ್ಕೆ ಹಾಜರಾಗಿದ್ದು ಬಿಸಿಸಿಐ ಕಾರ್ಯದರ್ಶಿಯಾಗಿ ಅಲ್ಲ, ಆದರೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿ. ಆ ಕ್ರಮದಲ್ಲಿ ಅವರು ಭಾರತೀಯ ಧ್ವಜವನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಇದನ್ನು ಅರಿತು ಟೀಕಿಸಬೇಕು ಎಂದು ಅವರ ಆಪ್ತರು, ಅಭಿಮಾನಿಗಳು ತಿರುಗೇಟು ನೀಡಿದ್ದಾರೆ. ಒಟ್ಟಿನಲ್ಲಿ ಭಾರತ-ಪಾಕ್ ರೋಚಕ ಪಂದ್ಯಕ್ಕಿಂತಲೂ, ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಚರ್ಚೆಗೆ ಗ್ರಾಸವಾಗಿದ್ದು ನಿಜಕ್ಕೂ ಬೇಸರದ ಸಂಗತಿ.