ಏಷ್ಯಾ ಕಪ್ 2023ರಲ್ಲಿ ಭಾಗವಹಿಸಲು ಭಾರತ ತಂಡ ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಭೇಟಿ ನೀಡುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಜಯ್ ಶಾ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಬಹ್ರೇನ್ನಲ್ಲಿ ನಡೆದ ಎಸಿಸಿ ಸಭೆಯಲ್ಲಿ ಜಯ್ ಶಾ ತಮ್ಮ ನಿರ್ಧಾರವನ್ನು ಬದಲಾಯಿಸುಯುದಿಲ್ಲ ಎಂದು ಹೇಳಿದ್ದಾರೆ. ಜಯ್ ಶಾ ಮಾತಿಗೆ ಉರಿದು ಬಿದ್ದಿರುವ ಪಿಸಿಬಿ ಅಧ್ಯಕ್ಷ ನಜಂ ಸೇಥಿ ಒಂದು ವೇಳೆ ಭಾರತ ಏಷ್ಯಾಕಪ್ನಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ಬರದಿದ್ದರೆ, ಪಾಕಿಸ್ತಾನ ತಂಡ ಕೂಡ ಏಕದಿನ ವಿಶ್ವಕಪ್ಗಾಗಿ ಭಾರತಕ್ಕೆ ಬರಲ್ಲ ಎಂದು ಹೇಳಿದ್ದಾರೆ.
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
ನಜಂ ಸೇಥಿ ಮಾತಿಗೆ ಉತ್ತರ ನೀಡಿರುವ ಜಯ್ ಶಾ, ಐಸಿಸಿ ಮತ್ತು ಎಸಿಸಿ ಪಂದ್ಯಾವಳಿಗಳನ್ನು ಮಿಶ್ರಣ ಮಾಡಬೇಡಿ ಎಂದು ಹೇಳಿದ್ದಾರೆ. ಮೂಲಗಳ ಪ್ರಕಾರ, ಏಷ್ಯಾಕಪ್ 2023 ಪಾಕಿಸ್ತಾನದಿಂದ ಹೊರಹೋಗುವುದು ಖಚಿತವಾಗಿದೆ.
ಈ ಬಾರಿಯೂ ಯುಎಇಯಲ್ಲಿ ಏಷ್ಯಾಕಪ್ ಟೂರ್ನಿ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಮಾರ್ಚ್ ತಿಂಗಳಿನಲ್ಲಿ ಈ ಬಗ್ಗೆ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ.
"ಎಸಿಸಿ ಸಭೆಯಲ್ಲಿ ಸಾಕಷ್ಟು ಉದ್ವಿಗ್ನತೆ ಉಂಟಾಯಿತು. ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಜಯ್ ಶಾ ಜೊತೆ ಅನುಚಿತವಾಗಿ ವರ್ತಿಸಿದರು. ಪಾಕಿಸ್ತಾನ ತಂಡ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎನ್ನುವ ಬೆದರಿಕೆಯೊಡ್ಡಲು ನೋಡಿದರು ಎಂದು ಹೇಳಿದರು. ಆದರೆ, ಜಯ್ ಶಾ ಮಾತ್ರ ನಯವಾಗಿಯೇ ಎಸಿಸಿ ಮತ್ತು ಐಸಿಸಿಯನ್ನು ಮಿಶ್ರಣ ಮಾಡಬೇಡಿ ಎಂದರು" ಎಂದು ಎಸಿಸಿ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ಸಭೆಯಲ್ಲಿ ಚರ್ಚಿಸಿ ಹೊಸ ಸ್ಥಳದ ಬಗ್ಗೆ ತೀರ್ಮಾನ
2023ರ ಏಷ್ಯಾಕಪ್ ಟೂರ್ನಿಯನ್ನು ಎಲ್ಲಿ ನಡೆಸಬೇಕು ಎನ್ನುವ ಅಂತಿಮ ತೀರ್ಮಾನವನ್ನು ಮುಂದಿನ ತಿಂಗಳು ನಡೆಯಲಿರುವ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಇದು ಕೇವಲ ಔಪಚಾರಿಕ ತೀರ್ಮಾನವಾಗಲಿದ್ದು, ಟೂರ್ನಿಯನ್ನು ಈಗಾಗಲೇ ಪಾಕಿಸ್ತಾನದಿಂದ ಸ್ಥಳಾಂತರಿಸಿ ಯುಎಇಯಲ್ಲಿ ನಡೆಸುವ ಬಗ್ಗೆ ತೀರ್ಮಾನವಾಗಿದೆ.
"ಏಷ್ಯಾಕಪ್ 100 ಪ್ರತಿಶತ ಪಾಕಿಸ್ತಾನದಿಂದ ಸ್ಥಳಾಂತರವಾಗುತ್ತದೆ. ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಎಲ್ಲಾ ಸದಸ್ಯರು ಬಿಸಿಸಿಐ ಸಮಸ್ಯೆಯನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ಬಿಸಿಸಿಐ ಪರವಾಗಿದ್ದಾರೆ" ಎಂದು ಎಸಿಸಿ ಅಧಿಕಾರಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಬಾಂಬ್ ದಾಳಿಗಳು ಹೆಚ್ಚಾಗುತ್ತಿರುವುದು ಅಲ್ಲಿನ ಭದ್ರತಾ ವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮಾಡಿದೆ.