ಬರ್ಮಿಂಗ್ ಹ್ಯಾಮ್, ಜೂನ್ 1: ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಹಿನ್ನೆಲೆಯಲ್ಲಿ ಗುರುವಾರ ಇಲ್ಲಿನ ಎಡ್ಗ್ ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ಅಭ್ಯಾಸ ನಡೆಸಿದ ಟೀಂ ಇಂಡಿಯಾ ಅಲ್ಲಿನ ಕೆಲವು ಅನಾನುಕೂಲತೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಚ್ ಅನಿಲ್ ಕುಂಬ್ಳೆ ಹಾಗೂ ನಾಯಕ ಕೊಹ್ಲಿ, ಕಿರಿದಾದ ಮೈದಾನವನ್ನು ಅಭ್ಯಾಸಕ್ಕಾಗಿ ನೀಡಿರುವುದರಿಂದ ಕಟ್ಟುನಿಟ್ಟಾದ ಅಭ್ಯಾಸ ನಡೆಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಅಸಲಿಗೆ, ಟೀಂ ಇಂಡಿಯಾಕ್ಕೆ ಎಡ್ಗ್ ಬಾಸ್ಟ್ ನ ಮೈದಾನದ ಪಕ್ಕದಲ್ಲಿ ಇರುವ, ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ ಇರುವ ಪುಟ್ಟದೊಂದು ಮೈದಾನದಲ್ಲಿ ಅಭ್ಯಾಸಕ್ಕೆ ಅನುವು ಮಾಡಿಕೊಡಲಾಗಿತ್ತು.
ಆದರೆ, ಅದು ತೀರಾ ಪುಟ್ಟ ಮೈದಾನವಾಗಿದ್ದರಿಂದ ವೇಗಿಗಳಾದ ಉಮೇಶ್ ಯಾದವ್, ಮೊಹಮ್ಮದ್ ಶಮಿ ಹಾಗೂ ಹಾರ್ದಿಕ್ ಪಾಂಡ್ಯ ಅವರಿಗೆ ಉತ್ತಮವಾಗಿ ಅಭ್ಯಾಸ ನಡೆಸಲು ಸಾಧ್ಯವಾಗಲಿಲ್ಲ. ಏಕೆಂದರೆ, ವೇಗಿಗಳಿಗೆ ಚೆಂಡು ಎಸೆಯುವ ಮುನ್ನ ಓಡಿ ಬರಲು ಸುಮಾರು 30 ಯಾರ್ಡ್ ಗಳ ಸ್ಥಳವಾದರೂ ಇರಬೇಕು. ಹಾಗಾಗಿ, ಆ ಪುಟ್ಟ ಮೈದಾನದಲ್ಲಿ ಅವರಿಗೆ ಸರಿಯಾಗಿ ಓಡಿ ಬಂದು ನಿರೀಕ್ಷಿತ ವೇಗದಲ್ಲಿ ಚೆಂಡು ಎಸೆಯಲು ಸಾಧ್ಯವಾಗಲಿಲ್ಲ.
ಹಾಗಾಗಿ, ಇಲ್ಲಿ ಅಭ್ಯಾಸ ನಡೆಸಿದರೂ ಅದು ವ್ಯರ್ಥ ಎಂಬ ತೀರ್ಮಾನಕ್ಕೆ ಬಂದ ಟೀಂ ಇಂಡಿಯಾ, ತಂಡಗಳ ಅಭ್ಯಾಸದ ಜವಾಬ್ದಾರಿ ಹೊಣೆ ಹೊತ್ತಿರುವ ವಾರ್ವಿಕ್ ಶೈರ್ ಗೆ ಮೊರೆಯಿಟ್ಟು, ತನಗೆ ಬದಲಿ ಮೈದಾನ ನೀಡುವಂತೆ ಕೇಳಿಕೊಂಡಿತು. ಆದರೆ, ಆ ಕ್ಷಣಕ್ಕೆ ಅದು ಸಾಧ್ಯವಾಗಲಿಲ್ಲ. ಇದು ಟೀಂ ಇಂಡಿಯಾ ನಾಯಕ ಕೊಹ್ಲಿ, ಕೋಚ್ ಕುಂಬ್ಳೆಗೆ ಬೇಸರ ತರಿಸಿತು.
ಮುಖ್ಯ ಕ್ರೀಡಾಂಗಣದಲ್ಲಿ ಶುಕ್ರವಾರದ ತಮ್ಮ ಪಂದ್ಯಕ್ಕಾಗಿ ಅಭ್ಯಾಸ ನಡೆಸುತ್ತಿದ್ದ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ತಂಡಗಳಿಗೆ ಜಾಗ ಕಲ್ಪಿಸಲಾಗಿತ್ತು. ಹಾಗಾಗಿ, ಟೀಂ ಇಂಡಿಯಾಕ್ಕೆ ಅಲ್ಲಿ ಅಭ್ಯಾಸಕ್ಕೆ ಜಾಗ ಸಿಗಲಿಲ್ಲ.