
ಮೌಂಟ್ ಮೌಂಗನುಯಿ ಬೇ ಓವಲ್ ಮೈದಾನದಲ್ಲಿ ಭಾನುವಾರ (ನವೆಂಬರ್ 20) ನಡೆದ ಎರಡನೇ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ 65 ರನ್ಗಳಿಂದ ಭರ್ಜರಿ ಜಯ ಗಳಿಸಿತು ಮತ್ತು ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಈ ಪಂದ್ಯದಲ್ಲಿ ಭಾರತದ ಸ್ಫೋಟಕ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ 51 ಎಸೆತಗಳಲ್ಲಿ 11 ಬೌಂಡರಿ ಮತ್ತು 7 ಸಿಕ್ಸರ್ಗಳ ಸಮೇತ ಅಜೇಯ 111 ರನ್ ಗಳಿಸುವ ಮೂಲಕ ಬ್ಯಾಟಿಂಗ್ ಪರಾಕ್ರಮ ಮುಂದುವರೆಸಿದರು.
ಇದೇ ವೇಳೆ ನ್ಯೂಜಿಲೆಂಡ್ ವಿರುದ್ಧ ಸೂರ್ಯಕುಮಾರ್ ಯಾದವ್ ಅವರ ಅದ್ಭುತ ಶತಕ ಮತ್ತು ಬಲಿಷ್ಠ ಬೌಲಿಂಗ್ ಪಡೆಯ ವಿರುದ್ಧ ಅವರ ಬ್ಯಾಟಿಂಗ್ ಪ್ರದರ್ಶನವನ್ನು ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ಹಾಡಿ ಹೊಗಳಿದರು.
ಪಂದ್ಯದ ನಂತರ ಮಾತನಾಡಿದ ಟಿಮ್ ಸೌಥಿ, ಸೂರ್ಯಕುಮಾರ್ ಯಾದವ್ ವಿವಿಧ ಭಂಗಿಯಲ್ಲೂ ಚೆಂಡನ್ನು ಬಾರಿಸಬಲ್ಲರು ಮತ್ತು ಎರಡನೇ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿದರು ಎಂದು ತಿಳಿಸಿದರು.
"ಸೂರ್ಯಕುಮಾರ್ ಯಾದವ್ ಕಳೆದ 12 ತಿಂಗಳುಗಳಿಂದ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿಯೂ ಅವರು ಮಿಂಚುತ್ತಿದ್ದಾರೆ. ಅವರು ಇಂದು ಅತ್ಯಂತ ಪ್ರಭಾವಶಾಲಿ ಬ್ಯಾಟಿಂಗ್ ಪ್ರದರ್ಶನದೊಂದಿಗೆ ತಮ್ಮ ಕೌಶಲ್ಯ ತೋರಿಸಿದರು,"ಎಂದು ಟಿಮ್ ಸೌಥಿ ಹೇಳಿದರು.

ಭಾರತ ತಂಡದಲ್ಲಿ ಹಲವಾರು ಶ್ರೇಷ್ಠ ಆಟಗಾರರು ಇದ್ದಾರೆ. ಅದೇ ರೀತಿ ಸೂರ್ಯಕುಮಾರ್ ಯಾದವ್ ಆ ಪಟ್ಟಿಗೆ ಸೇರಲು ಸಿದ್ಧವಾಗಿರಬೇಕು ಎಂದು ನ್ಯೂಜಿಲೆಂಡ್ ವೇಗದ ಬೌಲರ್ ಸೌಥಿ ಒತ್ತಾಯಿಸಿದರು.
"ಭಾರತದಲ್ಲಿ ಹಲವು ಶ್ರೇಷ್ಠ ಟಿ20 ಆಟಗಾರರು ಇದ್ದಾರೆ. ಸೂರ್ಯಕುಮಾರ್ ಕಳೆದ 12 ತಿಂಗಳುಗಳಿಂದ ಅದ್ಭುತವಾಗಿ ಆಡುತ್ತಿದ್ದಾನೆ. ಭಾರತವು ಟಿ20 ಸ್ವರೂಪದಲ್ಲಿ ಮಾತ್ರವಲ್ಲದೆ ಮೂರು ಸ್ವರೂಪಗಳಲ್ಲಿಯೂ ಅನೇಕ ಅದ್ಭುತ ಕ್ರಿಕೆಟಿಗರನ್ನು ತಯಾರಿಸಿದೆ. ಸುದೀರ್ಘ ಅವಧಿಯವರೆಗೆ ಆಡಿದ ಮತ್ತು ಸುದೀರ್ಘ ಅವಧಿಯಲ್ಲಿ ಇಷ್ಟು ಸಾಧನೆ ಮಾಡಿರುವ ಹಲವು ಆಟಗಾರರನ್ನು ಭಾರತ ಪಡೆದಿದೆ," ಎಂದು ಕಿವೀಸ್ ವೇಗಿ ಟಿಮ್ ಸೌಥಿ ಅಭಿಪ್ರಾಯಪಟ್ಟರು.
ಭಾರತದ ಬ್ಯಾಟಿಂಗ್ ಇನ್ನಿಂಗ್ಸ್ನಲ್ಲಿ ಟಿಮ್ ಸೌಥಿ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದರು. ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಸತತ ಮೂರು ಬಾಲ್ಗಳಲ್ಲಿ ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು.
ಹ್ಯಾಟ್ರಿಕ್ ಪಡೆದಿದ್ದು ಅದೃಷ್ಟ
"ನಾನು ಕೊನೆಯ ಓವರ್ನಲ್ಲಿ ಸ್ವಲ್ಪ ಅದೃಷ್ಟಶಾಲಿಯಾಗಿದ್ದೆ. ಡೆತ್ ಓವರ್ ಬೌಲಿಂಗ್ ಮಾಡುವುದು ಒಂದು ಸಂತೋಷದ ಭಾವನೆ. ಆದರೆ ಇಂದು ಅದು ವಿಭಿನ್ನವಾಗಿತ್ತು, ಇದು ಆಟದ ಭಾಗವಾಗಿದೆ," ಎಂದು ಟಿಮ್ ಸೌಥಿ ತಿಳಿಸಿದರು.