
ಕೊರೊನಾ ವೈರಸ್ ವಿರುದ್ಧದ ಹೋರಾಟವನ್ನು ನಡೆಸಲು ಭಾರತ ಮತ್ತು ಪಾಕಿಸ್ತಾನ ಒಟ್ಟಾಗಿ ಹೋರಾಡಬೇಕು, ಇದಕ್ಕಾಗಿ ಹಣ ಸಂಗ್ರಹಣೆಯನ್ನು ಮಾಡಲು ಭಾರತ ಪಾಕಿಸ್ಥಾನ ಸರಣಿಯನ್ನು ಆಯೋಜನೆ ಮಾಡಬೇಕು ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಭಾರತವನ್ನು ಮನವಿ ಮಾಡಿಕೊಂಡಿದ್ದರು.
ಪಾಕಿಸ್ತಾನದ ಮಾಜಿ ವೇಗಿಯ ಈ ಪ್ರಸ್ತಾಪಕ್ಕೆ ಭಾರತದ ಮಾಜಿ ನಾಯಕ ಕಪಿಲ್ ದೇವ್ ಖಡಕ್ ಉತ್ತರವನ್ನು ನೀಡಿದ್ದಾರೆ. ಸಧ್ಯಕ್ಕೆ ಕ್ರಿಕೆಟ್ಅನ್ನು ನಿರೀಕ್ಷೆ ಮಾಡಲು ಸಾಧ್ಯವೇ ಇಲ್ಲ, ಭಾರತಕ್ಕೆ ಈಗ ಹಣದ ಅವಶ್ಯಕತೆಯಿಲ್ಲ ಮತ್ತು ಕ್ರಿಕೆಟ್ಗೋಸ್ಕರ ಪ್ರಾಣವನ್ನು ಪಣಕ್ಕಿಡುವ ಅವಶ್ಯಕತೆಯಿಲ್ಲ ಎಂದು ಕಪಿಲ್ ದೇವ್ ಪ್ರತಿಕ್ರಿಯಿಸಿದ್ದಾರೆ.
ಶೋಯೆಬ್ ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ನಮಗೆ ಹಾಗೆ ಹಣ ಸಂಗ್ರಹಣೆ ಮಾಡುವ ಅವಶ್ಯಕತೆಯಿಲ್ಲ. ನಮ್ಮಲ್ಲಿ ಸಾಕಷ್ಟು ಆರ್ಥಿಕ ಸಂಪನ್ಮೂಲಗಳಿವೆ ಎಂದು ಕಪಿಲ್ ದೇವ್ ಹೇಳಿದ್ದಾರೆ. ನಮಗೆ ಈ ಬಿಕ್ಕಟ್ಟನ್ನು ಎದುರಿಸಲು ನಮ್ಮ ಅಧಿಕಾರಿಗಳು ಹೇಗೆ ಒಟ್ಟಾಗಿ ಕೆಲಸ ಮಾಡುತ್ತಾರೆ ಎಂಬುದು ಇದೀಗ ಮುಖ್ಯವಾಗಿದೆ ಎಂದಿದ್ದಾರೆ.
ಬಿಸಿಸಿಐ ಈಗಾಗಲೆ 50 ಕೋಟಿಯ ನೆರವನ್ನು ಸರ್ಕಾರಕ್ಕೆ ನೀಡಿದೆ. ಅವಶ್ಯಕತೆಯಿದ್ದರೆ ಮತ್ತಷ್ಟು ನೆರವನ್ನು ನೀಡಲು ಸಾಧ್ಯವಿದೆ. ಅದಕ್ಕಾಗಿ ನಿಧಿ ಸಂಗ್ರಹಣೆಯಲ್ಲಿ ತೊಡಗಿಸಿಕೊಳ್ಳಬೇಕಾಗಿಲ್ಲ. ಯಾವಾಗ ಬೇಕಾದರು ಪರಿಸ್ಥಿತಿ ಹತೋಟಿಗೆ ಬರಬಹುದು. ಆದರೆ ನಿಧಿ ಸಂಗ್ರಹಣೆಗಾಗಿ ಕ್ರಿಕೆಟ್ ಆಯೋಜಿಸಿ ಆಟಗಾರರ ಜೀವವನ್ನು ತೊಂದರೆಗೆ ಸಿಲುಕಿಸುವ ಅವಶ್ಯಕತೆಯಿಲ್ಲ ಎಂದು ಕಪಿಲ್ ದೇವ್ ಹೇಳಿದ್ದಾರೆ.
ಪರಿಸ್ಥಿತಿ ಸಂಪೂರ್ಣವಾಗಿ ಹತೋಟಿಗೆ ಬರುವವರೆಗೆ ಕ್ರಿಕೆಟ್ ಬಗ್ಗೆ ಯೋಚಿಸಲು ಸಾಧ್ಯವಿಲ್ಲ. ದೇಶಕ್ಕಿಂತ ಆಟ ದೊಡ್ಡದಲ್ಲ, ನನಗನಿಸುತ್ತದ ಮುಂದಿನ ಆರು ತಿಂಗಳು ಕ್ರಿಕೆಟ್ ಬಗ್ಗೆ ಯೋಚಿಸಲು ಸಾಧ್ಯವೇ ಇಲ್ಲ ಎಂದು 1983ರ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ 61 ವರ್ಷದ ಕಪಿಲ್ ದೇವ್ ಖಡಕ್ಕಾಗಿ ಹೇಳಿಕೆಯನ್ನು ನೀಡಿದ್ದಾರೆ.