ಭಾರತಕ್ಕೆ ಕೊಹ್ಲಿಯೇ ಭರವಸೆ
ಮೊದಲ ಇನ್ನಿಂಗ್ಸ್ನಲ್ಲಿ ಅದ್ಭುತ ಶತಕ ಗಳಿಸಿದ್ದ ಕೊಹ್ಲಿ, ಎರಡನೆಯ ಇನ್ನಿಂಗ್ಸ್ನಲ್ಲಿಯೂ ತಂಡಕ್ಕೆ ನೆರವಾಗಿದ್ದಾರೆ. ಅವರ ಜತೆಯಲ್ಲಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಆತ್ಮವಿಶ್ವಾಸದಿಂದ ಆಡುತ್ತಿರುವುದು ಭಾರತಕ್ಕೆ ಗೆಲುವಿನ ಆಸೆ ಚಿಗುರಿಸಿದೆ.
ಆದರೆ, ತಂಡದ ಭಾರ ಹೆಚ್ಚಿರುವುದು ಕೊಹ್ಲಿ ಮೇಲೆ. 43 ರನ್ ಗಳಿಸಿರುವ ಕೊಹ್ಲಿ ಬಾಕಿ ಉಳಿದಿರುವ ಗುರಿಯನ್ನು ತಲುಪವವರೆಗೂ ಕ್ರೀಸ್ನಲ್ಲಿದ್ದರೆ ಮಾತ್ರ ತಂಡಕ್ಕೆ ಗೆಲುವು ಎನ್ನುವ ಪರಿಸ್ಥಿತಿ ಇದೆ. ಹೀಗಾಗಿ ಅವರ ಮೇಲೆ ಒತ್ತಡ ಹೆಚ್ಚಿದೆ.
ದಿನೇಶ್ ಕಾರ್ತಿಕ್ ಮತ್ತು ಹಾರ್ದಿಕ್ ಪಾಂಡ್ಯ ಉತ್ತಮವಾಗಿ ಬ್ಯಾಟಿಂಗ್ ಮಾಡಬಲ್ಲವರಾದರೂ ಅವರನ್ನು ನೆಚ್ಚಿಕೊಳ್ಳುವಂತಿಲ್ಲ. ಹೀಗಾಗಿ ಇನ್ನೊಂದು ತುದಿಯಲ್ಲಿ ಆಟಗಾರ ವಿಕೆಟ್ ಒಪ್ಪಿಸದಂತೆ ಆತ್ಮವಿಶ್ವಾಸ ತುಂಬಿ ರನ್ ಪೇರಿಸುವ ಜವಾಬ್ದಾರಿ ಕೊಹ್ಲಿ ಮೇಲಿದೆ.
ಇಂಗ್ಲೆಂಡಲ್ಲಿ ಮೊದಲ ಶತಕ ಬಾರಿಸಿ, ಕೊಹ್ಲಿ ಮಾಡಿದ ಸಾಧನೆಗಳು
ಅಡಿಲೇಡ್ ಟೆಸ್ಟ್ ಮೆಲುಕು
2014ರಲ್ಲಿ ಅಡಿಲೇಡ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಪಂದ್ಯವನ್ನು ಇದು ನೆನಪಿಸುತ್ತಿದೆ. ಎರಡೂ ಇನ್ನಿಂಗ್ಸ್ಗಳಲ್ಲಿ ಕೊಹ್ಲಿ ಶತಕ ಗಳಿಸಿದ್ದರು. ಆದರೆ ನಾಲ್ಕನೆಯ ಇನ್ನಿಂಗ್ಸ್ನಲ್ಲಿ 363 ರನ್ಗಳ ಗುರಿಯನ್ನು ತಲುಪುವುದು ಭಾರತಕ್ಕೆ ಸಾಧ್ಯವಾಗಿರಲಿಲ್ಲ.
ಆ ಪಂದ್ಯವನ್ನು ಭಾರತ ಕೇವಲ 48 ರನ್ಗಳಿಂದ ಸೋತಿತ್ತು. ಮುರಳಿ ವಿಜಯ್ ಹೊರತುಪಡಿಸಿ ಉಳಿದ ಯಾವ ಬ್ಯಾಟ್ಸ್ಮನ್ನಿಂದಲೂ ಕೊಹ್ಲಿಗೆ ಸೂಕ್ತ ಬೆಂಬಲ ದೊರಕಿರಲಿಲ್ಲ.
ಇಂಗ್ಲೆಂಡ್ ವಿರುದ್ಧದ ತಮ್ಮ ಮೊದಲ ಇನ್ನಿಂಗ್ಸ್ ಶತಕವನ್ನು ಕೊಹ್ಲಿ ಅಡಿಲೇಡ್ ಪಂದ್ಯದ ಶತಕಕ್ಕೆ ಹೋಲಿಸಿದ್ದರು. ಇಲ್ಲಿ ಗೆಲುವಿನ ಗುರಿ ಚಿಕ್ಕದಾಗಿದ್ದರೂ ಸವಾಲು ದೊಡ್ಡಾಗಿಯೇ ಇದೆ.
ಈ ಪಂದ್ಯದಲ್ಲಿಯೂ ಮೇಲಿನ ಕ್ರಮಾಂಕದ ಯಾವ ಆಟಗಾರನೂ ಇಂಗ್ಲೆಂಡ್ ವೇಗಿಗಳನ್ನು ಎದುರಿಸುವ ಸ್ಥೈರ್ಯ ಪ್ರದರ್ಶಿಸಿಲ್ಲ. ಹೀಗಾಗಿ ಕೊಹ್ಲಿಗೆ ತಕ್ಕೆ ಸಾಥ್ ನೀಡುವ ಹೊಣೆ ದಿನೇಶ್ ಕಾರ್ತಿಕ್ ಮೇಲಿದೆ. ಇಬ್ಬರೂ ಮುರಿಯದ ಆರನೇ ವಿಕೆಟ್ಗೆ 32 ರನ್ಗಳ ಜತೆಯಾಟ ನೀಡಿದ್ದಾರೆ.
ಇಂಗ್ಲೆಂಡ್ ಬೌಲಿಂಗ್ ಬಲ
ಭಾರತದ ಗೆಲುವಿನ ಕನಸಿಗೆ ಅಡ್ಡಿಪಡಿಸಲು ಇಂಗ್ಲೆಂಡ್ ಬೌಲರ್ಗಳು ಕಠಿಣ ಪ್ರಯತ್ನ ನಡೆಸಿದ್ದಾರೆ. ಆಂಡರ್ಸನ್, ಸ್ಟುವರ್ಟ್ ಬ್ರಾಡ್, ಬೆನ್ ಸ್ಟೋಕ್ಸ್ ಮತ್ತು ಸ್ಯಾಮ್ ಕುರ್ರನ್ ಅವರ ಬೆಂಕಿ ಚೆಂಡಿನಂತಹ ಎಸೆತಗಳನ್ನು ತಣ್ಣಗಾಗಿಸಲು ಹೆಚ್ಚಿನ ತಾಳ್ಮೆ ಮತ್ತು ಏಕಾಗ್ರತೆ ಅಗತ್ಯವಾಗಿದೆ.
ನಾಲ್ಕನೆ ದಿನದ ಆರಂಭದ ಕೆಲವು ಓವರ್ಗಳಲ್ಲಿ ವಿಕೆಟ್ ಕಾಯ್ದುಕೊಳ್ಳುವುದರತ್ತ ಗಮನ ಹರಿಸುವುದು ಅಗತ್ಯವಾಗಿದೆ. ಇದುವರೆಗೂ ಬೌಲರ್ಗಳಿಗೆ ನೆರವು ನೀಡಿರುವ ಪಿಚ್, ನಾಲ್ಕನೆಯ ದಿನ ಹೇಗೆ ವರ್ತಿಸುತ್ತದೆ ಎಂದು ನೋಡಬೇಕು.
'ಕನಸಿನೊಂದಿಗೆ ಮಲಗುತ್ತೇನೆ'
ಇದು ವಿರಾಟ್ ಕೊಹ್ಲಿ-ಜೇಮ್ಸ್ ಆಂಡರ್ಸನ್ ಮೈದಾನದ ಕದನದ ಕಾಲ. ಮೊದಲ ಟೆಸ್ಟ್ನಲ್ಲಿ ಕೊಹ್ಲಿ ವಿಕೆಟ್ ಪಡೆಯಲು ವಿಫಲರಾಗಿದ್ದ ಆಂಡರ್ಸನ್, ಎರಡನೆಯ ಇನ್ನಿಂಗ್ಸ್ನಲ್ಲಿ ಅದಕ್ಕೆ ಶತಪ್ರಯತ್ನ ನಡೆಸಿದ್ದಾರೆ. ಕೊಹ್ಲಿ ವಿಕೆಟ್ ಪಡೆದರೆ ಪಂದ್ಯ ಗೆದ್ದಂತೆಯೇ ಎಂಬ ಅನಿಸಿಕೆ ಇಂಗ್ಲೆಂಡ್ ತಂಡದಲ್ಲಿದೆ.
ನಾಲ್ಕನೆ ದಿನದ ಆಟದಲ್ಲಿ ಕೊಹ್ಲಿ ವಿಕೆಟ್ ಪಡೆದಂತೆ ಕನಸು ಕಾಣುತ್ತಲೇ ಹಾಸಿಗೆಯತ್ತ ಹೋಗುವುದಾಗಿ ಜೇಮ್ಸ್ ಆಂಡರ್ಸನ್ ಶುಕ್ರವಾರದ ಆಟದ ಬಳಿಕ ಹೇಳಿದ್ದರು.
'ನಮಗೆ ಐದು ವಿಕೆಟ್ಗಳು ಬೇಕು. ಅದನ್ನು ಬೇಗನೆ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಅವರು ರನ್ ಬಾರಿಸುತ್ತಾರೆ. ಶನಿವಾರದ ಬೆಳಿಗ್ಗೆ 15-20 ಓವರ್ಗಳಲ್ಲಿ ನಾವು ಎಲ್ಲ ರೀತಿ ಪ್ರಯತ್ನಗಳನ್ನು ನಡೆಸಬೇಕು. ಇಲ್ಲಿ ಏನನ್ನೂ ಉಳಿಸಬಾರದು. ಇದು ನಿಜಕ್ಕೂ ಎಕ್ಸೈಟಿಂಗ್ ಆಗಿದೆ. ಏಕೆಂದರೆ ಈ ಪಂದ್ಯವನ್ನು ಗೆಲ್ಲುವ ಮೂಲಕ ನಾವು ವಿಶೇಷವಾದುದ್ದನ್ನು ಸಾಧಿಸಬಹುದು. ಅಷ್ಟು ಜಿದ್ದಾಜಿದ್ದಿನ ಪಂದ್ಯ ಇದು ಎಂದು ಆಂಡರ್ಸನ್ ಹೇಳಿದ್ದಾರೆ.
ಸ್ಯಾಮ್ ಕುರ್ರನ್ ವಿಶ್ವಾಸ
ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲಿಯೂ ಭಾರತಕ್ಕೆ ಆಘಾತ ನೀಡಿರುವ ಸ್ಯಾಮ್ ಕುರ್ರನ್, ಪಂದ್ಯ ಈಗ ಎರಡೂ ಕಡೆ ಸಮವಾಗಿದೆ ಎಂದಿದ್ದಾರೆ.
60 ರನ್ಗೆ 5 ವಿಕೆಟ್ ಕಿತ್ತಾಗ ನಾವೇ ಗೆಲ್ಲುತ್ತೇವೆ ಎಂದು ಹೇಳುವಷ್ಟು ಭರವಸೆ ಮೂಡಿತ್ತು. ಆದರೆ, ಈಗಲೂ ಅಲ್ಲಿ ಬ್ಯಾಟ್ ಮತ್ತು ಬಾಲ್ ಎರಡಕ್ಕೂ ಗೆಲುವು ತಂದುಕೊಡುವ ಅವಕಾಶವಿದೆ. ನಾವು ಕೊಹ್ಲಿಯನ್ನು ಬೇಗನೆ ಔಟ್ ಮಾಡಬೇಕಿದೆ. ಆದರೆ, ಗೆಲ್ಲಲು ಉಳಿಯುವ ಇನ್ನೂ ನಾಲ್ಕು ವಿಕೆಟ್ಗಳನ್ನು ಪಡೆಯಬೇಕು ಎನ್ನುವುದನ್ನು ಮರೆಯುವಂತಿಲ್ಲ. ಮೊದಲ ಒಂದು ಗಂಟೆ ಅತ್ಯಂತ ಮಹತ್ವದ್ದಾಗಿದೆ. ಆರಂಭದಲ್ಲಿಯೇ ಒಂದೆರಡು ವಿಕೆಟ್ ಕಿತ್ತರೆ ಖಂಡಿತಾ ನಾವು ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.