
ಡಿಆರ್ಎಸ್ ವಿಚಾರವಾಗಿ ವಿಕೆಟ್ ಕೀಪರ್ ನಿರ್ಧಾರ ಮುಖ್ಯ
ಕ್ರಿಕೆಟ್ನಲ್ಲಿ ಅಂಪಾಯರ್ ನೀಡಿರುವ ತೀರ್ಪನ್ನು ಮರುಪರಿಶೀಲನೆಗೆ ಮೂರನೇ ಮೊರೆ ಹೋಗುವ ಅವಕಾಶ ಬಹಳ ಕಾಲದಿಂದ ಇದೆ. ಸದ್ಯ ಇದು ಕ್ರಿಕೆಟ್ನ ಅವಿಭಾಜ್ಯ ಅಂಗವಾಗಿದೆ. ಆದರೆ ಹೀಗೆ ಯಾವುದೇ ತಂಡ ಅಂಪಾಯರ್ ನೀಡಿದ ತೀರ್ಪನ್ನು ಪ್ರಶ್ನಿಸಿ ಡಿಆರ್ಎಸ್ ಮೊರೆ ಹೋಗಲು ತಂಡದ ನಾಯಕನಿಗೆ ಅಂಥಾ ಆತ್ಮವಿಶ್ವಾಸ ಬೇಕಾಗಿರುತ್ತದೆ. ಅದಕ್ಕೆ ಇಂಥಾ ಸಂದರ್ಭದಲ್ಲಿ ಬ್ಯಾಟರ್ನ ಅತ್ಯಂತ ಸನಿಹದಲ್ಲಿರುವ ವಿಕೆಟ್ ಕೀಪರ್ನ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ. ಬಹುತೇಕ ಸಂದರ್ಭದಲ್ಲಿ ವಿಕೆಟ್ ಕೀಪರ್ನ ನಿರ್ಧಾರದ ಮೇಲೆಯೇ ನಾಯಕರು ಡಿಆರ್ಎಸ್ ಮೊರೆ ಹೋಗುತ್ತಾರೆ.

ಗೊಂದಲ ಮೂಡಿಸುತ್ತಿರುವ ಡಿಕೆ
ಆದರೆ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದಿನೇಶ್ ಕಾರ್ತಿಕ್ ಡಿಆರ್ಎಸ್ ವಿಚಾರವಾಗಿ ನಾಯಕನಿಗೆ ಗೊಂದಲ ಮೂಡಿಸುತ್ತಿರುವುದು ಪದೇಪದೇ ಸ್ಪಷ್ಟವಾಗಿತ್ತಿದೆ. ಡಿಆರ್ಎಸ್ ವಿಚಾರವಾಗಿ ದಿನೇಶ್ ಕಾರ್ತಿಕ್ ಮತ್ತೆ ಮತ್ತೆ ತಪ್ಪು ಸಲಹೆಗಳನ್ನು ನೀಡುತ್ತಿರುವುದು ನಾಯಕನಿಗೆ ಗೊಂದಲ ಮೂಡಿಸುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಇಂಥಾ ಎರಡು ಪ್ರಸಂಗಗಳು ನಡೆದಿರುವುದು ಗಮನಿಸಬೇಕಾದ ಅಂಶ. ಈ ವಿಚಾರವಾಗಿ ನಾಯಕ ರೋಹಿತ್ ಶರ್ಮಾ ಮೈದಾನದಲ್ಲಿಯೇ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದ್ದರು.

ಏಷ್ಯಾ ಕಪ್ನಲ್ಲಿಯೂ ಪದೇ ಗೊಂದಲ
ಇನ್ನು ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರಿಂದಾಗಿ ಡಿಆರ್ಎಸ್ ವಿಚಾವಾಗಿ ಗೊಂದಲವುಂಡಾಗಿರುವುದು ಮೊದಲೇನಲ್ಲ. ಈ ಹಿಂದೆಯೂ ಸಾಕಷ್ಟು ಸಂದರ್ಭಗಳ್ಲಲಿ ಉಂಟಾಗಿತ್ತು. ಅದರಲ್ಲಿ ಕಳೆದ ಏಷ್ಯಾ ಕಪ್ನಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಮತ್ತೊಂದು ಉದಾಹರಣೆ. ಅಲ್ಲೂ ಎರಡು ಸಂದರ್ಭಗಳಲ್ಲಿ ದಿನೇಶ್ ಕಾರ್ತಿಕ್ ಅವರಿಂದ ಬಲವಾದ ಮನವಿ ಬಂದಿರಲೇ ಇಲ್ಲ. ಚೆಂಟು ಬ್ಯಾಟ್ಗೆ ಸವರಿದ ವಿಚಾರವಾಗಿ ದಿನೇಶ್ ಕಾರ್ತಿಕ್ ಅಲ್ಲೂ ಎಡವಟ್ಟು ಮಾಡಿಕೊಂಡಿದ್ದರು. ಅಭಿಮಾನಿಗಳು ಕಿಕ್ಕಿರುವುದು ಸೇರಿದ ಸಂದರ್ಭದಲ್ಲಿ ಶಬ್ದಗಳು ಕಿರುಚಾಟಗಳು ಜೋರಾಗಿದ್ದ ಸಂದರ್ಭದಲ್ಲಿ ಹೀಗಾಗುವುದು ಸಹಜ ಎನಿಸಿದರೂ ದಿನೇಶ್ ಕಾರ್ತಿಕ್ ವಿಚಾರದಲ್ಲಿ ಮತ್ತೆ ಮತ್ತೆ ಎಡವಟ್ಟಾಗುತ್ತಿರುವುದು ನಾಯಕನ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆ.

ಡಿಕೆಗೆ ಇದೇ ಮುಳುವಾಗುತ್ತಾ?
ಇತ್ತೀಚಿನ ದಿನಗಳಲ್ಲಿ ಫಿನಿಷರ್ ಆಗಿ ಅದ್ಭುತವಾಗಿ ಪ್ರದರ್ಶನ ನೀಡುತ್ತಾ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ದಿನೇಶ್ ಕಾರ್ತಿಕ್ ವಿಶ್ವಕಪ್ನಲ್ಲಿ ಪ್ರಮುಖ ಪಾತ್ರ ನಿಭಾಯಿಸುವ ವಿಶ್ವಾಸ ಅಭಿಮಾನಿಗಳಲ್ಲಿದೆ. ಇತ್ತೀಚೆಗೆ ಅವರು ನೀಡುತ್ತಿರುವ ಪ್ರದರ್ಶನ ಅದಕ್ಕೆ ಕಾರಣವಾಗಿದೆ. ಆದರೆ ಡಿಆರ್ಎಸ್ ವಿಚಾರವಾಗಿ ಡಿಕೆಯಿಂದ ಉಂಟಾಗುತ್ತಿರುವ ಗೊಂದಲ ವಿಶ್ವಕಪ್ನಲ್ಲಿ ಆಡುವ ಬಳಗದಲ್ಲಿ ಸ್ಥಾನ ಉಳಿಸಿಕೊಳ್ಳಲು ಹಿನ್ನಡೆಯುಂಟಾಗಬಹುದಾ ಎಂಬುದು ಕೂಡ ಪ್ರಶ್ನೆಯಾಗಿದೆ. ಬ್ಯಾಟಿಂಗ್ನಲ್ಲಿ ರಿಷಭ್ ಪಂತ್ ಪರಿಣಾಮಕಾರಿಯಾಗದ ಕಾರಣ ದಿನೇಶ್ ಕಾರ್ತಿಕ್ ಅವರನ್ನೇ ಆಡುವ ಬಳಗದಲ್ಲಿ ಉಳಿಸಿಕೊಳ್ಳಲು ಸಾಕಷ್ಟು ಅಭಿಪ್ರಾಯಗಳು ಬರುತ್ತಿದೆ. ಹೀಗಾಗಿ ಡಿಆರ್ಎಸ್ ವಿಚಾರವಾಗಿ ಅನುಭವಿಯೂ ಆಗಿರುವ ದಿನೇಶ್ ಕಾರ್ತಿಕ್ ಅವರಿಂದ ತಂಡ ಮತ್ತಷ್ಟು ಹೆಚ್ಚು ನಿರೀಕ್ಷೆಯನ್ನಿಟ್ಟುಕೊಂಡಿದೆ.


Click it and Unblock the Notifications
