ಲೀಡ್ಸ್, ಆಗಸ್ಟ್ 23: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯದತ್ತ ಈಗ ಎಲ್ಲರ ಚಿತ್ತ ನೆಟ್ಟಿದೆ. ಲಾರ್ಡ್ಸ್ ಟೆಸ್ಟ್ನ ನಂತರ ಸುದೀರ್ಘ ವಿರಾಮದ ಬಳಿಕ ಎರಡು ತಂಡಗಳು ಕೂಡ ಮೂರನೇ ಟೆಸ್ಟ್ ಪಂದ್ಯವನ್ನಾಡಲು ಲೀಡ್ಸ್ಗೆ ಬಂದಿಳಿದಿವೆ. ಹೆಡಿಂಗ್ಲೆ ಮೈದಾನದಲ್ಲಿ ಮೂರನೇ ಪಂದ್ಯ ನಡೆಯಲಿದ್ದು ಎರಡನು ತಂಡಗಳು ಕೂಡ ಕಠಿಣ ಅಭ್ಯಾಸವನ್ನು ಆರಂಭಿಸಿದೆ.
ಮೂರನೇ ಟೆಸ್ಟ್ ಪಂದ್ಯ ಆಗಸ್ಟ್ 25 ಬುಧವಾರದಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಈಗ ಅಂತಿಮ ಹಂತದ ಸಿದ್ಧತೆಯನ್ನು ನಡೆಸುತ್ತಿದ್ದು ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಹಿತ ಎಲ್ಲಾ ಆಟಗಾರರು ಕೂಡ ಈ ಮೂರನೇ ಪಂದ್ಯಕ್ಕಾಗಿ ಭಾನುವಾರದಿಂದ ನೆಟ್ ಅಭ್ಯಾಸವನ್ನು ಆರಂಭಿಸಿದ್ದು ಬೆವರಿಳಿಸುತ್ತಿದ್ದಾರೆ.
ಟೀಮ್ ಇಂಡಿಯಾದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಈ ಬಾರಿಯ ಇಂಗ್ಲೆಂಡ್ ಪ್ರವಾಸದಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿದ್ದು ಲಾರ್ಡ್ಸ್ ಟೆಸ್ಟ್ನಲ್ಲಿ ಶತಕವನ್ನು ಕೂಡ ಸಿಡಿಸಿ ಮಿಂಚಿದ್ದಾರೆ. ಈಗ ಮೂರನೇ ಟೆಸ್ಟ್ನಲ್ಲಿಯೂ ಕೂಡ ಮತ್ತೊಂದು ಅ್ಮರಣೀಯ ಇನ್ನಿಂಗ್ಸ್ ಕಟ್ಟುವ ವಿಶ್ವಾಸದಲ್ಲಿದ್ದಾರೆ. ಹೀಗಾಗಿ ಅಭ್ಯಾಸದ ಸಂದರ್ಭದಲ್ಲಿ ಹೆಚ್ಚು ತಲ್ಲೀನವಾಗಿ ಸಿದ್ಧತೆಯನ್ನು ನಡೆಸುತ್ತಿದ್ದಾರೆ.
ಐಪಿಎಲ್ 2021: ಬೆಂಗಳೂರಿನಲ್ಲಿ ಕ್ವಾರಂಟೈನ್ ಆರಂಭಿಸಿದ ಆರ್ಸಿಬಿ-ವಿಡಿಯೋ
ಇನ್ನು ಟೀಮ್ ಇಂಡಿಯಾದ ಅನುಭವಿ ಆಟಗಾರ ಆರ್ ಅಶ್ವಿನ್ ಕೂಡ ಹೆಡಿಂಗ್ಲೆ ಅಂಗಳದಲ್ಲಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರು. ಇಶಾಂತ್ ಶರ್ಮಾ, ರವೀಂದ್ರ ಜಡೇಜಾ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್ ಜೊತೆಗೆ ತಾಲೀಮಿನಲ್ಲಿ ತೊಡಗಿಸಿಕೊಂಡಿದ್ದರು. ಆರ್ ಅಶ್ವಿನ್ ಈ ಬಾರಿಯ ಸರಣಿಯ ಆರಂಭಿಕ ಎರಡು ಪಂದ್ಯಗಳಿಂದಲೂ ಹೊರಗುಳಿದಿದ್ದರು. ಹೀಗಾಗಿ ಮೂರನೇ ಟೆಸ್ಟ್ನಲ್ಲಿ ಆರ್ ಅಶ್ವಿನ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಆದರೆ ಆರ್ ಅಶ್ವಿನ್ಗಾಗಿ ಯಾರು ಸ್ಥಾನವನ್ನು ಬಿಟ್ಟುಕೊಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಈ ಬಾರಿಯ ಸರಣಿಯಲ್ಲಿ ಭಾರತ ಆಡಿದ ಮೊದಲ ಎರಡು ಪಂದ್ಯಗಳಲ್ಲಿಯೂ ನಾಲ್ಕು ವೇಗಿ ಹಾಗೂ ಓರ್ವ ಸ್ಪಿನ್ನರ್ ಮೂಲಕ ಕಣಕ್ಕಿಳಿದಿತ್ತು. ಈ ರಣತಂತ್ರ ತಂಡಕ್ಕೆ ಯಶಸ್ಸನ್ನು ಕೂಡ ನೀಡಿದೆ. ಇದೇ ಮಾದರಿ ಮೂರನೇ ಟೆಸ್ಟ್ಗೂ ಮುಂದುವರಿಯುತ್ತಾ ಅಥವಾ ಇಬ್ಬರು ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿಯುತ್ತಾ ಭಾರತ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಇನ್ನು ಭಾನುವಾರ ಟೀಮ್ ಇಂಡಿಯಾದ ಸದಸ್ಯರು ಅಭ್ಯಾಸ ನಡೆಸಿದ ಫೋಟೋಗಳನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಲಾರ್ಡ್ಸ್ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಜಯವನ್ನು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಕಳೆದುಕೊಳ್ಳುವ ಭೀತಿಯಲ್ಲಿದ್ದ ಪಂದ್ಯದಲ್ಲಿ ಒಂದು ಸೆಶನ್ನಲ್ಲಿ ನೀಡಿದ ಪ್ರದರ್ಶನ ಇಡೀ ಪಂದ್ಯವನ್ನು ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಲು ಸಾಧ್ಯವಾಗಿಸಿತ್ತು. ಐದನೇ ದಿನದಾಟದಲ್ಲಿ ಭಾರತ ಸವಾಲಿನ ಮೊತ್ತವನ್ನು ಗಳಿಸಬೇಕಾದರೆ ರಿಷಬ್ ಪಂತ್ ತಂಡದ ಪರವಾಗಿ ಅದ್ಭುತ ಪ್ರದರ್ಶನವನ್ನು ನೀಡುವ ನಿರೀಕ್ಷೆಯಿಟ್ಟುಕೊಳ್ಳಲಾಗಿತ್ತು. ಆದರೆ ಪಂತ್ ಕೊನೆಯ ದಿನ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಆದರೆ ಬಳಿಕ ಜಸ್ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಶಮಿ ಬ್ಯಾಟಿಂಗ್ ಮೂಲಕ ಅದ್ಭುತ ಪ್ರದರ್ಶನ ನೀಡಿದರು. ಮುರಿಯದ ಈ ಜೋಡಿ 9ನೇ ವಿಕೆಟ್ಗೆ 89 ರನ್ಗಳ ಜೊತೆಯಾಟವನ್ನು ನೀಡಿತ್ತು. ಈ ಮೂಲಕ ಭಾರತ 271 ರನ್ಗಳ ಬೃಹತ್ ಸವಾಲನ್ನು ನೀಡಿತ್ತು.
ಬಳಿಕ ಟೀಮ್ ಇಂಡಿಯಾ ಬೌಲಿಂಗ್ನಲ್ಲಿಯೂ ಅಮೋಘ ಪ್ರದರ್ಶನ ನೀಡುವ ಮೂಲಕ ಎದುರಾಳಿ ಬ್ಯಾಟ್ಸ್ಮನ್ಗಳಿಗೆ ಅವಕಾಶವನ್ನೇ ನೀಡಲಿಲ್ಲ. ಮೊಹಮ್ಮದ್ ಸಿರಾಜ್ ಹಾಗೂ ಜಸ್ಪ್ರೀತ್ ಬೂಮ್ರಾ ಎರಡನೇ ಇನ್ನಿಂಗ್ಸ್ನಲ್ಲಿ ಅಬ್ಬರಿಸುವ ಮೂಲಕ ಇಂಗ್ಲೆಂಡ್ ತಂಡ 120 ರನ್ಗಳಿಗೆ ಆಲೌಟ್ ಆಗುವಂತಾಯಿತು. ಈ ಮೂಲಕ ವಿರಾಟ್ ಪಡೆ 151 ರನ್ಗಳ ಅಮೋಘ ಜಯ ಸಾಧಿಸಿದ್ದು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗ 1-0 ಮುನ್ನಡೆಯಲ್ಲಿದೆ.