ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ಗಳ ಗೆಲುವನ್ನ ಸಾಧಿಸಿದೆ. ಟೀಂ ಇಂಡಿಯಾದ ಹೊಸ ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ ಹಾಗೂ ಹೋಸ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತವು ಶುಭಾರಂಭ ಮಾಡಿದೆ.
ನ್ಯೂಜಿಲೆಂಡ್ ನೀಡಿದ 165 ರನ್ಗಳ ಗುರಿಯನ್ನ ಬೆನ್ನತ್ತಿದ ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಕೆ.ಎಲ್ ರಾಹುಲ್ ಭರ್ಜರಿ ಆರಂಭವನ್ನು ನೀಡಿದ್ರು. ರೋಹಿತ್ , ರಾಹುಲ್ ಪವರ್ಪ್ಲೇ ಓವರ್ಗಳಲ್ಲಿ ಸ್ಫೋಟಕ ಆರಂಭ ನೀಡಿದರ ಪರಿಣಾಮ ಟೀಂ ಇಂಡಿಯಾ 4.5 ಓವರ್ಗಳಲ್ಲಿ 50 ರನ್ಗಳ ಗಡಿ ಮುಟ್ಟಿತು.
ಆದ್ರೆ ಈ ಉತ್ತಮ ಆರಂಭಕ್ಕೆ ಮಿಚೆಲ್ ಸ್ಯಾಂಟ್ನರ್ ಬ್ರೇಕ್ ಹಾಕಿದ್ರು. ಎಡಗೈ ಸ್ಪಿನ್ನರ್ ಸ್ಯಾಂಟ್ನರ್ ಸ್ಪೆಲ್ನ ಮೊದಲ ಎಸೆತದಲ್ಲೇ ಕೆ.ಎಲ್ ರಾಹುಲ್ ಚಾಪ್ಮನ್ಗೆ ಕ್ಯಾಚಿತ್ತು 15 ರನ್ಗೆ ಪೆವಿಲಿಯನ್ ಸೇರಿಕೊಂಡ್ರು.
ತದನಂತರ 2ನೇ ವಿಕೆಟ್ ಜೊತೆಯಾದ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಕಿವೀಸ್ ಬೌಲರ್ಗಳನ್ನು ಬೆಂಡೆತ್ತಿದ್ರು. ಸೂರ್ಯಕುಮಾರ್ ಯಾದವ್ ತಮ್ಮ ನೈಜ ಬ್ಯಾಟಿಂಗ್ ಪ್ರದರ್ಶನದ ಮೂಲಕ ತಂಡಕ್ಕೆ ನೆರವಾದ್ರೆ, ರೋಹಿತ್ ಶರ್ಮಾ ಅರ್ಧಶತಕ್ಕೆ ಎರಡು ರನ್ ಬಾಕಿ ಇರುವಂತೆ ಟ್ರೆಂಟ್ ಬೌಲ್ಟ್ ಬೌಲಿಂಗ್ನಲ್ಲಿ ಸುಲಭ ಕ್ಯಾಚಿತ್ತು ವಿಕೆಟ್ ಒಪ್ಪಿಸಿದ್ರು. 36 ಎಸೆತಗಳಲ್ಲಿ 48 ರನ್ಗಳಿಸಿ ಇನ್ನಿಂಗ್ಸ್ ಮುಗಿಸಿದ ರೋಹಿತ್ ಇನ್ನಿಂಗ್ಸ್ನಲ್ಲಿ ಎರಡು ಭರ್ಜರಿ ಸಿಕ್ಸರ್ ಮತ್ತು ಐದು ಬೌಂಡರಿಗಳಿದ್ದವು.
ಇನ್ನು ಒನ್ಡೌನ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಯಾದವ್ ನ್ಯೂಜಿಲೆಂಡ್ ಬೌಲರ್ಗಳನ್ನ ಸುಲಭವಾಗಿ ಎದುರಿಸಿದ್ರು. 40 ಎಸೆತಗಳಲ್ಲಿ 62 ರನ್ ದಾಖಲಿಸಿದ್ರು. 155 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಯಾದವ್ ಮೂರು ಸ್ಫೋಟಕ ಸಿಕ್ಸರ್ಗಳು ಮತ್ತು ಆರು ಬೌಂಡರಿಗಳಿದ್ವು. ಉತ್ತಮವಾಗೇ ಆಡ್ತಿದ್ದ ಸೂರ್ಯಕುಮಾರ್ ಟ್ರೆಂಟ್ ಬೌಲ್ಟ್ಗೆ ವಿಕೆಟ್ ಒಪ್ಪಿಸಿದ್ರು.
ಕನಸು ನನಸಾಗಿಸಿಕೊಂಡ ಆಲ್ರೌಂಡರ್ ವೆಂಕಟೇಶ್ ಅಯ್ಯರ್: ಟಿ20 ಕ್ರಿಕೆಟ್ಗೆ ಪದಾರ್ಪಣೆ
ಗೆಲುವಿನ ಬಳಿ ಸಮೀಪಿಸಿದ್ದ ಭಾರತವು ಕೊನೆಯ ಓವರ್ಗಳಲ್ಲಿ ರನ್ಗಳಿಸಲು ತಡಬಡಾಯಿಸಿತು. ಶ್ರೇಯಸ್ ಅಯ್ಯರ್ 5 ರನ್ಗಳಿಸಿ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿದ್ರು. ಕೊನೆಯ ಓವರ್ನಲ್ಲಿ 10 ರನ್ಗಳ ಅವಶ್ಯಕತೆಯಿತ್ತು. ಚೊಚ್ಚಲ ಟಿ20 ಪಂದ್ಯವನ್ನಾಡಿದ ವೆಂಕಟೇಶ್ ಅಯ್ಯರ್ ಒಂದು ಬೌಂಡರಿ ದಾಖಲಿಸಿ ಭರವಸೆ ಮೂಡಿಸಿದ್ರು ಸಹ ನಂತರದ ಎಸೆತದಲ್ಲೇ ರಿವರ್ಸ್ ಸ್ವೀಪ್ ಮಾಡಲು ಹೋಗಿ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡ್ರು.
ಆದ್ರೆ ಅಂತಿಮವಾಗಿ ಕ್ರೀಸ್ನಲ್ಲಿದ್ದ ರಿಷಭ್ ಪಂತ್ ಬೌಂಡರಿ ಸಿಡಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ರು. ಟೀಮ್ ಇಂಡಿಯಾ ಎರಡು ಎಸೆತ ಬಾಕಿ ಇರುವಂತೆಯೇ ಐದು ವಿಕೆಟ್ಗಳ ಗೆಲುವು ದಾಖಲಿಸಿತು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಪರ ಓಪನರ್ ಮಾರ್ಟಿನ್ ಗಪ್ಟಿಲ್ ಮತ್ತು ಡೇರಿಲ್ ಮಿಚೆಲ್ ಕಣಕ್ಕಿಳಿದ್ರು. ಆದ್ರೆ ಮೊದಲ ಓವರ್ನಲ್ಲಿ ಟೀಮ್ ಇಂಡಿಯಾ ಪರ ಭುವನೇಶ್ವರ್ ಕುಮಾರ್ ತಮ್ಮ ಇನ್ಸ್ವಿಂಗ್ ಮೂಲಕ ಮೂರನೇ ಎಸೆತದಲ್ಲೇ ಮಿಚೆಲ್ರನ್ನ ಬೌಲ್ಡ್ ಮಾಡುವ ಮೂಲಕ ಪೆವಿಲಿಯನ್ಗೆ ಅಟ್ಟಿದ್ರು.
ಮೊದಲ ಓವರ್ನಲ್ಲೇ ವಿಕೆಟ್ ಉರುಳಿದ್ರು ಹೆದರದ ಗಪ್ಟಿಲ್ ನಿಧಾನಗತಿಯ ಆರಂಭ ಪಡೆದ್ರು ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ರು. 42 ಎಸೆತಗಳಲ್ಲಿ ನಾಲ್ಕು ಭರ್ಜರಿ ಸಿಕ್ಸರ್ ಮತ್ತು ಮೂರು ಆಕರ್ಷಕ ಬೌಂಡರಿಗಳೊಂದಿಗೆ 70 ರನ್ ಸಿಡಿಸಿ ಔಟಾದ್ರು.
ಮತ್ತೊಂದೆಡೆ ಗಪ್ಟಿಲ್ಗೆ ಭರ್ಜರಿ ಸಾಥ್ ನೀಡಿದ ಮಾರ್ಕ್ ಚಾಪ್ಮನ್ ಟಿ20 ಕ್ರಿಕೆಟ್ನಲ್ಲಿ ಎರಡನೇ ಅರ್ಧಶತಕ ದಾಖಲಿಸಿದ್ರು. 50 ಎಸೆತಗಳಲ್ಲಿ 63 ರನ್ ದಾಖಲಿಸಿದ ಚಾಪ್ಮನ್ ಇನ್ನಿಂಗ್ಸ್ನಲ್ಲಿ ಎರಡು ಸಿಕ್ಸರ್ ಮತ್ತು ಆರು ಬೌಂಡರಿಗಳಿದ್ವು.
ಭುವನೇಶ್ವರ್ ಕುಮಾರ್ ಒಂದೆಡೆ ತಮ್ಮ ಕ್ಲಾಸ್ ಬೌಲಿಂಗ್ ಪ್ರದರ್ಶಿಸಿದ್ರೆ, ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ತಮ್ಮ 50ನೇ ಟಿ20 ಪಂದ್ಯದಲ್ಲಿ 23ರನ್ ನೀಡಿ ಎರಡು ವಿಕೆಟ್ ಕಬಳಿಸಿದ್ರು. ರವಿಚಂದ್ರನ್ ಅಶ್ವಿನ್ 2017ರ ಬಳಿಕ ಮೊದಲ ಅಂತರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ್ದು, 65 ಪಂದ್ಯಗಳನ್ನ ಮಿಸ್ ಮಾಡಿಕೊಂಡ ಬಳಿಕ ಕಂಬ್ಯಾಕ್ ಪಂದ್ಯದಲ್ಲೇ ಮಿಂಚಿದ್ದಾರೆ.
ಇನ್ನು ಫಾರ್ಮ್ ವೈಫಲ್ಯದಿಂದ ಬಳಲುತ್ತಿದ್ದ ಸ್ವಿಂಗ್ ಬೌಲರ್ ಭುವಿ 4 ಓವರ್ಗಳಲ್ಲಿ 24 ರನ್ ನೀಡಿ ಎರಡು ವಿಕೆಟ್ ಕಬಳಿಸಿದ್ದಾರೆ. ಆದ್ರೆ ತಂಡದ ಪರ ದುಬಾರಿಯಾದ ದೀಪಕ್ ಚಹಾರ್ ನಾಲ್ಕು ಓವರ್ಗಳಲ್ಲಿ 42 ರನ್ ನೀಡಿ ಒಂದು ವಿಕೆಟ್ ಪಡೆದ್ರು. ಇನ್ನು ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ತನ್ನದಾಗಿಸಿಕೊಂಡ್ರು. ಅಕ್ಷರ್ ಪಟೇಲ್ ವಿಕೆಟ್ ಇಲ್ಲದೆ 31 ರನ್ ನೀಡಿದ್ದಾರೆ.
ಈ ಪಂದ್ಯದ ಗೆಲುವಿನ ಮೂಲಕ ಶುಭಾರಂಭ ಮಾಡಿದ ಭಾರತ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ1-0 ಮುನ್ನಡೆ ಸಾಧಿಸಿದೆ.