ಮೂರು ಟಿ20 ಪಂದ್ಯಗಳ ಚುಟುಕು ಕ್ರಿಕೆಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ ಜಾರ್ಖಂಡ್ನ ರಾಂಚಿಯ ಜೆಎಸ್ಸಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ. ಈ ಮೂಲಕ ನಾಯಕ ರೋಹಿತ್ ಶರ್ಮಾ ಸತತ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದಿದ್ದಾರೆ.
ಟೀಮ್ ಇಂಡಿಯಾದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಕೇವಲ ಒಂದು ಬದಲಾವಣೆ ಆಗಿದ್ದು ಬೌಲರ್ ಮೊಹಮ್ಮದ್ ಸಿರಾಜ್ ಬದಲಿಗೆ ಹರ್ಷಲ್ ಪಟೇಲ್ ಚೊಚ್ಚಲ ಟಿ20 ಅಂತರಾಷ್ಟ್ರೀಯ ಪಂದ್ಯವನ್ನಾಡಲಿದ್ದಾರೆ.ಇನ್ನು ನ್ಯೂಜಿಲೆಂಡ್ ತಂಡದಲ್ಲಿ ಮೂರು ಆಟಗಾರರ ಬದಲಾವಣೆ ಆಗಿದೆ. ಆ್ಯಡಮ್ ಮಿಲ್ನೆ, ಜೇಮ್ಸ್ ನೀಶಮ್ ಮತ್ತು ಇಶ್ ಸೋಧಿ ತಂಡಕ್ಕೆ ಮರಳಿದ್ದಾರೆ. ಲ್ಯುಕಿ ಫರ್ಗುಸನ್, ರಚಿನ್ ರವೀಂದ್ರ ಮತ್ತು ಆ್ಯಷ್ಲೆ ತಂಡದಿಂದ ಹೊರಬಿದ್ದಿದ್ದಾರೆ.
ಟೀಂ ಇಂಡಿಯಾ ಪ್ಲೇಯಿಂಗ್ 11:
ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷಲ್ ಪಟೇಲ್
ನ್ಯೂಜಿಲೆಂಡ್ ಪ್ಲೇಯಿಂಗ್ 11:
ಮಾರ್ಟಿನ್ ಗಪ್ಟಿಲ್, ಡೇರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ (ನಾಯಕ), ಆಡಮ್ ಮಿಲ್ನೆ, ಟ್ರೆಂಟ್ ಬೌಲ್ಟ್
ಮೊದಲ ಪಂದ್ಯದಲ್ಲಿ ಈಗಾಗಲೇ ಶುಭಾರಂಭ ಮಾಡಿರುವ ಟೀಮ್ ಇಂಡಿಯಾ ಈ ಪಂದ್ಯವನ್ನು ಗೆದ್ದು ಸರಣಿಯನ್ನು ವಶಕ್ಕೆ ಪಡೆಯುವ ಲೆಕ್ಕಾಚಾರದಲ್ಲಿದೆ. ಅತ್ತ ನ್ಯೂಜಿಲೆಂಡ್ ತಂಡ ಸರಣಿ ಸಮಬಲಗೊಳಿಸುವ ಲೆಕ್ಕಾಚಾರದಲ್ಲಿದೆ.
ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಉತ್ತಮ ಬ್ಯಾಟಿಂಗ್ ನಡೆಸಿತ್ತು. ದೊಡ್ಡ ಮೊತ್ತವನ್ನು ಗಳಿಸುವ ಸಾಧ್ಯತೆಯೂ ಇತ್ತು. ಆದರೆ ಅಂತಿಮ ಮೂರು ಓವರ್ಗಳಲ್ಲಿ ಭಾರತೀಯ ಬೌಲರ್ಗಳ ಯಶಸ್ವಿ ಬೌಲಿಂಗ್ನಿಂದಾಗಿ 164ರನ್ಗಳಿಗೆ ಕಿವೀಸ್ ತಂಡವನ್ನ ಕಟ್ಟಿ ಹಾಕಿದ್ದು, ಭಾರತದ ಯಶಸ್ಸಿಗೆ ಕಾರಣವಾಯ್ತು.
ಇನ್ನು ಬ್ಯಾಟಿಂಗ್ನಲ್ಲಿ ನಾಯಕ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಗೆಲುವಿನ ಹಾದಿ ತಲುಪಿತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳಾದ ರಿಷಭ್ ಪಂತ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್ ರನ್ಗಳಿಸಲು ತಡಬಡಾಯಿಸಿದರು, ಭಾರತವು ಎರಡು ಎಸೆತ ಬಾಕಿ ಇರುವಂತೆ ಗೆಲುವಿನ ಮಾಲೆ ತೊಟ್ಟಿತು.
ಆದ್ರೆ ಟೀಂ ಇಂಡಿಯಾ ಮೊದಲ ಪಂದ್ಯ ಗೆದ್ದರೂ ಮಧ್ಯಮ ಕ್ರಮಾಂಕವು ಮತ್ತಷ್ಟು ಪರೀಕ್ಷೆಗೊಳಪಡಲಿದೆ. ಆರಂಭಿಕರು ವೈಫಲ್ಯಗೊಂಡರೆ ಮಧ್ಯಮ ಕ್ರಮಾಂಕವು ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸುವ ಅನಿವಾರ್ಯತೆ ಇದೆ. ಹೀಗಾಗಿ ಟೀಂ ಇಂಡಿಯಾ ದ್ವಿತೀಯ ಟಿ20 ಪಂದ್ಯದಲ್ಲಿ ಮೊದಲ ಪಂದ್ಯದಲ್ಲಿ ಕೊರತೆಗಳನ್ನ ನೀಗಿಸಿ ಆಡಲಿದ್ಯಾ ಕಾದು ನೋಡಬೇಕಿದೆ.