ನಾಯಕ ಶಿಖರ್ ಧವನ್
ಇನ್ನು ಈ ಸರಣಿ ಶಿಖರ್ ಧವನ್ ಪಾಲಿಗೂ ಮಹತ್ವದ್ದಾಗಿದೆ. ಏಕದಿನ ತಂಡದಲ್ಲಿ ಶಿಖರ್ ಧವನ್ ಖಾಯಂ ಸದಸ್ಯರಾಗಿದ್ದರು ಕೂಡ ಕೆಎಲ್ ರಾಹುಲ್ ಜೊತೆಗೆ ಆರಂಭಿಕ ಸ್ಥಾನಕ್ಕೆ ಸಾಕಷ್ಟು ಪೈಪೋಟಿ ನಡೆಸುತ್ತಿದ್ದಾರೆ. ಮೊದಲ ಆಯ್ಕೆಯ ಆರಂಭಿಕ ಆಟಗಾರನಾಗಿ ಧವನ್ ಮುಂದುವರಿಯಬೇಕಾದರೆ ಈ ಸರಣಿಯಲ್ಲಿ ಆರಂಭಿಕನಾಗಿ ತಮ್ಮ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕಾಗಿದೆ. ಟಿ20 ವಿಶ್ವಕಪ್ನಲ್ಲಿನ ಹಿನ್ನಡೆಯ ಬಳಿಕ ಮ್ಯಾನೇಜ್ಮೆಂಟ್ ಕೆಲ ಮಹತ್ವದ ಹೆಜ್ಜೆಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದ್ದು ಇಂಥಾ ಸಂದರ್ಭದಲ್ಲಿ ಶಿಖರ್ ಧವನ್ ತಮ್ಮ ಲಯವನ್ನು ಪ್ರದರ್ಶಿಸುವ ಅಗತ್ಯವಿದೆ.
ಶ್ರೇಯಸ್ ಐಯ್ಯರ್
ಶ್ರೇಯಸ್ ಐಯ್ಯರ್ ಭಾರತ ತಂಡದ ಪ್ರತಿಭಾನ್ವಿತ ಆಟಗಾರ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಅಸ್ಥಿರ ಪ್ರದರ್ಶನ ಹಾಗೂ ಬ್ಯಾಟಿಂಗ್ನಲ್ಲಿನ ಕೆಲ ನ್ಯೂನ್ಯತೆಗಳಿಂದಾಗಿ ಎದುರಾಳಿಗಳಿಗೆ ಶ್ರೇಯಸ್ ಐಯ್ಯರ್ ಸುಲಭ ತುತ್ತಾಗುತ್ತಿದ್ದಾರೆ. ಶಾರ್ಟ್ ಎಸೆತಗಳನ್ನು ಎಸೆದು ಐಯ್ಯರ್ ವಿಕೆಟ್ ಪಡೆಯುವುದು ಎದುರಾಳಿ ಬೌಲರ್ಗಳಿಗೆ ಅತ್ಯಂತ ಸುಲಭವಾಗಿಬಿಟ್ಟಿದೆ. ಈ ಸಂದರ್ಭದಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿ ಶ್ರೇಯಸ್ ಐಯ್ಯರ್ಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಮತ್ತೊಂದು ಅವಕಾಶವಾಗಿದೆ. ಈ ಅವಕಾಶವನ್ನು ಅವರು ಯಾವ ರೀತಿಯಾಗಿ ಉಪಯೋಗಿಸಲಿದ್ದಾರೆ ಎಂಬುದು ಈಗ ಇರುವ ಪ್ರಶ್ನೆ.
ಸಂಜು ಸ್ಯಾಮ್ಸನ್
ಟೀಮ್ ಇಂಡಿಯಾದ ಮತ್ತೋರ್ವ ಪ್ರತಿಭಾವಂತ ಆಟಗಾರ ಸಂಜು ಸ್ಯಾಮ್ಸನ್. ತಂಡದಲ್ಲಿ ಸ್ಥಾನವನ್ನು ಉಳಿಸಿಕೊಳ್ಳುವುದೇ ಸಂಜು ಸ್ಯಾಮ್ಸನ್ಗೆ ಇನ್ನೂ ಪ್ರಯಾಸವಾಗಿದೆ. ಸ್ಥಾನ ದೊರೆತರೂ ಆಡುವ ಬಳಗದಲ್ಲಿ ಅವಕಾಶಗಳು ದೊರೆಯುತ್ತಿಲ್ಲ. ಟಿ20 ಸರಣಿಯಲ್ಲಿಯೂ ಬೆಂಚ್ ಕಾದ ಸಂಜು ಸ್ಯಾಮ್ಸನ್ ಇದೀಗ ಏಕದಿನ ಸರಣಿಯಲ್ಲಾದರೂ ಅವಕಾಶ ದೊರೆಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಅವಕಾಶ ಸಿಕ್ಕಿದರೆ ಎರಡೂ ಕೈಗಳಿಂದ ಬಾಚಿಕೊಂಡು ಮಿಂಚಿನ ಪ್ರದರ್ಶನ ನೀಡುವ ಅನಿವಾರ್ಯತೆ ಸಂಜು ಸ್ಯಾಮ್ಸನ್ಗೆ ಇದೆ. ಇಲ್ಲವಾದರೆ ಏಕದಿನ ಮಾದರಿಯ ತಂಡದಲ್ಲಿ ಸಂಜುಗೆ ಅವಕಾಶ ಕ್ಷೀಣವಾಗುವ ಸಾಧ್ಯತೆಯಿದೆ.
ಯುಜುವೇಂದ್ರ ಚಾಹಲ್
ವೈಟ್ಬಾಲ್ ಮಾದರಿಯಲ್ಲಿ ಟೀಮ್ ಇಂಡಿಯಾದ ಪ್ರಮುಖ ಸ್ಪಿನ್ನರ್ ಎನಿಸಿಕೊಂಡಿರುವ ಯುಜುವೇಂದ್ರ ಚಾಹಲ್ಗೆ ಇತ್ತೀಚೆಗೆ ತಂಡದಲ್ಲಿ ಸ್ಥಾನ ಪಡೆಯುವುದು ಕೂಡ ಸವಾಲಾಗಿದೆ. ಟಿ20 ವಿಶ್ವಕಪ್ನ ಸ್ಕ್ವಾಡ್ನಲ್ಲಿ ಇದ್ದರು ಕೂಡ ಚಾಹಲ್ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಪಡೆದುಕೊಂಡಿರಲಿಲ್ಲ. ಮುಂದಿನ ವರ್ಷ ಏಕದಿನ ವಿಶ್ವಕಪ್ ಇರುವ ಕಾರಣ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಅಗತ್ಯವಿದೆ. ಕಿವೀಸ್ ನೆಲದಲ್ಲಿ ಮಿಂಚುಹರಿಸುವ ಮೂಲಕ ತಮ್ಮ ಅನಿವಾರ್ಯತೆ ತಂಡಕ್ಕಿದೆ ಎಂಬುದನ್ನು ಸಾಬೀತುಪಡಿಸುವ ಅವಕಾಶ ಈಗ ಯುಜುವೇಂದ್ರ ಚಾಹಲ್ಗೆ ಇದೆ.