ಆರ್ಸಿಬಿ- ಚೆನ್ನೈ ನಡುವೆ ಪಂದ್ಯ: ಹಿರಿಯರು-ಯುವಕರ ಪೈಪೋಟಿ
ಬೆಂಗಳೂರು, ಏಪ್ರಿಲ್ 24: ಈ ಬಾರಿಯ ಐಪಿಎಲ್ ಹರಾಜು ನಡೆದಾಗ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನೋಡಿದ ಅನೇಕರು ಇದು ಹಿರಿಯ ಆಟಗಾರರ ತಂಡ ಎಂದು ತಮಾಷೆ ಮಾಡಿದ್ದರು. ಟಿ20 ಎಂದರೆ ಬಿಸಿರಕ್ತದ ಯುವಕರ ಆಟ ಎಂಬ ಮಾತನ್ನು ಸುಳ್ಳಾಗಿಸಿರುವುದು ಸಿಎಸ್ಕೆ ತಂಡ. ಏಕೆಂದರೆ ಈ ತಂಡದಲ್ಲಿ 30ರ ಗಡಿ ದಾಟಿದ ಆಟಗಾರರೇ ಹೆಚ್ಚಾಗಿ ಮಿಂಚುತ್ತಿದ್ದಾರೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಬುಧವಾರ ಪರಸ್ಪರ ಮುಖಾಮುಖಿಯಾಗಲಿವೆ. ಸಾಂಪ್ರದಾಯಿಕ ಎದುರಾಳಿಗಳು ಎಂದು ಗುರುತಿಸಿಕೊಂಡಿರುವ ಈ ತಂಡಗಳ ನಡುವಿನ ಪಂದ್ಯದತ್ತ ಇಡೀ ದೇಶದ ಕ್ರಿಕೆಟ್ ಅಭಿಮಾನಿಗಳ ಗಮನ ನೆಟ್ಟಿರುವುದು ನಿಜ. ಮುಖ್ಯವಾಗಿ ಇದು ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ನಡುವಿನ ಪಂದ್ಯ ಎಂದೇ ಪರಿಗಣಿಸಲಾಗಿದೆ. ಜತೆಗೆ ಹಿರಿಯ ಆಟಗಾರರ ಸಾಮರ್ಥ್ಯ ಪ್ರದರ್ಶನದ ಮತ್ತೊಂದು ವೇದಿಕೆಯೂ ಹೌದು.

30ರ ವಯೋಮಾನ ಮೀರಿದವರು
ನಾಯಕ ಎಂ.ಎಸ್. ಧೋನಿ 36, ಸುರೇಶ್ ರೈನಾ 31, ಡ್ವೇಯ್ನ್ ಬ್ರಾವೊ 34, ಶೇನ್ ವಾಟ್ಸನ್ 36, ಅಂಬಟಿ ರಾಯುಡು 32 ವಯಸ್ಸಿನವರಾಗಿದ್ದರೆ, ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಇಮ್ರಾನ್ ತಾಹಿರ್ 39ರ ಗಡಿ ದಾಟಿದ್ದಾರೆ.
ಆದರೆ, ಇದಾವುದೂ ಚೆನ್ನೈ ತಂಡದ ಯಶಸ್ಸಿಗೆ ತೊಡಕಾಗಿಲ್ಲ. ಬದಲಾಗಿ ಹಿರಿಯ ಆಟಗಾರರು ಯುವಕರಂತೆ ಅದೇ ಹುಮ್ಮಸ್ಸಿನಲ್ಲಿ ಆಡುತ್ತಿದ್ದಾರೆ. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸದ್ಯ ಚೆನ್ನೈ ತಂಡ ಅಂಕಪಟ್ಟಿಯಲ್ಲಿ ಎರಡನೆಯ ಸ್ಥಾನದಲ್ಲಿದೆ. ಅದಕ್ಕೆ ಕಾರಣವಾಗಿರುವುದು ಈ ಹಿರಿಯ ಆಟಗಾರರ ಪ್ರದರ್ಶನ ಎನ್ನುವುದನ್ನು ನಿರಾಕರಿಸಲು ಸಾಧ್ಯವಿಲ್ಲ.

ಏಳು ಬೀಳಿನ ದಾರಿ
ಚೆನ್ನೈಗೆ ಹೋಲಿಸಿದರೆ ಆರ್ಸಿಬಿಯದ್ದು ವಿಭಿನ್ನ ಹಾದಿ. ಈ ತಂಡದಲ್ಲಿ ವಿಶ್ವದರ್ಜೆಯ ಇಬ್ಬರು ಶ್ರೇಷ್ಠ ಬ್ಯಾಟ್ಸ್ಮನ್ಗಳಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ನೋಡಲೆಂದೇ ಆರ್ಸಿಬಿ ಪಂದ್ಯ ವೀಕ್ಷಿಸುವ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ಆಗಾಗ ಪರಿಣಾಮಕಾರಿ ಬೌಲಿಂಗ್ ದಾಳಿ ನಡೆಸುವ ಲೆಗ್ಸ್ಪಿನ್ನರ್ ಯುರ್ವೇಂದ್ರ ಚಾಹಲ್ ಇದ್ದಾರೆ. ತಲಾ ಎಂಟು ವಿಕೆಟ್ ಹಂಚಿಕೊಂಡಿರುವ ಉಮೇಶ್ ಯಾದವ್ ಮತ್ತು ಕ್ರಿಸ್ ವೋಕ್ಸ್ ವೇಗದ ಬೌಲಿಂಗ್ ದಾಳಿ ಸಂಘಟಿಸುತ್ತಿದ್ದಾರೆ. ಪವರ್ ಪ್ಲೇನಲ್ಲಿ ಚುರುಕಿನ ದಾಳಿ ನಡೆಸುವ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಬಲ ತಂಡಕ್ಕಿದೆ.
ಆದರೂ ಐದು ಪಂದ್ಯದಲ್ಲಿ ಕೇವಲ ನಾಲ್ಕು ಅಂಕ ಗಳಿಸಿರುವ ಆರ್ಸಿಬಿ ಆರನೇ ಸ್ಥಾನದಲ್ಲಿ ಹೆಣಗಾಡುತ್ತಿದೆ.

ಡೆತ್ ಬೌಲಿಂಗ್ ಸಮಸ್ಯೆ
ಆರಂಭದಲ್ಲಿ ಉತ್ತಮ ದಾಳಿ ಸಂಘಟಿಸಿದರೂ ಆರ್ಸಿಬಿ ತಂಡ ಕೊನೆಯವರೆಗೂ ಅದೇ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ವಿಫಲವಾಗುತ್ತಿದೆ. ಕೊನೆಯ ನಾಲ್ಕೈದು ಓವರ್ಗಳಲ್ಲಿ ಅಧಿಕ ರನ್ ಬಿಟ್ಟುಕೊಡುತ್ತಿದೆ. ಈಗಾಗಲೇ ಎದುರಾಳಿಗಳಿಗೆ 200ಕ್ಕೂ ಅಧಿಕ ರನ್ ಬಾರಿಸಲು ಅವಕಾಶ ನೀಡಿದೆ. ಸಿಎಸ್ಕೆ ಬ್ಯಾಟ್ಸ್ಮನ್ಗಳನ್ನು ನಿಯಂತ್ರಿಸಲು ತಂತ್ರ ರೂಪಿಸದಿದ್ದರೆ, ಹಳೆಯ ಹುಲಿಗಳ ಬ್ಯಾಟ್ಗಳಿಂದ ದಂಡನೆಗೆ ಒಳಗಾಗಬೇಕಾಗುತ್ತದೆ.

ಯಾರು ಒಳಗೆ, ಯಾರು ಹೊರಗೆ?
ಆರ್ಸಿಬಿ ತಂಡದಲ್ಲಿ ಕಳೆದ ಎರಡು ಪಂದ್ಯದಲ್ಲಿ ಆಲ್ರೌಂಡರ್ ಕೋರಿ ಆಂಡರ್ಸನ್ ಅವರಿಂದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಲ್ಲಿ ನಿರೀಕ್ಷಿತ ಆಟ ಬಂದಿಲ್ಲ. ಹೀಗಾಗಿ ಅವರನ್ನು ತಂಡದಿಂದ ಕೈಬಿಟ್ಟು ಮತ್ತೊಬ್ಬ ನ್ಯೂಜಿಲೆಂಡಿಗ ಕಾಲಿನ್ ಗ್ರಾಂಡ್ಹೋಮ್ ಅವರನ್ನು ಆಡಿಸಬಹುದು. ಮಧ್ಯಮ ವೇಗಿಯಾಗಿರುವ ಗ್ರಾಂಡ್ಹೋಮ್, ಬಿರುಸಾಗಿ ರನ್ ಗಳಿಸಬಲ್ಲ ತಾಕತ್ತು ಹೊಂದಿದ್ದಾರೆ.
ಕಳೆದ ಪಂದ್ಯದಲ್ಲಿ ಅನಾರೋಗ್ಯದಿಂದ ಹೊರಗುಳಿದಿದ್ದ ಬೌಲರ್ ಇಮ್ರಾನ್ ತಾಹಿರ್ ಚೇತರಿಸಿಕೊಂಡಿದ್ದಾರೆ. ಅವರು ಹಿಂದಿನ ಪಂದ್ಯದಲ್ಲಿ ವಿಫಲರಾದ ಬ್ಯಾಟ್ಸ್ಮನ್ ಫಾಫ್ ಡು ಪ್ಲೆಸಿಸ್ ಅವರ ಸ್ಥಾನಕ್ಕೆ ಮರಳಬಹುದು.

ರನ್ ಹೊಳೆಯ ನಿರೀಕ್ಷೆ
ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಯಾವಾಗಲೂ ಬ್ಯಾಟ್ಸ್ಮನ್ ಸ್ನೇಹಿ. ತುಸು ಕಿರಿದಾಗಿರುವ ಬೌಂಡರಿಯಿಂದಾಗಿ ಬೌಲರ್ಗಳು ಹೆಚ್ಚು ದಂಡನೆಗೆ ಒಳಗಾಗಬಹುದು. ಹೀಗಾಗಿ ಸ್ಫೋಟಕ ಬ್ಯಾಟಿಂಗ್ ನಡೆಸುವ ಬ್ಯಾಟ್ಸ್ಮನ್ಗಳ ಎದುರು ಶಿಸ್ತುಬದ್ಧ ದಾಳಿ ನಡೆಸುವುದು ಉಭಯ ತಂಡಗಳ ಬೌಲರ್ಗಳ ಮೇಲಿನ ಹೊಣೆ.

ಸಂಭಾವ್ಯ ತಂಡ
ಆರ್ಸಿಬಿ: ಕ್ವಿಂಟನ್ ಡಿ ಕಾಕ್ (ಕೀಪರ್), ಮನನ್ ವೊಹ್ರಾ, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ಮನ್ದೀಪ್ ಸಿಂಗ್, ಕಾಲಿನ್ ಗ್ರಾಂಡ್ಹೋಮ್/ಕೋರಿ ಅಂಡರ್ಸನ್, ವಾಷಿಂಗ್ಟನ್ ಸುಂದರ್, ಕ್ರಿಸ್ ವೋಕ್ಸ್, ಉಮೇಶ್ ಯಾದವ್, ಮೊಹಮದ್ ಸಿರಾಜ್, ಯಜುರ್ವೇಂದ್ರ ಚಾಹಲ್.
ಸಿಎಸ್ಕೆ: ಶೇನ್ ವಾಟ್ಸನ್, ಅಂಬಟಿ ರಾಯುಡು, ಸುರೇಶ್ ರೈನಾ, ಎಂ.ಎಸ್. ಧೋನಿ (ನಾಯಕ, ಕೀಪರ್), ಸ್ಯಾಮ್ ಬಿಲ್ಲಿಂಗ್ಸ್, ರವೀಂದ್ರ ಜಡೇಜಾ, ಡ್ವೇಯ್ನ್ ಬ್ರಾವೊ, ದೀಪಕ್ ಚಾಹರ್, ಕರಣ್ ಶರ್ಮಾ, ಶಾರ್ದೂಲ್ ಠಾಕೂರ್, ಇಮ್ರಾನ್ ತಾಹಿರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications