
ಟಿ20 ವಿಶ್ವಕಪ್ನ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಮಹತ್ವದ ಟೂರ್ನಿಯಲ್ಲಿ ಭಾಗಿಯಾಗಲಿರುವ ಭಾರತೀಯ ತಂಡದ ಸದಸ್ಯರನ್ನು ಭಾರತೀಯ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿ ಇತ್ತೀಚೆಗಷ್ಟೇ ಆಯ್ಕೆ ಮಾಡಿತ್ತು. ಈ ಮೂಲಕ ಚುಟುಕು ಕ್ರಿಕೆಟ್ನ ಮಹಾ ಸಮರಕ್ಕೆ ಭಾರತೀಯ ಕ್ರಿಕೆಟ್ ತಂಡವನ್ನು ಅಂತಿಮಗೊಳಿಸಿದೆ. ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಗೆ ಹೊಸ ಜವಾಬ್ಧಾರಿಯನ್ನು ನೀಡಲಾಗಿದೆ. ಟೀಮ್ ಇಂಡಿಯಾದ ಮೆಂಟರ್ ಆಗಿ ಎಂಎಸ್ ಧೋನಿಯನ್ನು ಘೋಷಿಸಿದೆ. ಇದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿಯನ್ನು ಮೂಡಿಸಿದೆ.
ಬಿಸಿಸಿಐನ ಈ ನಿರ್ಧಾರಕ್ಕೆ ಕ್ರಿಕೆಟ್ ಪಂಡಿತರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೀಮಿತ ಓವರ್ಗಳಲ್ಲಿ ನಾಯಕನಾಗಿ ಎರಡು ಬಾರಿ ವಿಶ್ವಕಪ್ ಚಾಂಪಿಯನ್ ತಂಡವನ್ನಾಗಿಸಿದ ಅನುಭವ ಹೊಂದಿರುವ ಧೋನಿ ತಂಡದಲ್ಲಿರುವುದು ವಿರಾಟ್ ಪಡೆಗೆ ಶಕ್ತಿ ನೀಡಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿ ಇನ್ನು ಕೆಲವರು ಮೆಂಟರ್ ಆಗಿ ಧೋನಿಯ ಅಗತ್ಯ ತಂಡಕ್ಕಿಲ್ಲ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಜಯ್ ಜಡೇಜಾ ಕೂಡ ಎಂಎಸ್ ಧೋನಿಯನ್ನು ಮೆಂಟರ್ ಆಗಿ ನೇಮಕ ಮಾಡಿದ ನಿರ್ಧಾರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೆಂಟರ್ ಆಗಿ ಧೋನಿಯನ್ನು ನೇಮಕ ಮಾಡುವ ಅಗತ್ಯವೇನಿತ್ತು ಎಂದು ಅಜಯ್ ಜಡೇಜಾ ಪ್ರಶ್ನಿಸುವ ಮೂಲಕ ಬಿಸಿಸಿಐನ ನಿರ್ಧಾರಕ್ಕೆ ಅಸಮ್ಮತಿ ಸೂಚಿಸಿದ್ದಾರೆ.
ಸೋನಿ ಸ್ಪೋರ್ಟ್ಸ್ನಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ಅಜಯ್ ಜಡೇಜಾ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರವನ್ನು ಯಾವ ಕಾರಣಕ್ಕಾಗಿ ತೆಗೆದುಕೊಂಡರು ಎಂದು ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ ಅಜಯ್ ಜಡೇಜಾ. "ಇದನ್ನು ನನಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ಹಿಂದೆ ಯಾವ ಯೋಚನೆಯಿದೆ ಎಂದು ನಾನು ಕಳೆದ ಎರಡು ದಿನಗಳಿಂದ ಚಿಂತಿಸುತ್ತಿದ್ದೇನೆ. ನಾನು ಎಂಎಸ್ ಧೋನಿ ಬಗ್ಗೆ ಮಾತನಾಡುತ್ತಿಲ್ಲ. ಆತನಲ್ಲಿರುವ ಅನುಭವ ಹಾಗೂ ಆತ ಎಷ್ಟರ ಮಟ್ಟಿಗೆ ತಂಡದ ಪಾಲಿಗೆ ಅನುಕೂಲಕರವಾಗಬಲ್ಲರು ಎಂಬುದರ ಬಗ್ಗೆ ನಾನು ಚರ್ಚಿಸುತ್ತಿಲ್ಲ. ಇದೊಂದು ರೀತಿ ಅಜಿಂಕ್ಯಾ ರಹಾನೆ ಸ್ಥಾನದಲ್ಲಿ ರವೀಂದ್ರ ಜಡೇಜಾರನ್ನು ಕಣಕ್ಕಿಳಿಸಿದಂತೆ. ಯಾವ ಕಾರಣಕ್ಕಾಗಿ ಕಳುಹಿಸಿದರು ಎಂದು ಆ ವ್ಯಕ್ತಿಯೇ ಯೋಚಿಸುವಂತಿದೆ" ಎಂದು ಅಜಯ್ ಜಡೇಜಾ ಪ್ರತಿಕ್ರಿಯಿಸಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಅಜಯ್ ಜಡೇಜಾ ನಾಯಕ ವಿರಾಟ್ ಕೊಹ್ಲಿಗೆ ಎಂಎಸ್ ಧೋನಿ ಈಗಾಗಲೇ ಮೆಂಟರ್ ಆಗಿ ಕರ್ತವ್ಯ ನಿಭಾಯಿಸಿದ್ದಾರೆ ಎಂದು ಜಡೇಜಾ ಹೇಳಿದ್ದಾರೆ. ಇದರ ಜೊತೆಗೆ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ವಿಶ್ವದ ನಂಬರ್ 1 ಸ್ಥಾನಕ್ಕೆ ಏರಿಸಿದ್ದಾರೆ. ಹೀಗಿದ್ದಾಗಲೂ ಓರ್ವ ಮೆಂಟರ್ನ ಅವಶ್ಯಕತೆ ಏನಿದೆ? ರಾತ್ರೋರಾತ್ರಿ ಆತನಿಂದ ಏನು ಮಾಡಲು ಸಾಧ್ಯವಿದೆ? ಇದು ನನಗೆ ಆಶ್ಚರ್ಯವನ್ನುಂಟು ಮಾಡಿದೆ ಎಂದು ಅಜಯ್ ಜಡೇಜಾ ಪ್ರಶ್ನಿಸಿದ್ದಾರೆ.
ಇನ್ನು ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ಇಬ್ಬರು ಕೂಡ ವಿಭಿನ್ನವಾಗಿ ಯೋಚನೆ ಮಾಡುವ ನಾಯಕರು. ಇಬ್ಬರ ಕಾರ್ಯಶೈಲಿಯೂ ವಿಭಿನ್ನವಾಗಿದೆ. ಧೋನಿ ಒಂದು ದಾರಿಯಲ್ಲಿ ಮುನ್ನಡೆಸಿದರೆ ವಿರಾಟ್ ಕೊಹ್ಲಿ ಬೇರೆಯದ್ದೇ ದಾರಿಯಲ್ಲಿ ತಂಡವನ್ನು ಕರೆದೊಯ್ಯುತ್ತಾರೆ. ಧೋನಿ ನಾಯಕನಾಗಿ ಯಾವತ್ತೂ ನಾಲ್ವರು ವೇಗಿಗಳೊಂದಿಗೆ ಆಡಿಲ್ಲ. ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿದು ಭಾರತ ಇಂಗ್ಲೆಂಡ್ನಲ್ಲಿ ಎಂತಾ ಅದ್ಭುತ ನೀಡಿತು ಎಂದು ನಾವು ನೋಡಿದ್ದೇವೆ. ಒಬ್ಬ ಒಂದು ರೀತಿಯಾಗಿ ಯೋಚಿಸಿದರೆ ಮತ್ತೊಬ್ಬರು ಮತ್ತೊಂದು ರೀತಿಯಲ್ಲಿ ಯೋಚಿಸುತ್ತಾರೆ. ಈಗ ಇದು ಇಬ್ಬರನ್ನು ಒಂದೇ ದಾರಿಯಲ್ಲಿ ಸಾಗುವಂತೆ ಮಾಡುವ ಪ್ರಯತ್ನದಂತಿದೆ ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಜಯ್ ಜಡೇಜಾ ವಿವರಿಸಿದ್ದಾರೆ.