ಅಂತಿಮವಾಗಿ 3 ಎಸೆತಗಳು ಬಾಕಿ ಇದ್ದಾಗ ರನ್ ಓಡಬೇಕಾ ಎಂದು ಮ್ಯಾಕ್ಸ್ವೆಲ್ ಬಳಿ ಕೇಳಿದ್ದ ಭರತ್
ಅಂತಿಮ ಎಸೆತದಲ್ಲಿ ಸಿಕ್ಸರ್ ಬಾರಿಸಿ ಜಯ ತಂದುಕೊಟ್ಟ ಕೆಎಸ್ ಭರತ್ ಆವೇಶ್ ಖಾನ್ ಎಸೆದ ಕೊನೆಯ ಓವರ್ನಲ್ಲಿ 3 ಎಸೆತಗಳಿಗೆ 8 ರನ್ಗಳನ್ನು ಬಾರಿಸಬೇಕಾದ ಅಗತ್ಯವಿತ್ತು. ಮೊದಲ 3 ಬಾಲ್ ಆಡಿದ್ದ ಮ್ಯಾಕ್ಸ್ವೆಲ್ ಆ ಓವರ್ನ ಮೂರನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡಿದ್ದರು. ಈ ಸಂದರ್ಭದಲ್ಲಿ ಮ್ಯಾಕ್ಸ್ವೆಲ್ ಜೊತೆ ನಡೆದ ಸಂಭಾಷಣೆಯನ್ನು ಕೆಎಸ್ ಭರತ್ ಬಿಚ್ಚಿಟ್ಟಿದ್ದಾರೆ. 'ಅಂತಿಮ 3 ಎಸೆತಗಳಿದ್ದಾಗ ರನ್ ಓಡಿ ನಿಮಗೆ ಸ್ಟ್ರೈಕ್ ನೀಡಬೇಕಾ ಎಂದು ಮ್ಯಾಕ್ಸ್ವೆಲ್ ಬಳಿ ಕೇಳಿದೆ. ಆದರೆ ಇದಕ್ಕೆ ಪ್ರತ್ಯುತ್ತರವಾಗಿ ಮ್ಯಾಕ್ಸ್ವೆಲ್ ಬೇಡ ಎಂದು ರನ್ ಓಡಲು ನಿರಾಕರಿಸಿದರು, ನೀನು ಮುನ್ನುಗ್ಗು, ನಿನ್ನಿಂದ ಇದು ಸಾಧ್ಯವಾಗುತ್ತದೆ, ಪಂದ್ಯವನ್ನು ಮುಗಿಸು ಎಂದು ಹೇಳಿದರು. ಮ್ಯಾಕ್ಸ್ವೆಲ್ ಅವರ ಈ ಮಾತುಗಳು ನನ್ನಲ್ಲಿನ ವಿಶ್ವಾಸವನ್ನು ಹೆಚ್ಚಿಸಿತು, ಹಾಗೆ ಬಾಲ್ ಮೇಲೆ ಸರಿಯಾದ ಗಮನವನ್ನಿಟ್ಟು ಬ್ಯಾಟ್ ಬೀಸಿದೆ ಹಾಗೂ ಅದಕ್ಕೆ ತಕ್ಕ ಫಲ ಕೂಡ ಸಿಕ್ಕಿತು' ಎಂದು ಕೆಎಸ್ ಭರತ್ ಮ್ಯಾಕ್ಸ್ವೆಲ್ ನೀಡಿದ ಧೈರ್ಯದ ಕುರಿತು ಮಾತನಾಡಿದ್ದಾರೆ.
ಅಂತಿಮ ಓವರ್ನಲ್ಲಿ ಮ್ಯಾಕ್ಸ್ವೆಲ್ ಕೂಡ ಅಬ್ಬರಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿ 33 ಎಸೆತಗಳಿಗೆ ಅಜೇಯ 51 ರನ್ ಚಚ್ಚಿದ ಗ್ಲೆನ್ ಮ್ಯಾಕ್ಸ್ವೆಲ್ ಆವೇಶ್ ಖಾನ್ ಎಸೆದ ಅಂತಿಮ ಓವರ್ನ ಮೊದಲ 3 ಎಸೆತಗಳನ್ನು ಎದುರಿಸಿ ಕ್ರಮವಾಗಿ 4, 2 ಮತ್ತು 1 ರನ್ ಬಾರಿಸಿದರು. ಹೀಗೆ ಅಂತಿಮ ಓವರ್ನ 3 ಎಸೆತಗಳಲ್ಲಿ ಒತ್ತಡದ ನಡುವೆಯೂ ಮ್ಯಾಕ್ಸ್ವೆಲ್ 7 ರನ್ ಬಾರಿಸಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ರೋಚಕ ಜಯ ಸಾಧಿಸಲು ಪ್ರಮುಖ ಕಾರಣವಾಯಿತು.
ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತ್ತಾ ಜೊತೆ ರಾಯಲ್ ಚಾಲೆಂಜರ್ಸ್ ಸೆಣಸಾಟ
ಹೀಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲುವುದರ ಮೂಲಕ ಹುಮ್ಮಸ್ಸಿನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಸುತ್ತಿನ ಎಲಿಮಿನೇಟರ್ ಪಂದ್ಯದಲ್ಲಿ ಅಕ್ಟೋಬರ್ 11ರ ಸೋಮವಾರದಂದು ಸಂಜೆ 7.30ಕ್ಕೆ ಶಾರ್ಜಾ ಕ್ರೀಡಾಂಗಣದಲ್ಲಿ ಸೆಣಸಾಡಲಿದೆ. ಈ ಪಂದ್ಯದಲ್ಲಿ ಜಯ ಗಳಿಸಿದರೆ ಕ್ವಾಲಿಫೈಯರ್ 1ರಲ್ಲಿ ಸೋತ ತಂಡದ ಜೊತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೆಣಸಾಡಲಿದೆ ಅಥವಾ ಎಲಿಮಿನೇಟರ್ ಪಂದ್ಯದಲ್ಲಿ ಸೋತರೆ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.