ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ
ರಾಜಸ್ಥಾನ್ ರಾಯಲ್ಸ ತಂಡ ಈ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡಿತ್ತು. ಆದರೆ ಅಚ್ಚರಿಯೆಂಬಂತೆ ಆರ್ಆರ್ ನಾಯಕ ಸಂಜು ಸ್ಯಾಮ್ಸನ್ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಕಳೆದ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ರನ್ ಬೆನ್ನಟ್ಟಿ ಅದ್ಭುತ ಗೆಲುವು ಸಾಧಿಸಿದ್ದರೂ ಸಂಜು ಸ್ಯಾಮ್ಸನ್ ಮೊದಲಿಗೆ ಬ್ಯಾಟಿಂಗ್ ನಡೆಸುವ ಧೈರ್ಯ ತೋರಿಸಿದರು. ಆದರೆ ಆರ್ಆರ್ ಬ್ಯಾಟರ್ಗಳು ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬ್ಯಾಟಿಂಗ್ ನಡೆಸಲಿಲ್ಲ. ಸ್ವತಃ ಸಂಜು ಸ್ಯಾಮ್ಸನ್ ಕೂಡ ಬ್ಯಾಟಿಂಗ್ನಲ್ಲಿ ವಿಫಲವಾದರು.
ಫೈನಲ್ ಪಂದ್ಯದ ಒತ್ತಡ ನಿಭಾಯಿಸುವಲ್ಲಿ ವಿಫಲ
ಸಂಜು ಸ್ಯಾಮ್ಸನ್ ಪಡೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದಾಗ ಫೈನಲ್ ಪಂದ್ಯದ ಒತ್ತಡವನ್ನು ಅನುಭವಿಸುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ಗುಜರಾತ್ ಟೈಟನ್ಸ್ ಬೌಲರ್ಗಳು ಅದ್ಭುತ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದರೆ ಆರಂಭದಲ್ಲಿ ಎಚ್ಚರಿಕೆಯ ಆಟವಾಡುವ ಲೆಕ್ಕಾಚಾರಕ್ಕೆ ಮುಂದಾಯಿತು ಆರ್ಆರ್ ಪಡೆ. ಈ ಸಂದರ್ಭದಲ್ಲಿ ವಿಕೆಟ್ಗಳು ಕೂಡ ಕಳೆದುಕೊಂಡ ಕಾರಣ ಆರ್ಆರ್ ಪಡೆಯ ಮೇಲೆ ಬಿದ್ದಿತು. ಇದರ ಲಾಭವನ್ನು ಗುಜರಾತ್ ಟೈಟನ್ಸ್ ಬೌಲರ್ಗಳು ಮತ್ತಷ್ಟು ಉತ್ತಮವಾಗಿ ಬಳಸಿಕೊಂಡರು.
ಗುಜರಾತ್ ಟೈಟನ್ಸ್ ಪಡೆಯ ಶಿಸ್ತಿನ ಬೌಲಿಂಗ್
ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ಶಿಸ್ತಿನ ಬೌಲಿಂಗ್ ದಾಳಿ ಆರ್ಆರ್ ತಂಡಕ್ಕೆ ಎಲ್ಲೂ ಅವಕಾಶವನ್ನೇ ನೀಡಲಿಲ್ಲ. ಆರಂಭದಿಂದಲೇ ಜಿಟಿ ಬೌಲರ್ಗಳು ಆರ್ಆರ್ ಮೇಲೆ ಒತ್ತಡವನನ್ಉ ಹೇರುತ್ತಾ ಸಾಗಿದರು. ನಾಯಕ ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ ಬೌಲಿಂಗ್ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ನಾಲ್ಕು ಓವರ್ಗಳ ಬೌಲಿಂಗ್ ಕೋಟಾವನ್ನು ಸಂಪೂರ್ಣಗೊಳಿಸಿದ ಹಾರ್ದಿಕ್ ಪಾಂಡ್ಯ ಕೇವಲ 17 ರನ್ಗಳನ್ನು ನೀಡಿ ಮೂರು ವಿಕೆಟ್ ಪಡೆದುಕೊಂಡಿದ್ದಾರೆ.ಇನ್ನು ರಶೀದ್ ಖಾನ್, ಯಶ್ ದಯಾಳ್ ಪ್ರದರ್ಶನ ಕೂಡ ಗಮನಾರ್ಹವಾಗಿತ್ತು.
ನಾಯಕನಾಗಿ ಮಿಂಚಿದ ಹಾರ್ದಿಕ್ ಪಾಂಡ್ಯ
ಟೂರ್ನಿಯುದ್ದಕ್ಕೂ ನಾಯಕತ್ವದ ಜೊತೆಗೆ ಬ್ಯಾಟಿಂಗ್ ಪ್ರದರ್ಶನದ ಮೂಲಕ ಮಿಂಚಿದ ಹಾರ್ದಿಕ್ ಪಾಂಡ್ಯ ಫೈನಲ್ ಪಂದ್ಯದಲ್ಲಿಯೂ ತನ್ನ ಜವಾಬ್ಧಾರಿಯನ್ನು ಅದ್ಭುತ ರೀತಿಯಲ್ಲಿ ನಿಭಾಯಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ದಾಂಡಿಗರ ವಿರುದ್ಧ ತನ್ನ ಪಡೆಯ ಬೌಲರ್ಗಳನ್ನು ಅದ್ಭುತವಾಗಿ ಬಳಸಿಕೊಂಡ ಪಾಂಡ್ಯ ತಾನು ಮುಂದೆ ನಿಂತು ದಾಳಿಗೆ ಮುಂದಾದರು. ಈ ಮೂಲಕ ಬೌಲಿಂಗ್ನಲ್ಲಿಯೂ ಪಾಂಡ್ಯ ಮಿಂಚಿದರು. ನಂತರ ಬ್ಯಾಟಿಂಗ್ನಲ್ಲಿಯೂ ಸಂದರ್ಭೋಚಿತ ಪ್ರದರ್ಶನ ನೀಡಿದ ಪಾಂಡ್ಯ 30 ಎಸೆತಗಳಲ್ಲಿ 34 ರನ್ಗಳಿಸಿ ಮಿಂಚಿದರು. ಈ ಮೂಲಕ ಹಾರ್ದಿಕ್ ಪಾಂಡ್ಯ ನಾಯಕನಾಗಿಯೂ ಈ ಪಂದ್ಯದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದರು. ಇದು ರಾಜಸ್ಥಾನ್ ರಾಯಲ್ಸ್ ತಂಡದ ಸೋಲಿಗೆ ಕಾರಣವಾಯಿತು.