ಆರ್ಸಿಬಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಮಾಡಿದ ಎಡವಟ್ಟಿನಿಂದಾಗಿ ಈ ಬಾರಿಯು ಆರ್ಸಿಬಿಯ ಟ್ರೋಫಿ ಗೆಲ್ಲುವ ಕನಸು ನನಸಾಗದೆ ಉಳಿದಿದೆ. ರಾಜಸ್ತಾನ್ ರಾಯಲ್ಸ್ ತಂಡದ ಮ್ಯಾಚ್ ವಿನ್ನರ್ ಜೋಸ್ ಬಟ್ಲರ್ ಕ್ಯಾಚ್ ಬಿಟ್ಟು ಸಿಕ್ಕ ಅವಕಾಶವನ್ನೂ ಕಾರ್ತಿಕ್ ಕೈ ಜಾರಿಸಿದ್ರು.
ಐಪಿಎಲ್ 15ನೇ ಸೀಸನ್ನ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಇಂದು ಆರ್ಸಿಬಿ ಮತ್ತು ರಾಜಸ್ತಾನ ರಾಯಲ್ಸ್ ಪಂದ್ಯದಲ್ಲಿ ಟಾಸ್ ಗೆದ್ದು ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇದರ ಬೆನ್ನಲ್ಲೇ ಆರ್ಸಿಬಿ ತಂಡ 20 ಓವರ್ಗಳಲ್ಲಿ 157 ರನ್ ಗಳಿಸಿತು. ಆದ್ರೆ ಈ ಗುರಿಯನ್ನ ಸುಲಭವಾಗಿ ಬೆನ್ನತ್ತಿದ ರಾಜಸ್ತಾನ 18.1 ಓವರ್ಗಳಲ್ಲಿ 161 ರನ್ ಗಳಿಸಿ ಜಯ ಸಾಧಿಸಿತು. ಇದಕ್ಕೆ ಕಾರಣ ಜೋಸ್ ಬಟ್ಲರ್ನ ಶತಕದ ಅಮೋಘ ಆಟ.
RCB vs RR: ಸೀಸನ್ನಲ್ಲಿ 4ನೇ ಶತಕ, ಒಟ್ಟು 800ಕ್ಕೂ ಹೆಚ್ಚು ರನ್ ದಾಖಲಿಸಿದ ಜೋಸ್ ಬಟ್ಲರ್
ಆರ್ಸಿಬಿ ತಂಡ ಕಡಿಮೆ ಗುರಿ ನೀಡಿದ್ದರಿಂದ ಉತ್ತಮ ಬೌಲಿಂಗ್ ಮಾಡಬೇಕಾಯಿತು. ಯಶಸ್ವಿ ಜೈಶ್ವಾಲ್ 21 ಮತ್ತು ನಾಯಕ ಸಂಜು ಸ್ಯಾಮ್ಸನ್ 23 ರನ್ ಗಳಿಸಿ ಔಟಾದರು. ದೇವತ್ ಪಡಿಕಲ್ ಕೂಡ 9 ರನ್ಗಳಿಗೆ ಇನಿಂಗ್ಸ್ ಮುಗಿಸಿದ್ರು. ಇಂತಹ ಸಮಯದಲ್ಲಿ ದಿನೇಶ್ ಕಾರ್ತಿಕ್ ಎಡವಟ್ಟಿಗೆ ಭಾರೀ ಬೆಲೆ ತೆರಬೇಕಾಯಿತು.
ಪಂದ್ಯದ 10ನೇ ಓವರ್ ನಲ್ಲಿ ಹರ್ಷಲ್ ಪಟೇಲ್ ಎಸೆದ ಮೊದಲ ಎಸೆತವನ್ನು ಜಾಸ್ ಬಟ್ಲರ್ ಹೊಡೆಯಲು ಯತ್ನಿಸಿದರು. ಆದರೆ ಆ ಚೆಂಡು ಬ್ಯಾಟ್ನಲ್ಲಿ ಎಡ್ಜ್ ಆಗಿ ಕೀಪರ್ಗೆ ಕ್ಯಾಚ್ಗೆ ಹೋಯಿತು. ದಿನೇಶ್ ಕಾರ್ತಿಕ್ ಸಾಮಾನ್ಯ ಕ್ಯಾಚ್ ಆಗಿ ಸುಲಭವಾಗಿ ಬಂದ ಚೆಂಡನ್ನು ಮಿಸ್ ಮಾಡುವ ಮೂಲಕ ಎಲ್ಲರನ್ನು ದಂಗುಬಡಿಸಿದರು. ಉದ್ವೇಗದಲ್ಲಿ ಚೆಂಡಿನ ದಿಕ್ಕನ್ನು ನಿಖರವಾಗಿ ಊಹಿಸಲು ಸಾಧ್ಯವಾಗದೇ ಕಾರ್ತಿಕ್ ಕ್ಯಾಚ್ ಬಿಟ್ಟರು.
ಆದರೆ ದಿನೇಶ್ ಕಾರ್ತಿಕ್ ಬಿಟ್ಟ ಆ ಒಂದು ಕ್ಯಾಚ್ ಜೋಸ್ ಬಟ್ಲರ್ ಗೆಲುವಿನ ಆಟವಾಗಿ ಹೊರಹೊಮ್ಮಿತು. ಆಗ ಬಟ್ಲರ್ 66 ರನ್ ಗಳಿಸಿದ್ದರು. ಅವರನ್ನ ಔಟ್ ಮಾಡಿದ್ದರೆ ಆರ್ಸಿಬಿಗೆ ಟರ್ನಿಂಗ್ ಪಾಯಿಂಟ್ ಆಗುತ್ತಿತ್ತು. ಆದ್ರೆ ಬಟ್ಲರ್ ಕೊನೆಯವರೆಗೂ ಅಜೇಯರಾಗಿ ಉಳಿದು 60 ಎಸೆತಗಳಲ್ಲಿ ಅಜೇಯ 106 ರನ್ ಕಲೆಹಾಕಿ ತಂಡಕ್ಕೆ ಅದ್ಭುತ ಗೆಲುವನ್ನು ತಂದುಕೊಟ್ಟರು.
ಪ್ರಸಕ್ತ ಸರಣಿಯಲ್ಲಿ ಆರ್ಸಿಬಿ ತಂಡ ಹಲವು ಪಂದ್ಯಗಳನ್ನು ಗೆಲ್ಲುವಲ್ಲಿ ದಿನೇಶ್ ಕಾರ್ತಿಕ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಇಂದು ಅವರೇ ಆರ್ ಸಿಬಿ ಕನಸನ್ನು ನುಚ್ಚು ನೂರು ಮಾಡಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ದಿನೇಶ್ ಕಾರ್ತಿಕ್ ಪ್ರಸಕ್ತ ಐಪಿಎಲ್ ಸೀಸನ್ನಲ್ಲಿ 10 ಕ್ಯಾಚ್ಗಳನ್ನ ಕೈ ಚೆಲ್ಲುವ ಮೂಲಕ ಅತಿ ಹೆಚ್ಚು ಕ್ಯಾಚ್ ಬಿಟ್ಟ ವಿಕೆಟ್ ಕೀಪರ್ ಎಂಬ ಕುಖ್ಯಾತಿಗೂ ಒಳಗಾಗಿದ್ದಾರೆ.