ಟಾಸ್ ಗೆದ್ದು ಬೌಲಿಂಗ್ ತೆಗೆದುಕೊಂಡಿದ್ದು
ವಾಂಖೇಡೆಯ ಹಸಿರಿನ ಅಂಗಳದಲ್ಲಿ ಉತ್ತಮ ರನ್ ಹರಿದುಬರುವ ನಿರೀಕ್ಷೆ ಮೊದಲೇ ಇತ್ತು. ಟಾಸ್ ಗೆದ್ದ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡು ಮೊದಲ ತಪ್ಪೆಸಗಿದರು.
ಮೊದಲು ಬ್ಯಾಟಿಂಗ್ ಮಾಡಿ ಬೃಹತ್ ಮೊತ್ತ ಕಲೆಹಾಕಿದರೆ, ಎದುರಾಳಿ ತಂಡದ ಮೇಲೆ ಒತ್ತಡ ಹೇರುವ ಅವಕಾಶವಿತ್ತು. ಆದರೆ, ಆ ಅವಕಾಶವನ್ನು ಕೊಹ್ಲಿ, ಮುಂಬೈ ಇಂಡಿಯನ್ಸ್ ತಂಡಕ್ಕೆ ಕಾಣಿಕೆಯಾಗಿ ನೀಡಿದರು. ಇದನ್ನು ಸದ್ಬಳಕೆ ಮಾಡಿಕೊಂಡ ಮುಂಬೈ ಇಂಡಿಯನ್ಸ್ ಬ್ಯಾಟ್ಸ್ಮನ್ಗಳು ಆರ್ಸಿಬಿ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದರು.
ಆರಂಭದಲ್ಲಿ ದೊರೆತ ಅವಕಾಶವನ್ನು ಕೈಚೆಲ್ಲಿದ್ದು
ಮುಂಬೈ ಇಂಡಿಯನ್ಸ್ ತಂಡದಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿರುವ ಬ್ಯಾಟ್ಸ್ಮನ್ಗಳು ಎನಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶಾನ್ ಅವರನ್ನು ಇನ್ನಿಂಗ್ಸ್ನ ಮೊದಲ ಎರಡು ಎಸೆತಗಳನ್ನೇ ಉಮೇಶ್ ಯಾದವ್ ಬೌಲ್ಡ್ ಮಾಡಿದರು.
ಕ್ರಿಕೆಟ್ನ ಯಾವುದೇ ಫಾರ್ಮ್ಯಾಟ್ನಲ್ಲಿ ಆರಂಭದಲ್ಲಿಯೇ ವಿಕೆಟ್ ಪಡೆದುಕೊಂಡರೆ ಎದುರಾಳಿ ತಂಡದ ಮೇಲೆ ಒತ್ತಡ ಹೇರಲು ಸಾಧ್ಯ. ಅದೇ ರೀತಿ ಮುಂಬೈ ಇಂಡಿಯನ್ಸ್ ತಂಡದ ಮೇಲೆ ಒತ್ತಡ ಹೇರುವ ಎಲ್ಲ ಅವಕಾಶಗಳನ್ನು ಉಮೇಶ್ ಯಾದವ್ ಕಲ್ಪಿಸಿಕೊಟ್ಟಿದ್ದರು.
ಈ ವೇಳೆ ಕೋರಿ ಆಂಡರ್ಸನ್ಗೆ ಚೆಂಡು ನೀಡುವ ಬದಲು ಅನನುಭವಿ ಬೌಲರ್ಗಳಿಗೆ ನೀಡಿದರು. ಇದು ಇವೆನ್ ಲೆವಿಸ್ ಮತ್ತು ರೋಹಿತ್ ಶರ್ಮಾಗೆ ನೆಲೆ ಕಂಡುಕೊಳ್ಳಲು ನೆರವಾಯಿತು.
ಲಯ ಕಂಡುಕೊಳ್ಳದ ಬೌಲಿಂಗ್
ಇನ್ನಿಂಗ್ಸ್ ಉದ್ದಕ್ಕೂ ಆರ್ಸಿಬಿ ಬೌಲಿಂಗ್ ನಿಯಂತ್ರಣ ಕಳೆದುಕೊಂಡಂತೆ ಕಂಡಿತು. ಆರಂಭದ ಎರಡು ಓವರ್ ಚೆನ್ನಾಗಿ ಬೌಲ್ ಮಾಡಿದ ಉಮೇಶ್ ಯಾದವ್ ಕೂಡ, ಬಳಿಕ ರನ್ ಬಿಟ್ಟುಕೊಟ್ಟರು. ಆರು ಮಂದಿ ಪ್ರಮುಖ ಬೌಲರ್ಗಳಿದ್ದರೂ ಯಾರೂ ಪರಿಣಾಮಕಾರಿ ಎನಿಸಲಿಲ್ಲ.
ನಾಲ್ವರು ಬೌಲರ್ಗಳು 10ಕ್ಕಿಂತ ಅಧಿಕ ಸರಾಸರಿಯಲ್ಲಿ ರನ್ ನೀಡಿದರು. ಮುಂಬೈ ಬ್ಯಾಟ್ಸ್ಮನ್ಗಳು 13 ಸಿಕ್ಸರ್ಗಳನ್ನು ಬಾರಿಸಿದರು. ಅಲ್ಲದೆ, 16 ವೈಡ್ಗಳನ್ನು ಎಸೆದರು. ಇದು ಆರ್ಸಿಬಿಗೆ ಬಲು ದುಬಾರಿಯಾಯಿತು.
ಒಂದೇ ಓವರ್ನಲ್ಲಿ ಡಿ ಕಾಕ್ ಮತ್ತು ಡಿವಿಲಿಯರ್ಸ್ ಔಟಾಗಿದ್ದು
ಮೊದಲ ನಾಲ್ಕು ಓವರ್ನಲ್ಲಿ 40 ರನ್ ಗಳಿಸಿದ್ದ ಆರ್ಸಿಬಿಗೆ ಉತ್ತಮ ಆರಂಭ ದೊರೆತಿತ್ತು. ಆದರೆ, ಮಿಚೆಲ್ ಮೆಕ್ನಗಾನ್ ಎಸೆದ ಒಂದೇ ಓವರ್ನಲ್ಲಿ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಮತ್ತು ಎಬಿ ಡಿವಿಲಿಯರ್ಸ್ ವಿಕೆಟ್ ಒಪ್ಪಿಸಿದ್ದು, ಆರ್ಸಿಬಿಗೆ ಆಘಾತ ನೀಡಿತು.
ಅಲ್ಲಿಂದ ಮುಂದೆ ಆರ್ಸಿಬಿ ಬ್ಯಾಟ್ಸ್ಮನ್ಗಳು ನಿರಂತರವಾಗಿ ವಿಕೆಟ್ ಒಪ್ಪಿಸತೊಡಗಿದರು. ಹಿಂದಿನ ಪಂದ್ಯಗಳಲ್ಲಿ ಮಿಂಚಿದ್ದ ವಾಷಿಂಗ್ಟನ್ ಸುಂದರ್, ಮಂದೀಪ್ ಸಿಂಗ್ ಕೂಡ ಬೇಗನೆ ಔಟಾದರು.
ಕೊಹ್ಲಿಗೆ ಸಿಗದ ಬೆಂಬಲ
ಆರಂಭದಲ್ಲಿ ಡಿ ಕಾಕ್ ಉತ್ತಮ ಜತೆಯಾಟ ನೀಡಿದ್ದು ಬಿಟ್ಟರೆ ಆರ್ಸಿಬಿಯ ಯಾವ ಆಟಗಾರನೂ ನಾಯಕ ಕೊಹ್ಲಿಗೆ ಸಾಥ್ ನೀಡಲಿಲ್ಲ.
ಡಿ ಕಾಕ್, ಮಂದೀಪ್ ಸಿಂಗ್ ಮತ್ತು ಕ್ರಿಸ್ ವೋಕ್ಸ್ ಹೊರತುಪಡಿಸಿ ಬೇರೆ ಯಾವ ಬ್ಯಾಟ್ಸ್ ಮನ್ ಕೂಡ ಎರಡಂಕಿಯ ಗಡಿ ದಾಟಲಿಲ್ಲ. ಕೊಹ್ಲಿ 92 ರನ್ ಗಳಿಸಿ ಏಕಾಂಗಿಯಾಗಿ ದಿಟ್ಟತನ ಪ್ರದರ್ಶಿಸಿದರು. ಎಲ್ಲ ಆಟಗಾರರೂ ತರಾತುರಿಯಲ್ಲಿ ವಿಕೆಟ್ ಒಪ್ಪಿಸಲು ಮುಂದಾದರು. ಆರ್ಸಿಬಿಯಲ್ಲಿ ಮೊದಲ ಪಂದ್ಯ ಆಡಿದ ನ್ಯೂಜಿಲೆಂಡ್ನ ಕೋರಿ ಆಂಡರ್ಸನ್ ಕೂಡ ಬಂದಷ್ಟೇ ವೇಗವಾಗಿ ಮರಳಿದರು.
ಲೆವಿಸ್ ಅಬ್ಬರ
ಮೊದಲ ಎರಡು ಎಸೆತದಲ್ಲೇ ಎರಡು ವಿಕೆಟ್ ಕಳೆದುಕೊಂಡ ಮುಂಬೈ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಅದಕ್ಕೆ ತಲೆಕೆಡಿಸಿಕೊಳ್ಳದ ಲೆವಿಸ್ ಎಂದಿನಂತೆ ಬಿರುಸಿನ ಆಟವಾಡಿದರು.
42 ಎಸೆತಗಳಲ್ಲೇ 65 ರನ್ ಚಚ್ಚಿದ ಲೆವಿಸ್, ಅದರಲ್ಲಿ 5 ಭರ್ಜರಿ ಸಿಕ್ಸರ್ಗಳನ್ನು ಸಿಡಿಸಿದರು. ಆರಂಭದ ಮುನ್ನಡೆಯ ಉತ್ಸಾಹದಲ್ಲಿ ಬೀಗಿದ ಆರ್ಸಿಬಿ ಬೌಲರ್ಗಳಿಗೆ ಮತ್ತೆ ಅವರು ನೆಮ್ಮದಿ ನೀಡಲಿಲ್ಲ.
ಫಾರ್ಮ್ಗೆ ಮರಳಿದ ರೋಹಿತ್ ಶರ್ಮಾ
ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಫಾರ್ಮ್ ತಂಡಕ್ಕೆ ಚಿಂತೆ ಉಂಟುಮಾಡಿತ್ತು. ಈ ಕಾರಣಕ್ಕಾಗಿಯೇ ತಮ್ಮ ಕ್ರಮಾಂಕ ಬದಲಿಸಿದ್ದ ರೋಹಿತ್ ಕೆಳ ಕ್ರಮಾಂಕದಲ್ಲಿ ಆಡಲು ಮುಂದಾಗಿದ್ದರು.
ಆದರೆ ಎರಡು ವಿಕೆಟ್ ಬಿದ್ದಿದ್ದರಿಂದ ಮೊದಲ ಓವರ್ನಲ್ಲಿಯೇ ಅವರು ಬ್ಯಾಟಿಂಗ್ಗೆ ಬರಬೇಕಾಯಿತು. ತಳವೂರಲು ಕೆಲವೇ ಸಮಯ ತೆಗೆದುಕೊಂಡ ರೋಹಿತ್, ಮತ್ತೆ ಹಿಂದೆ ನೋಡಲಿಲ್ಲ. ಆರ್ಸಿಬಿ ಬೌಲರ್ಗಳನ್ನು ಲೀಲಾಜಾಲವಾಗಿ ಎದುರಿಸಿ, ಸಲೀಸಾಗಿ ರನ್ ಪೇರಿಸಿದರು. ಸಿಕ್ಸರ್ ಸಿಡಿಸಿ ಶತಕ ಗಳಿಸುವ ಪ್ರಯತ್ನದಲ್ಲಿ ವಿಕೆಟ್ ಒಪ್ಪಿಸಿದರು. ತಂಡ ಆಗಲೇ ಬೃಹತ್ ಮೊತ್ತ ಕಲೆಹಾಕಿತ್ತು.
ಹಾರ್ದಿಕ್ ಪಾಂಡ್ಯ ಔಟ್ ಗೊಂದಲ
ಕೀರನ್ ಪೊಲಾರ್ಡ್ ಔಟಾದ ಬಳಿಕ ಬಂದ ಹಾರ್ದಿಕ್ ಪಾಂಡ್ಯ ಮೊದಲ ಎಸೆತದಲ್ಲೇ ವಿಕೆಟ್ ಕೀಪರ್ಗೆ ಕ್ಯಾಚಿತ್ತು ಔಟಾಗಿದ್ದರು. ಅಂಪೈರ್ ನಿರ್ಣಯವನ್ನು ಪ್ರಶ್ನಿಸಿದ ಪಾಂಡ್ಯ, ಮೂರನೇ ಅಂಪೈರ್ ನಿರ್ಣಯದಿಂದ ಬಚಾವಾದರು.
ಆದರೆ, ಸ್ನಿಕ್ಕೋದಲ್ಲಿ ಚೆಂಡು ಪಾಂಡ್ಯ ಅವರ ಬ್ಯಾಟ್ಗೆ ಸಣ್ಣನೆ ಸವರಿಕೊಂಡು ಹೋಗಿದ್ದು ಸ್ಪಷ್ಟವಾಗಿ ಕಾಣಿಸಿತ್ತು. ಮೂರನೇ ಅಂಪೈರ್ ಸಲಹೆ ಪಡೆದ ಫೀಲ್ಡ್ ಅಂಪೈರ್ ತಮ್ಮ ತೀರ್ಪನನ್ನು ವಾಪಸ್ ಪಡೆದರು. ಇದರಿಂದ ಆರ್ಸಿಬಿ ಆಟಗಾರರು ಅಚ್ಚರಿಗೊಳಗಾದರು. ಮುಂದೆ ಪಾಂಡ್ಯ 5 ಎಸೆತದಲ್ಲಿ 17 ರನ್ ಬಾರಿಸಿದರು.
ಬಿಗುವಿನ ಬೌಲಿಂಗ್
ಮೊದಲ ನಾಲ್ಕು ಓವರ್ಗಳಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟರೂ, ಮುಂಬೈ ಇಂಡಿಯನ್ಸ್ ಬೌಲರ್ಗಳು ನಂತರ ಹಿಡಿತ ಸಾಧಿಸಿದರು. ಆರ್ಸಿಬಿಯ ರನ್ ವೇಗಕ್ಕೆ ಕಡಿವಾಣ ಹಾಕಿದ್ದಲ್ಲದೆ, ನಿರಂತರವಾಗಿ ವಿಕೆಟ್ ಕಬಳಿಸುತ್ತಾ ಹೋದರು.
ಮುಸ್ತಫಿಜುರ್ ರಜಮಾನ್ ಹೊರತುಪಡಿಸಿ ಉಳಿದ ಬೌಲರ್ಗಳು ಕರಾರುವಕ್ಕಾದ ದಾಳಿ ನಡೆಸಿದರು. ಕೊಹ್ಲಿ ಹೊರತುಪಡಿಸಿ ಉಳಿದ ಯಾವ ಬ್ಯಾಟ್ಸ್ಮನ್ಗೂ ತಳವೂರಲು ಅವಕಾಶ ನೀಡಲಿಲ್ಲ. ಸ್ಪಿನ್ನರ್ ಕೃಣಾಲ್ ಪಾಂಡ್ಯ, ಮಧ್ಯಮ ಕ್ರಮಾಂಕದ ಪ್ರಮುಖ ಮೂರು ವಿಕೆಟ್ಗಳನ್ನು ಪಡೆದುಕೊಂಡರು. ಅವರಿಗೆ ಬೂಮ್ರಾ ಮತ್ತು ಮಾರ್ಖಂಡೆ ಉತ್ತಮ ಸಾಥ್ ನೀಡಿದರು.
ಪ್ರಮುಖ ವಿಕೆಟ್ಗಳನ್ನು ಕಿತ್ತಿದ್ದು
ಒಂದೇ ಓವರ್ನಲ್ಲಿ ಡಿ ಕಾಕ್ ಮತ್ತು ಡಿವಿಲಿಯರ್ಸ್ ವಿಕೆಟ್ ಕಬಳಿಸಿದಾಗಲೇ ಮುಂಬೈ ತಂಡ ಪಂದ್ಯವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತು. ಒಂದೆಡೆ ಕೊಹ್ಲಿ ಇದ್ದರಾದರೂ ಬೃಹತ್ ಮೊತ್ತದ ಗುರಿಯನ್ನು ಅವರೊಬ್ಬರಿಂದ ತಲುಪಲು ಸಾಧ್ಯವಿಲ್ಲ ಎಂಬುದು ಎದುರಾಳಿಗಳಿಗೆ ಅರಿವಿತ್ತು. ಹೀಗಾಗಿ ಉಳಿದ ಆಟಗಾರರಿಗೆ ರನ್ ಗಳಿಸಲು ಅವಕಾಶ ನೀಡದಂತೆ ಒತ್ತಡದ ಹೇರಿದರು.
ದೊಡ್ಡ ಮೊತ್ತ ಗಳಿಸಬೇಕಿದ್ದರಿಂದ ಬ್ಯಾಟ್ಸ್ಮನ್ಗಳ ಲಕ್ಷ್ಯ ರನ್ ಗಳಿಸುವುದಾಗಿತ್ತು. ಆ ಒತ್ತಡದಲ್ಲಿ ಸತತವಾಗಿ ವಿಕೆಟ್ ಕಳೆದುಕೊಂಡಿದ್ದರಿಂದ ಮುಂಬೈ ಬೌಲರ್ಗಳಿಗೆ ಹೆಚ್ಚು ಕಷ್ಟವಾಗಲಿಲ್ಲ.