

ನವದೆಹಲಿ, ಜೂನ್ 22: ಏಕದಿನ ಪಂದ್ಯದ ಇನ್ನಿಂಗ್ಸ್ ಒಂದರಲ್ಲಿ ಎರಡು ಹೊಸ ಚೆಂಡುಗಳನ್ನು ಬಳಸುವ ಪದ್ಧತಿಯನ್ನು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಟೀಕಿಸಿದ್ದಾರೆ.
ಇದು ದುರಂತಕ್ಕೆ ಸೂಕ್ತವಾದ ಆಯ್ಕೆ ಎಂದು ಸಚಿನ್ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ 481 ರನ್ಗಳನ್ನು ಬಾರಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.
ಏಕದಿನ ಪಂದ್ಯಗಳಲ್ಲಿ ಎರಡು ಹೊಸ ಚೆಂಡುಗಳನ್ನು ಬಳಸುವುದು ದುರಂತಕ್ಕೆ ಸೂಕ್ತವಾಗಿರುವ ನಿರ್ಧಾರ. ಎರಡೂ ಚೆಂಡುಗಳು ರಿವರ್ಸ್ ಸ್ವಿಂಗ್ಗೆ ಅನುಕೂಲವಾಗುವಷ್ಟು ಹಳೆಯದಾಗಲು ಸಮಯವೇ ಸಿಗುವುದಿಲ್ಲ.
ಮುಖ್ಯವಾಗಿ ಡೆತ್ ಓವರ್ಗಳಲ್ಲಿ ನಾವು ರಿವರ್ಸ್ಸ್ವಿಂಗ್ ನೋಡದೆ ಯಾವುದೋ ಕಾಲವಾಗಿದೆ ಎಂದು ಸಚಿನ್ ಅಭಿಪ್ರಾಯಪಟ್ಟಿದ್ದಾರೆ.
ಪಂದ್ಯಗಳು ಹೆಚ್ಚು 'ಕ್ರೂರ'ವಾಗುತ್ತಿವೆ ಎಂಬುದನ್ನು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರಲ್ಲಿಯೂ ಫ್ಲಾಟ್ ಪಿಚ್ಗಳಲ್ಲಿ ಬೌಲರ್ಗಳ ಮೇಲಿನ ಪ್ರಹಾರ ಇನ್ನಷ್ಟು ತೀವ್ರವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
'ಇದು ಬೌಲರ್ಗಳ ಮೇಲಿನ ಕ್ರೌರ್ಯ ಎಂದು ನನಗೆ ಅನಿಸುತ್ತದೆ. ಪಂದ್ಯದಲ್ಲಿ ಒಂದು ಚೆಂಡಿಗೆ ಮಾತ್ರ ಅವಕಾಶವಿದ್ದ ಕಾಲದಲ್ಲಿ ಆಡಿದ್ದೇನೆ. ಇನ್ನಿಂಗ್ಸ್ನ ದ್ವಿತೀಯಾರ್ಧದಲ್ಲಿ ರಿವರ್ಸ್ ಸ್ವಿಂಗ್ ಮಹತ್ವದ ಪಾತ್ರ ವಹಿಸುತ್ತದೆ. ಅದು ಬ್ಯಾಟ್ಸ್ಮನ್ಗಳಿಗೆ ಹೆಚ್ಚು ಸವಾಲಿನದ್ದಾಗಿರುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ.
ತೆಂಡೂಲ್ಕರ್ ಅವರ ಅಭಿಪ್ರಾಯಕ್ಕೆ ಪಾಕಿಸ್ತಾನದ ಮಾಜಿ ಬೌಲರ್ ವಕಾರ್ ಯೂನಿಸ್ ಅವರು ಸಹಮತ ವ್ಯಕ್ತಪಡಿಸಿದ್ದಾರೆ.
ನಾವು ಹೆಚ್ಚು ಆಕ್ರಮಣಕಾರಿ ಬೌಲರ್ಗಳನ್ನು ಸೃಷ್ಟಿಸದೆ ಇರುವುದಕ್ಕೆ ಇದೇ ಕಾರಣ. ಅವರು ತಮ್ಮ ಆಟದಲ್ಲಿ ಹೆಚ್ಚು ರಕ್ಷಣಾತ್ಮಕತೆ ತೋರಿಸುತ್ತಾರೆ. ಸದಾ ಬದಲಾಯಿಸಲು ಮುಂದಾಗುತ್ತಾರೆ. ರಿವರ್ಸ್ ಸ್ವಿಂಗ್ ಬಹುತೇಕ ನಾಶವಾಗಿದೆ ಎಂಬುದನ್ನು ನಾನೂ ಒಪ್ಪುತ್ತೇನೆ ಎಂದು ವಕಾರ್ ಯೂನಿಸ್ ಟ್ವೀಟ್ ಮಾಡಿದ್ದಾರೆ.
2011ರ ಅಕ್ಟೋಬರ್ನಲ್ಲಿ ತನ್ನ ಆಟದ ನಿಯಮಾವಳಿಗಳಿಗೆ ತಿದ್ದುಪಡಿ ತಂದಿದ್ದ ಐಸಿಸಿ ಎರಡೂ ಬದಿಗಳಿಂದ ಎರಡು ಹೊಸ ಚೆಂಡುಗಳಲ್ಲಿ ಆಡಿಸುವ ಪದ್ಧತಿಯನ್ನು ಜಾರಿಗೆ ತಂದಿತ್ತು.
ಇದರಿಂದ ಸ್ಪಿನ್ನರ್ಗಳ ಪಾತ್ರವೇ ಕುಂದುತ್ತದೆ ಎಂದು ಬಿಸಿಸಿಐ ಹೊಸ ನಿಯಮಕ್ಕೆ ಪ್ರತಿಭಟನೆ ವ್ಯಕ್ತಪಡಿಸಿತ್ತು. ಆದರೆ, ಪಂದ್ಯಗಳು ಬ್ಯಾಟ್ಸ್ಮನ್ ಸ್ನೇಹಿ ಆಗಿರಬೇಕು ಎಂಬ ಉದ್ದೇಶದಿಂದ ಐಸಿಸಿ ತನ್ನ ನಿಲುವಿಗೆ ಅಂಟಿಕೊಂಡಿತ್ತು.