
ಮುಂಬೈ: ಅನುಭವಿ ಬ್ಯಾಟ್ಸ್ಮನ್ ಶಿಖರ್ ಧವನ್ ನಾಯಕತ್ವದ ಟೀಮ್ ಇಂಡಿಯಾ ಸೋಮವಾರ (ಜೂನ್ 28) ಶ್ರೀಲಂಕಾಕ್ಕೆ ಪ್ರವಾಸ ಹೊರಟಿದೆ. ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮೂಲ ಇದನ್ನು ಟ್ವಿಟರ್ ಮೂಲಕ ತಿಳಿಸಿದೆ.
ಬಿಸಿಸಿಐ ಅಧಿಕೃತ ಟ್ವಿಟರ್ ಖಾತೆ ಸೋಮವಾರ ಒಂದು ಚಿತ್ರ ಹಂಚಿಕೊಂಡಿತ್ತು. ಇದರಲ್ಲಿ ಶ್ರೀಲಂಕಾಕ್ಕೆ ಹೊರಡಲು ಸಿದ್ಧವಾಗಿರುವ ಭಾರತೀಯ ತಂಡದ ಚಿತ್ರ ಹಾಕಿಕೊಂಡಿತ್ತು. 'ಎಲ್ಲಾ ಸಿದ್ಧವಾಗಿದೆ. ಶ್ರೀಲಂಕಾಕ್ಕೆ ಹೋಗಲಿರುವ ಬಳಗ' ಎಂದು ಸಾಲೊಂದನ್ನೂ ಚಿತ್ರದ ಜೊತೆ ಬಿಸಿಸಿಐ ಬರೆದುಕೊಂಡಿತ್ತು.
ಶ್ರೀಲಂಕಾ ಪ್ರವಾಸಕ್ಕೆ ಹೋಗುತ್ತಿರುವ ತಂಡಕ್ಕೆ ಭಾರತದ ಮಾಜಿ ನಾಯಕ, ಈಗ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ಯ ಮುಖ್ಯಸ್ಥರಾಗಿರುವ ಕನ್ನಡಿಗ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿರಲಿದ್ದಾರೆ. ತಂಡಕ್ಕೆ ಉಪನಾಯಕರಾಗಿ ವೇಗಿ ಭುವನೇಶ್ವರ್ ಕುಮಾರ್ ಹೆಸರಿಸಲ್ಪಟ್ಟಿದ್ದರು.
ಶಿಖರ್ ಧವನ್ ಕೂಡ ಪ್ರಯಾಣದ ವೇಳೆಯ ಚಿತ್ರ ಹಂಚಿಕೊಂಡಿದ್ದಾರೆ. ತಂಡದೊಂದಿಗೆ ವಿಮಾನದಲ್ಲಿರುವ ಚಿತ್ರವನ್ನು ಟ್ವಿಟರ್ನಲ್ಲಿ ಹಾಕಿಕೊಂಡಿರುವ ಧವನ್, 'ಮುಂದಿನ ನಿಲ್ದಾಣ, ಶ್ರೀಲಂಕಾ!' ಎಂದು ಬರೆದುಕೊಂಡಿದ್ದಾರೆ. ಭಾರತ ಶ್ರೀಲಂಕಾ ಪ್ರವಾಸ ಸರಣಿಗಳು 3 ಏಕದಿನ ಮತ್ತು 3 ಟಿ20ಐ ಪಂದ್ಯಗಳನ್ನು ಒಳಗೊಂಡಿರಲಿದೆ. ಜುಲೈ 13ರಿಂದ ಈ ಸರಣಿ ಶುರುವಾಗಲಿದೆ.