ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಪ್ರದರ್ಶನದ ಕುರಿತಾಗಿ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದ್ರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಪಡೆದ ಶ್ರೇಯಸ್ ಅಯ್ಯರ್ ಸಿಕ್ಕ ಅವಕಾಶವನ್ನ ಕೈ ಚೆಲ್ಲುವ ಮೂಲಕ ನಿರಾಸೆ ಮೂಡಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಶ್ರೇಯಸ್ ಮೂರು ಏಕದಿನ ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 54 ರನ್ಗಳು. ಮೊದಲ ಏಕದಿನ ಪಂದ್ಯದಲ್ಲಿ ಶ್ರೇಯಸ್ 17 ರನ್ ಕಲೆಹಾಕಿದ್ರೆ, 2ನೇ ಏಕದಿನ ಪಂದ್ಯದಲ್ಲಿ ಗಳಿಸಿದ್ದು 11 ರನ್ ಮತ್ತು ಮೂರನೇ ಏಕದಿನ ಪಂದ್ಯದಲ್ಲಿ 26 ರನ್ ಕಲೆಹಾಕಿದ್ರು.
ಭಾರತ ವಿರುದ್ಧ ಗೆಲುವನ್ನ ''ಜೈ ಶ್ರೀ ರಾಮ್'' ಎಂದು ಸಂಭ್ರಮಿಸಿದ ಕೇಶವ್ ಮಹಾರಾಜ್
ಶ್ರೇಯಸ್ ಅಯ್ಯರ್ಗೆ ಮೂರು ಏಕದಿನ ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಲು ಹೆಚ್ಚಿನ ಅವಕಾಶ ಸಿಕ್ಕರೂ ಸಹ, ಪ್ರತಿ ಪಂದ್ಯದಲ್ಲೂ ಶ್ರೇಯಸ್ ಅಯ್ಯರ್ ಮಿಂಚಲು ವಿಫಲರಾದರು. ಅದ್ರಲ್ಲೂ ಕೊನೆಯ ಏಕದಿನ ಪಂದ್ಯದಲ್ಲಿ ಅಯ್ಯರ್ಗೆ ಉತ್ತಮ ಕೊಡುಗೆ ನೀಡುವ ಅವಕಾಶ ಸಿಕ್ಕಿತಾದ್ರೂ ಮತ್ತೊಮ್ಮೆ ನಿರಾಸೆ ಮೂಡಿಸಿದ್ರು.
ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್, ಶ್ರೇಯಸ್ ಅಯ್ಯರ್ ಕಳಪೆ ಬ್ಯಾಟಿಂಗ್ ಕುರಿತು ನೇರವಾಗಿಯೇ ಮಾತನಾಡಿದ್ದು ಆತನಿಗೆ ಹೆಚ್ಚಿನ ಅವಕಾಶ ಸಿಕ್ಕಿತ್ತು ಎಂದಿದ್ದಾರೆ.
"ನೀವು 4, 5, ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿರಲಿ, ತಂಡದ ಅವಶ್ಯಕತೆಗಳು ಏನೆಂದು ನೀವು ತಿಳಿದುಕೊಳ್ಳಬೇಕು. ಶ್ರೇಯಸ್ ಅಯ್ಯರ್ ಎಲ್ಲಾ ಮೂರು ಪಂದ್ಯಗಳಲ್ಲಿ ಸಾಕಷ್ಟು ಮುಂಚೆಯೇ ಹೋಗಿದ್ದಾರೆ ಮತ್ತು ಅವರು ಸಾಕಷ್ಟು ಸಮಯವನ್ನು ಹೊಂದಿದ್ದರು" ಎಂದು ರಾಹುಲ್ ದ್ರಾವಿಡ್ ಹೇಳಿದರು.
ಆದಾಗ್ಯೂ , ರಾಹುಲ್ ದ್ರಾವಿಡ್ ಶ್ರೇಯಸ್ ಅವರನ್ನ ಬೆಂಬಲಿಸಿದ್ದು, ಕೆಲವೊಮ್ಮೆ ಆಟಗಾರರು ಇಂತಹ ವಿದೇಶಿ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಮತ್ತೆ ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಹೀಗಾಗಿ ಮ್ಯಾನೇಜ್ಮೆಂಟ್ ಸಾಧ್ಯವಾದಷ್ಟು ಆಟಗಾರರನ್ನ ಬೆಂಬಲಿಸುತ್ತದೆ. ಏಕೆಂದರೆ ಆ ಆಟಗಾರರು ಹಿಂದೆ ಉತ್ತಮ ಪ್ರದರ್ಶನ ನೀಡಿರುತ್ತಾರೆ ಎಂದಿದ್ದಾರೆ.
"ಹುಡುಗರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆಂದು ನಮಗೆ ತಿಳಿದಿದೆ ಮತ್ತು ನಾವು ಅವರನ್ನು ಸಾಧ್ಯವಾದಷ್ಟು ಬೆಂಬಲಿಸಲು ಬಯಸುತ್ತೇವೆ. ಕೆಲವೊಮ್ಮೆ ಅವರು ಉತ್ತಮ ಪ್ರವಾಸಗಳನ್ನು ಹೊಂದಿರುತ್ತಾರೆ ಮತ್ತು ಕೆಲವೊಮ್ಮೆ, ಅದು ಸಾಧ್ಯವಾಗುವುದಿಲ್ಲ, ಅದು ಕೇವಲ ಮಾರ್ಗವಾಗಿದೆ. ನಿಸ್ಸಂಶಯವಾಗಿ, ಬಹಳಷ್ಟು ಪೈಪೋಟಿ ಇರುತ್ತದೆ, ಅಂತಹ ಪರಿಸ್ಥಿತಿಯಲ್ಲಿ ಇದು ಸುಲಭವಲ್ಲ "ಎಂದು ದ್ರಾವಿಡ್ ಹೇಳಿದರು.
ಏಕದಿನ ಸರಣಿಯಲ್ಲಿ ಭಾರತ 0-3 ಅಂತರದಲ್ಲಿ ಹೀನಾಯ ಸೋಲಿನ ಮುಖಭಂಗ ಎದುರಿಸಿತು. ಪಾರ್ಲ್ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 31 ರನ್ಗಳಿಂದ ಪಂದ್ಯವನ್ನ ಸೋತರೆ, ಎರಡನೇ ಏಕದಿನ ಪಂದ್ಯದಲ್ಲಿ ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ ದಕ್ಷಿಣ ಆಫ್ರಿಕಾ ಏಳು ವಿಕೆಟ್ಗಳ ಜಯ ಸಾಧಿಸಿದೆ. ಇನ್ನು ಮೂರನೇ ಪಂದ್ಯದಲ್ಲಿ ಸ್ವಲ್ಪ ಹೋರಾಟದ ಪ್ರದರ್ಶನ ಕಂಡು ಬಂದರೂ ಸಹ ಭಾರತ ಗೆಲುವಿನ ದಡ ತಲುಪಲಿಲ್ಲ. ಪರಿಣಾಮ ದಕ್ಷಿಣ ಆಫ್ರಿಕಾ 3-0 ಅಂತರದಲ್ಲಿ ಟೂರ್ನಿ ಗೆದ್ದಿತು.
ಭಾರತ ಪರ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಅರ್ಧಶತಕ ದಾಖಲಿಸುವ ಮೂಲಕ ತಂಡಕ್ಕೆ ಆಧಾರವಾಗಿದ್ದು ಬಿಟ್ಟರೆ, ಕೆಳಕ್ರಮಾಂಕದಲ್ಲಿ ಒಂದು ಪಂದ್ಯದಲ್ಲಿ ಶಾರ್ದೂಲ್ ಠಾಕೂರ್, ಮತ್ತೊಂದು ಪಂದ್ಯದಲ್ಲಿ ದೀಪಕ್ ಚಹಾರ್ ರನ್ಗಳ ಕೊಡುಗೆ ನೀಡಿದ್ರು. ಆದ್ರೆ ಮತ್ಯಾವುದೇ ಬ್ಯಾಟ್ಸ್ಮನ್ ತಂಡಕ್ಕೆ ಕೊಡುಗೆ ನೀಡುವಲ್ಲಿ ವಿಫಲರಾದ್ರು.
ಫೆಬ್ರವರಿ 6ರಿಂದ ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಮತ್ತು ಟಿ20 ಸರಣಿಗಳನ್ನ ಆಡಲಿದೆ. ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.