ಶ್ರೇಯಸ್ ಅಯ್ಯರ್ಗೆ 3ನೇ ಕ್ರಮಾಂಕವನ್ನು ನೀಡಬೇಕು
2022ರ ಟಿ20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಅವರು ನಂ.3 ಕ್ರಮಾಂಕದಲ್ಲಿ ಆಡಿದರೆ, ಸೂರ್ಯಕುಮಾರ್ ಯಾದವ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಇನ್ನು ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಭಾಗವಾಗಿರದ ಕಾರಣ, ಶ್ರೇಯಸ್ ಅಯ್ಯರ್ ಬದಲಿ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಸೂರ್ಯಕುಮಾರ್ ಒಂದು ಕ್ರಮಾಂಕ ಮೇಲೆ ಆಡಿದರೆ ಹೆಚ್ಚು ಪ್ರಭಾವಶಾಲಿ ಆಟಗಾರನಾಗಬಹುದು ಎಂದು ಕೆಲವರು ಭಾವಿಸಿದ್ದಾರೆ.
ಇದೇ ವೇಳೆ ಭಾರತ ತಂಡದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಯೂಟ್ಯೂಬ್ನಲ್ಲಿನ ತನ್ನ ವೀಡಿಯೊದಲ್ಲಿ, ಶ್ರೇಯಸ್ ಅಯ್ಯರ್ ತಮ್ಮ ಹಕ್ಕನ್ನು ಗಳಿಸಿದ್ದಾರೆ ಮತ್ತು ಅವರಿಗೆ ಬ್ಯಾಟಿಂಗ್ನಲ್ಲಿ 3ನೇ ಕ್ರಮಾಂಕವನ್ನು ನೀಡಬೇಕು ಎಂದು ಹೇಳಿದ್ದಾರೆ.
4ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್
"3ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್, 4ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಗಟ್ಟಿಯಾಗಿದ್ದಾರೆ. 3ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಕಳುಹಿಸುವ ಸಂದರ್ಭ ಬರಬಹುದು, ಆದರೆ ಶ್ರೇಯಸ್ ಅಯ್ಯರ್ ಶಕ್ತಿ ಗಳಿಸಿದ್ದಾರೆ. ಹಾಗಾಗಿ ಅವರು ಮೂರನೇ ಸ್ಥಾನದಲ್ಲಿ ಮತ್ತು ಸೂರ್ಯಕುಮಾರ್ ಯಾದವ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ," ಎಂದು ರವಿಚಂದ್ರನ್ ಅಶ್ವಿನ್ ಹೇಳಿದರು.
ಮಧ್ಯಮ ಕ್ರಮಾಂಕದಲ್ಲಿ ಯಾವುದೇ ಎಡಗೈ ಬ್ಯಾಟ್ಸ್ಮನ್ ಇಲ್ಲ
ರಿಷಭ್ ಪಂತ್ ಆರಂಭಿಕ ಸ್ಥಾನವನ್ನು ಪಡೆದುಕೊಳ್ಳುವ ಸಾಧ್ಯತೆಗಳ ಬಗ್ಗೆಯೂ ಮಾತನಾಡಿದ ಭಾರತ ತಂಡದ ಅನುಭವಿ ಆಫ್ ಸ್ಪಿನ್ನರ್ ಆರ್ ಅಶ್ವಿನ್, ರಿಷಭ್ ಪಂತ್ ಇನ್ನಿಂಗ್ಸ್ ತೆರೆದರೆ, ವಾಷಿಂಗ್ಟನ್ ಸುಂದರ್ ಎಡಗೈ ಆಟಗಾರನಾಗಿ 5ನೇ ಕ್ರಮಾಂಕದ ಪಾತ್ರವನ್ನು ನಿರ್ವಹಿಸಬೇಕು ಎಂದು ತಿಳಿಸಿದರು.
"ಒಂದು ವೇಳೆ ರಿಷಭ್ ಪಂತ್ರನ್ನು ಅಗ್ರಸ್ಥಾನದಲ್ಲಿ ಆಡಿಸಿದರೆ, ನಮಗೆ ಮಧ್ಯಮ ಕ್ರಮಾಂಕದಲ್ಲಿ ಯಾವುದೇ ಎಡಗೈ ಬ್ಯಾಟ್ಸ್ಮನ್ ಇರುವುದಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಎಡಗೈ ಆಟಗಾರರಿಲ್ಲದಿರುವುದು ಕೂಡ ಹೆಚ್ಚು ಯೋಚನೆ ಮಾಡುವ ವಿಷಯವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಎಡ-ಬಲ ಸಂಯೋಜನೆಯನ್ನು ಹೊಂದಿರುವುದು ಟಿ20 ಪಂದ್ಯಗಳಲ್ಲಿ ಪ್ರಮುಖವಾಗಿದೆ," ಎಂದರು.
ಭಾರತಕ್ಕಿರುವ ಏಕೈಕ ಆಯ್ಕೆ ವಾಷಿಂಗ್ಟನ್ ಸುಂದರ್
"ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತಕ್ಕಿರುವ ಏಕೈಕ ಆಯ್ಕೆ ವಾಷಿಂಗ್ಟನ್ ಸುಂದರ್. ತಂಡವು ಆತನನ್ನು 5ನೇ ಸ್ಥಾನದಲ್ಲಿ ಬ್ಯಾಟ್ ಮಾಡಿಸುತ್ತಾರೆಯೇ ಎಂದು ನನಗೆ ತಿಳಿದಿಲ್ಲ. ವಾಷಿಂಗ್ಟನ್ ಸುಂದರ್ ಅವರಿಗೂ ಇದು ಪುನರಾಗಮನ ಸರಣಿಯಾಗಿದೆ," ಎಂದು ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟರು.
ಇನ್ನು ಹಿರಿಯ ಸ್ಪಿನ್ನರ್ ಆರ್ ಅಶ್ವಿನ್ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ತಂಡದ ಭಾಗವಾಗಿಲ್ಲ. ಅವರನ್ನು ಇನ್ಮುಂದೆ ಟಿ20 ಆಯ್ಕೆಗೆ ಪರಿಗಣಿಸಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದಕ್ಕೆ ಭಾರತ ತಂಡದ ಆಯ್ಕೆಗಾರರೇ ಸ್ಪಷ್ಟಪಡಿಸಬೇಕಿದೆ.