
ಬಹು ನಿರೀಕ್ಷೆಗಳನ್ನ ಹೊತ್ತುಕೊಂಡು, ಕನಸುಗಳನ್ನ ಕಟ್ಟಿಕೊಂಡು ಹರಿಣಗಳ ನಾಡು ದಕ್ಷಿಣ ಆಫ್ರಿಕಾಗೆ ಕಾಲಿಟ್ಟಿದ್ದ ಟೀಂ ಇಂಡಿಯಾಗೆ ಸರಣಿ ಸೋಲು ನುಂಗಲಾರದ ತುತ್ತಾಗಿದೆ. ದಕ್ಷಿಣ ಆಫ್ರಿಕಾದಲ್ಲಿನ ಸರಣಿ ಗೆಲುವು ಭಾರತಕ್ಕೆ ಕಬ್ಬಿಣದ ಕಡಲೆಯಾಗಿ ಮುಂದುವರಿದಿದೆ. ಚಿನ್ನದಂತಹ ಅವಕಾಶವನ್ನ ವಿರಾಟ್ ಕೊಹ್ಲಿ ಪಡೆ ಈ ಬಾರಿಯು ಕಳೆದುಕೊಂಡಿದೆ.
ಹೌದು, ಕೇಪ್ಟೌನ್ನ ನ್ಯೂಲ್ಯಾಂಡ್ಸ್ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ವಿಭಾಗ ಮತ್ತೊಮ್ಮೆ ಕೈ ಕೊಟ್ಟಿದ್ದು, ಟೀಂ ಇಂಡಿಯಾ ಆಫ್ರಿಕನ್ನರ ವಿರುದ್ಧ ಏಳು ವಿಕೆಟ್ಗಳ ಸೋಲು ಕಂಡಿದೆ. ಸೆಂಚುರಿಯನ್ ಅಂಗಳದಲ್ಲಿ ಗೆಲುವಿನ ಹೆಜ್ಜೆಯನ್ನಿಟ್ಟಿದ್ದ ಭಾರತಕ್ಕೆ, ಡೀನ್ ಎಲ್ಗರ್ ನಾಯಕತ್ವದ ದಕ್ಷಿಣ ಆಫ್ರಿಕಾ ಉಳಿದೆರಡು ಪಂದ್ಯಗಳಲ್ಲಿ ಸೋಲಿನ ರುಚಿ ತೋರಿಸಿ ಸರಣಿ ಗೆದ್ದುಕೊಂಡಿದೆ.
2-1ರಿಂದ ಸರಣಿ ಜಯಿಸಿದ ಅನನುಭವಿ ತಂಡ ದಕ್ಷಿಣ ಆಫ್ರಿಕಾ, ತನ್ನ ನಾಡಿನಲ್ಲಿ ತಾನೆಷ್ಟು ಬಲಿಷ್ಠ ಅನ್ನೋದನ್ನ ಪ್ರವಾಸಿಗರಿಗೆ ಮತ್ತೆ ಮನದಟ್ಟು ಮಾಡಿಕೊಟ್ಟಿದೆ. ಭಾರತದ ಪರ ಏಕಾಂಗಿ ಹೋರಾಟ ನಡೆಸಿದ ರಿಷಭ್ ಪಂತ್ ಸೆಂಚುರಿ ಸಿಡಿಸಿದ್ದೇ ಕೊಹ್ಲಿ ಪಡೆಗೆ ಅಂತಿಮ ಟೆಸ್ಟ್ ಪಂದ್ಯದ ಹೈಲೈಟ್ಸ್ ಆಗಿತ್ತು. ಪ್ರತಿ ವಿಭಾಗದಲ್ಲೂ ಮೇಲುಗೈ ಸಾಧಿಸಿದ ದಕ್ಷಿಣ ಆಫ್ರಿಕಾ ಸರಣಿಯನ್ನ ತನ್ನದಾಗಿಸಿಕೊಂಡಿತು.
ಟೆಸ್ಟ್ ಮಾನ್ಯತೆ ಪಡೆದಿರುವ ಎಲ್ಲಾ ರಾಷ್ಟ್ರಗಳಲ್ಲಿ ಸರಣಿ ಗೆದ್ದಿರುವ ಭಾರತಕ್ಕೆ ಈ ಬಾರಿಯೂ ದಕ್ಷಿಣ ಆಫ್ರಿಕಾದಲ್ಲಿ ಗೆಲುವು ಸಾಧ್ಯವಾಗಲಿಲ್ಲ. ಈ ಸೋಲು ವಿರಾಟ್ ಕೊಹ್ಲಿಗೆ ಅಷ್ಟೇ ಅಲ್ಲದೆ ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಮೊದಲ ಪರಾಜಯವಾಗಿದೆ.
ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್ ಹುದ್ದೆಗೇರಿದ ಬಳಿಕ ನ್ಯೂಜಿಲೆಂಡ್ ವಿರುದ್ಧ ಭಾರತ ಟೆಸ್ಟ್ ಹಾಗೂ ಟಿ-20 ಸರಣಿಯನ್ನ ಗೆದ್ದು ಬೀಗಿತು. ಟೆಸ್ಟ್ ಸರಣಿಯನ್ನ 1-0 ಅಂತರದಲ್ಲಿ ಟಿ20ಯಲ್ಲಿ 3-0ಯಿಂದ ಎದುರಾಳಿ ಪಡೆಯನ್ನ ವೈಟ್ ವಾಶ್ ಮಾಡಿತ್ತು. ಆದ್ರೆ ದುಪ್ಟಟ್ಟು ನಿರೀಕ್ಷೆಯನ್ನಿಟ್ಟುಕೊಂಡು ದಕ್ಷಿಣ ಆಫ್ರಿಕಾಕ್ಕೆ ಕಾಲಿಟ್ಟಿದ್ದ ಭಾರತಕ್ಕೆ ನಿರಾಸೆಯಾಗಿದೆ. ರಾಹುಲ್ ದ್ರಾವಿಡ್ ಕೋಚ್ ಹುದ್ದೆಗೇರಿದ ಬಳಿಕ ಭಾರತಕ್ಕೆ ಮೊದಲ ಸರಣಿ ಸೋಲು ಇದಾಗಿದೆ.
ಆದ್ರೆ ಈ ಸೋಲಿನಿಂದ ಅಷ್ಟು ಸುಲಭವಾಗಿ ಆತ್ಮವಿಶ್ವಾಸ ಕಳೆದುಕೊಳ್ಳದ ಭಾರತ ಏಕದಿನ ಸರಣಿಯಲ್ಲಿ ಕಂಬ್ಯಾಕ್ ಮಾಡುವ ಛಲ ಹೊಂದಿದೆ. ಜನವರಿ 19ರಿಂದ ಆರಂಭಗೊಳ್ಳಲಿರುವ 50 ಓವರ್ಗಳ ಮೂರು ಏಕದಿನ ಪಂದ್ಯಗಳನ್ನು ಭಾರತ ಆಡಲಿದೆ. ಮುಂಬರುವ ಏಕದಿನ ಸರಣಿಯ ವೇಳಾಪಟ್ಟಿ ಮತ್ತು ಸ್ಕ್ವಾಡ್ ಈ ಕೆಳಗಿದೆ.
ಮೊದಲ ಏಕದಿನ: ಜನವರಿ 19 , ಪಾರ್ಕ್, ಪಾರ್ಲ್, ಸಮಯ - 2.00 PM
ಎರಡನೇ ಏಕದಿನ: ಜನವರಿ 21, ಪಾರ್ಕ್, ಪಾರ್ಲ್, ಸಮಯ - 2.00 PM
ಮೂರನೇ ಏಕದಿನ: ಜನವರಿ 23, ನ್ಯೂಲ್ಯಾಂಡ್ಸ್, ಕೇಪ್ ಟೌನ್, ಸಮಯ - 2.00 PM
ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಏಕದಿನ ತಂಡ:
ಕೆ.ಎಲ್ ರಾಹುಲ್ (ಸಿ), ಶಿಖರ್ ಧವನ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶನ್ ಕಿಶನ್ (ವಿಕೆಟ್ ಕೀಪರ್), ಯುಜವೇಂದ್ರ ಚಾಹಲ್, ಆರ್. ಅಶ್ವಿನ್, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ (ಉಪನಾಯಕ) , ಭುವನೇಶ್ವರ್ ಕುಮಾರ್, ದೀಪಕ್ ಚಹಾರ್, ಪ್ರಸಿದ್ಧ ಕೃಷ್ಣ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್