ಮುಂಬೈ, ಫೆ. 8: ಭಾರತ ತಂಡಕ್ಕೆ ವಿಶ್ವಕಪ್ ನಲ್ಲಿ ಅಭಿಮಾನಿಗಳ ಬೆಂಬಲ ಅತ್ಯಗತ್ಯ ಎಂದು ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಹೇಳಿದ್ದಾರೆ. ಭಾರತ ತಂಡಕ್ಕೆ ಅನೇಕ ಸಂಕಷ್ಟದ ಸಂದರ್ಭ ಎದುರಾಗಬಹುದು. ಆದರೆ ಅಭಿಮಾನಿಗಳು ಧೃತಿಗೆಡಬಾರದು ಎಂದು ಹೇಳಿದ್ದಾರೆ.
ಪ್ರತಿಯೊಂದು ಪಂದ್ಯವನ್ನು ಗೆಲ್ಲಲೇಬೇಕು ಎಂದು ಅಪೇಕ್ಷೆಪಡುವ ಸ್ಥಿತಿಯಲ್ಲಿ ನಾವಿಲ್ಲ. ಕೆಲವೊಮ್ಮ ಸೋಲನ್ನು ಒಪ್ಪಿಕೊಳ್ಳಬೇಕಾಗುತ್ತದೆ ಮತ್ತು ಅದರಿಂದ ಪಾಠ ಕಲಿಯಬೇಕಾಗುತ್ತದೆ ಎಂದು ಎಂಆರ್ ಎಫ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.[ಅಂದು ಕಪಿಲ್ ಸಿಡಿಯದಿದ್ದರೆ ವಿಶ್ವಕಪ್ ದಕ್ಕುತ್ತಿರಲಿಲ್ಲ]
ನನಗೆ ಹೊಸ ಅನುಭವ
ಅಭಿಮಾನಿಗಳೆಲ್ಲ ಒಟ್ಟಾಗಿದ್ದರೆ ಅದು ಆಟಗಾರರನ್ನು ಹುರಿದುಂಬಿಸುತ್ತದೆ. ನಾನು ಈ ಹಿಂದಿನ ವಿಶ್ವಕಪ್ ಗಳಲ್ಲಿ ದೇಶಕ್ಕಾಗಿ ಆಡುತ್ತಲೇ ಬಂದಿದ್ದೆ. ಆದರೆ ಈ ಬಾರಿ ಹೊರಗೆ ನಿಂತು ನೋಡುತ್ತಿದ್ದೇನೆ. ಇದು ನನಗೊಂದು ಹೊಸ ಅನುಭವ ಎಂದು ಕ್ರಿಕೆಟ್ ದಿಗ್ಗಜ ಹೇಳಿದ್ದಾರೆ.
ಬಾಲ್ ಬಾಯ್ ನಿಂದ ಅಂಬಾಸಿಡರ್ ತನಕ
ವಿಶ್ವಕಪ್ ರಾಯಭಾರಿ ಯಾಗಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಕಳೆದ ಬಾರಿಯೂ ನಾನು ರಾಯಭಾರಿಯಾಗಿದ್ದೆ, ಆದರೆ ಆ ಪಂದ್ಯಾವಳಿಯನ್ನು ಆಡಿದ್ದೆ. ಆದರೆ ಈ ಬಾರಿ ಕೇವಲ ಅಂಬಾಸಿಡರ್ ಆಗಿ ಪಂದ್ಯ ವೀಕ್ಷಿಸುತ್ತೇನೆ ಎಂದು ಸಚಿನ್ ಹೇಳಿದ್ದಾರೆ.[ವಿಶ್ವಕಪ್: ಹುಬ್ಬೇರಿಸುವಂಥ ಕುತೂಹಲಕಾರಿ 10 ಅಂಶ]
1983 ರಿಂದ ನನಗೆ ಮತ್ತು ವಿಶ್ವಕಪ್ ಗೆ ಸಂಬಂಧ ಆರಂಭವಾಯಿತು. ಕಪಿಲ್ ದೇವ್ ವಿಶ್ವಕಪ್ ಎತ್ತಿದ್ದನ್ನು ನಾನು ನೋಡಿ, ಕೇಳಿ ಆನಂದಿಸಿದ್ದೆ. ಮುಂದಿನ ವಿಶ್ವಕಪ್ ನಲ್ಲಿ ವಾಖೆಂಡೆ ಕ್ರೀಡಾಂಗಣದಲ್ಲಿ ಬಾಲ್ ಬಾಯ್ ಆಗಿ ಪಂದ್ಯಾವಳಿಯ ಪಾತ್ರವಾಗಿದ್ದೆ. ಈಗ ವಿಶ್ವಕಪ್ ನ ಅಂಬಾಸಿಡರ್ ಆಗಿ ಆಯ್ಕೆ ಯಾಗಿದ್ದೇನೆ ಎಂದು ನೆನಪುಗಳನ್ನು ಬಿಚ್ಚಿಟ್ಟರು.
ಕಳೆದ ವಿಶ್ವಕಪ್ ದಕ್ಕಿಸಿಕೊಂಡ ಟೀಮ್ ಇಂಡಿಯಾದ ಪಾಲುದಾರರಾಗಿದ್ದ ಸಚಿನ್ 2013ರ ನವೆಂಬರ್ ತಿಂಗಳಲ್ಲಿ ವಿದಾಯ ಘೋಷಣೆ ಮಾಡಿದ್ದರು.
ಎಂಆರ್ ಎಫ್ ಸಂಸ್ಥೆಯೊಂದಿಗಿನ ಸಂಬಂಧ ಹಳೆಯದು
ನಾನು ಕ್ರಿಕೆಟ್ ಆಡಲು ಆರಂಭಿಸಿದ ನಂತರ ಅನೇಕ ತಂಬಾಕು ಕಂಪನಿಗಳು ತಮ್ಮ ಕಂಪನಿಯ ಸ್ಟಿಕರ್ ಇರುವ ಬ್ಯಾಟ್ ಬಳಸಿವುವಂತೆ ಕೋರಿದ್ದರು. ಆದರೆ ನಾನು ಅದನ್ನು ನಿರಾಕರಿಸಿದ್ದೆ. ಎಂಆರ್ ಎಫ್ ಕಂಪನಿಯ ಸ್ಟಿಕರ್ ಇರುವ ಬ್ಯಾಟ್ ಮೂಲಕವೇ ಅನೇಕ ಸಾವಿರ ರನ್ ಗಳಿಸಿದ್ದೇನೆ. ಕಂಪನಿಯೊಂದಿಗಿನ ಸಂಬಂಧ 12 ವರ್ಷಕ್ಕಿಂತ ಹಳೆಯದು ಎಂದು ನೆನಪು ಮಾಡಿಕೊಂಡರು.
ವೇಗದ ಬೌಲರ್ ಆಗಬೇಕೆಂದು ಕನಸು ಕಂಡಿದ್ದವನು ಬ್ಯಾಟ್ಸಮನ್ ಆಗಿ ಬದಲಾದೆ. ಅನೇಕರ ಮಾರ್ಗದರ್ಶನ ಇಂದು ಇಲ್ಲಿಗೆ ತಂದು ನಿಲ್ಲಿಸಿದೆ ಎಂದು ಹೇಳಿದರು.