ನವೆಂಬರ್ 23ರ ಮಂಗಳವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ವಿದ್ಯಮಾನಗಳು ಜರುಗಿದ್ದು, ಒಂದೆಡೆ ನ್ಯೂಜಿಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಿಂದ ವಿಶ್ರಾಂತಿಗೆಂದು ಹೊರಗುಳಿದಿದ್ದ ವಿರಾಟ್ ಕೊಹ್ಲಿ ಮುಂಬೈ ತಲುಪಿದ್ದು ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಲ್ಲಿ ನೆಟ್ ಪ್ರ್ಯಾಕ್ಟೀಸ್ ಆರಂಭಿಸಿದ್ದರೆ, ಮತ್ತೊಂದೆಡೆ ಟೀಮ್ ಇಂಡಿಯಾ ಆಟಗಾರರಿಗೆ ಹಲಾಲ್ ಮಾಂಸ ಸೇವನೆ ಕಡ್ಡಾಯಗೊಳಿಸಿದ ಬಿಸಿಸಿಐ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಹೀಗೆ ನವೆಂಬರ್ 23ರ ಕ್ರಿಕೆಟ್ ಸುದ್ದಿಗಳು ಈ ಕೆಳಕಂಡಂತಿವೆ..
* ನ್ಯೂಜಿಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ಪ್ರಕಟಿಸಲಾಗಿರುವ ತಂಡದಲ್ಲಿ ಹನುಮ ವಿಹಾರಿಗೆ ಆಡುವ ಅವಕಾಶವನ್ನು ನೀಡಿಲ್ಲ. ಈ ಕುರಿತಾಗಿ ಪ್ರತಿಕ್ರಿಯಿಸಿರುವ ಅಜಯ್ ಜಡೇಜಾ "ಹನುಮ ವಿಹಾರಿ ಓರ್ವ ಪಾಪದ ಹುಡುಗ, ಆತ ಟೀಮ್ ಇಂಡಿಯಾ ಪರ ಉತ್ತಮ ಪ್ರದರ್ಶನ ನೀಡಿದ್ದಾನೆ. ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದಷ್ಟು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಹನುಮ ವಿಹಾರಿ ಮಾಡಿದ ತಪ್ಪಾದರೂ ಏನು? ಆತ ತವರಿನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯ ಆಡುವುದನ್ನು ಬಿಟ್ಟು ಸೌತ್ ಆಫ್ರಿಕಾ ವಿರುದ್ಧ ಭಾರತ ಎ ತಂಡದಲ್ಲಿ ಪ್ರವಾಸವನ್ನು ಕೈಗೊಂಡು ಯಾಕೆ ಆಡಬೇಕು? ಟೀಮ್ ಇಂಡಿಯಾಗೆ ಆಯ್ಕೆ ಮಾಡದಿದ್ದ ಮೇಲೆ ಆತನನ್ನು ಭಾರತ ಎ ತಂಡಕ್ಕೂ ಆಯ್ಕೆ ಮಾಡಬೇಡಿ" ಎಂದು ಹೇಳಿಕೆ ನೀಡುವುದರ ಮೂಲಕ ಹನುಮ ವಿಹಾರಿಯನ್ನು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡದೇ ಭಾರತ ಎ ತಂಡದ ಜತೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕಳುಹಿಸಿರುವ ಆಯ್ಕೆಗಾರರ ವಿರುದ್ಧ ಅಜಯ್ ಜಡೇಜಾ ಕಿಡಿಕಾರಿದ್ದಾರೆ.
* "ಯಾವುದೇ ರೀತಿಯ ಟೂರ್ನಿ ಮತ್ತು ಸರಣಿಗಳಿರಲಿ ಯುಎಇ ಅದರಲ್ಲಿಯೂ ದುಬೈ ಆ ಪಂದ್ಯಗಳನ್ನು ತುಂಬಾ ಅಚ್ಚುಕಟ್ಟಾಗಿ ನಡೆಸಿಕೊಡುತ್ತಿರುವುದಕ್ಕೆ ಹೆಮ್ಮೆಯಿದೆ. ಅದರಲ್ಲಿಯೂ ಇಲ್ಲಿ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಒಳ್ಳೆಯ ರೀತಿಯಲ್ಲಿ ಆಯೋಜಿಸಿದ ಕಾರಣ ಯಶಸ್ವಿಯಾಗಿ ಮುಗಿದಿದೆ. ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಕೂಡಾ ನಡೆಯಿತು. ಭಾರತಕ್ಕೆ ನಾವು ಪರ್ಯಾಯ ದೇಶವಾಗಿದ್ದೇವೆ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ಮುಂದಿನ ದಿನಗಳಲ್ಲಿ ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಸಾಮಾನ್ಯ ಸರಣಿ ನಡೆಸುವುದಕ್ಕೆ ಇಚ್ಛಿಸುತ್ತಿದ್ದೇನೆ. ಈ ಕುರಿತಾಗಿ ಬಿಸಿಸಿಐನಲ್ಲಿರುವ ನನ್ನ ಗೆಳೆಯರ ಜತೆ ಕೂಡ ಚರ್ಚಿಸಿ, ಮನವೊಲಿಸುವ ಯತ್ನ ಮಾಡಲಿದ್ದೇನೆ. ಅವರು ಏನಾದರೂ ಒಪ್ಪಿಗೆ ಸೂಚಿಸಿದರೆ ದುಬೈನಲ್ಲಿ ಆ ಸರಣಿಯನ್ನು ನಡೆಸಲು ಇನ್ನೂ ಹೆಚ್ಚಿನ ಸಂತಸ ಪಡುತ್ತೇವೆ" ಎಂದು ದುಬೈ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಫಲಕ್ನಾಜ್ ಹೇಳಿದ್ದಾರೆ
* ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಾಮಾಜಿಕ ಜಾಲತಾಣಗಳಲ್ಲಿನ ತನ್ನ ಅಧಿಕೃತ ಖಾತೆಗಳಲ್ಲಿ 1 ನಿಮಿಷ 38 ಸೆಕೆಂಡ್ ಅವಧಿಯ ಮ್ಯೂಸಿಕ್ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದೆ. ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಮೊಹಮ್ಮದ್ ಸಿರಾಜ್ ಹಾಗೂ ಯಜುವೇಂದ್ರ ಚಹಾಲ್ ಸೇರಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿವಿಧ ಆಟಗಾರರು ವಿಭಿನ್ನವಾದ ಹೆಜ್ಜೆಗಳನ್ನು ಹಾಕುವುದರ ಮೂಲಕ ಹಾಡಿಗೆ ನೃತ್ಯ ಮಾಡಿದ್ದಾರೆ. ಈ ವಿಶೇಷ ಹಾಡಿಗೆ ಧನಶ್ರೀ ನಿರ್ದೇಶನ ಮತ್ತು ನೃತ್ಯ ಸಂಯೋಜನೆ ಪ್ರಮುಖ ಪಾತ್ರ ವಹಿಸಿದೆ.
* ಟೀಮ್ ಇಂಡಿಯಾ ಆಟಗಾರರು ಟೆಸ್ಟ್ ಸರಣಿಯಿಂದ ಹೊರಗುಳಿದು ವಿಶ್ರಾಂತಿ ತೆಗೆದುಕೊಳ್ಳುತ್ತಿರುವುದರ ಕುರಿತು ನ್ಯೂಜಿಲೆಂಡ್ ತಂಡದ ಮಾಜಿ ಕ್ರಿಕೆಟಿಗ ಇಯಾನ್ ಸ್ಮಿತ್ ಮಾತನಾಡಿದ್ದು ಬೇಸರ ವ್ಯಕ್ತಪಡಿಸಿದ್ದಾರೆ. "ಟೀಮ್ ಇಂಡಿಯಾ ಟೆಸ್ಟ್ ಪಂದ್ಯಗಳಿಂದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ರೀತಿಯ ದೊಡ್ಡ ಆಟಗಾರರನ್ನೇ ಕೈಬಿಟ್ಟು ವಿಶ್ರಾಂತಿ ನೀಡುತ್ತಿರುವುದು ಕುತೂಹಲ ಕೆರಳಿಸಿದೆ ಮತ್ತು ಬೇಸರವನ್ನೂ ಮೂಡಿಸಿದೆ" ಎಂದು ಇಯಾನ್ ಸ್ಮಿತ್ ಹೇಳಿಕೆ ನೀಡಿದ್ದಾರೆ.