ಸೆಪ್ಟೆಂಬರ್ 1 ರ ಬುಧವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ಪ್ರಮುಖ ಘಟನೆಗಳು ನಡೆದಿದ್ದು ಒಂದೆಡೆ ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಯ ಮೊದಲನೇ ಪಂದ್ಯದಲ್ಲಿ ಬಾಂಗ್ಲಾದೇಶ ಜಯ ಸಾಧಿಸಿದ್ದರೆ ಮತ್ತೊಂದೆಡೆ ಅಫ್ಘಾನಿಸ್ತಾನದ ಕ್ರಿಕೆಟ್ ತಂಡಕ್ಕೆ ತಾಲಿಬಾನ್ ಕ್ರಿಕೆಟ್ ಆಡಲು ಅನುಮತಿಯನ್ನು ನೀಡಿದೆ. ಹೀಗೆ ಸೆಪ್ಟೆಂಬರ್ 1 ರ ಬುಧವಾರದಂದು ಕ್ರಿಕೆಟ್ ಜಗತ್ತಿನಲ್ಲಿ ನಡೆದ ಘಟನೆಗಳ ಒಂದು ಕಿರುನೋಟ ಈ ಕೆಳಕಂಡಂತಿದೆ ನೋಡಿ..
* ಭಾರತ ಮತ್ತು ಇಂಗ್ಲೆಂಡ್ ನಡುವೆ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯದ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದಿಂದ ರಿಷಭ್ ಪಂತ್ ಅವರನ್ನು ಕೈಬಿಡಬೇಕು ಎಂದಿದ್ದಾರೆ. 'ರಿಷಭ್ ಪಂತ್ ಓರ್ವ ಪ್ರತಿಭಾವಂತ ಆಟಗಾರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಪ್ರತಿಯೊಬ್ಬರು ಫಾರ್ಮ್ ಪಡೆದುಕೊಳ್ಳುತ್ತಾರೆ, ಫಾರ್ಮ್ ಕಳೆದುಕೊಳ್ಳುತ್ತಾರೆ ಮತ್ತು ರಿಷಭ್ ಪಂತ್ನ್ನು ಈ ಪಂದ್ಯದಿಂದ ಹೊರಗಿಟ್ಟರೆ ಕೆಲ ಸಮಯ ವಿಶ್ರಾಂತಿಯನ್ನು ಪಡೆದುಕೊಂಡು ಉತ್ತಮ ಫಾರ್ಮ್ಗೆ ಮರಳಬಹುದು' ಎಂದು ದಾನಿಶ್ ಕನೇರಿಯಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ನಾಲ್ಕನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಬಹುದಾದ ಟೀಮ್ ಇಂಡಿಯಾದ 3 ಆಟಗಾರರು
* ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ವಿಫಲತೆಯ ಕುರಿತು ಮಾತನಾಡಿರುವ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅಪಾಯಕಾರಿ ಎಸೆತಗಳನ್ನು ಎದುರಿಸುವ ವೇಳೆ ವಿರಾಟ್ ಕೊಹ್ಲಿಯವರು ತಾಳ್ಮೆ ವಹಿಸಬೇಕು ಎಂಬ ಸಲಹೆಯನ್ನು ನೀಡಿದ್ದಾರೆ. ರೋಷಾವೇಶದ ಆಟವನ್ನು ಆಡಲು ಹೋಗಿ ವಿಕೆಟ್ ಒಪ್ಪಿಸುವ ಬದಲು ತಾಳ್ಮೆಯಿಂದ ಆಡಿದರೆ ಮಾತ್ರ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಗೆಲ್ಲಲು ಸಾಧ್ಯ ಎಂದು ಸಂಜಯ್ ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ. ಲಾರ್ಡ್ಸ್ ಕ್ರೀಡಾಂಗಣದಲ್ಲಿ ರೋಷಾವೇಶದ ಆಟವನ್ನು ಆಡುತ್ತಿದ್ದ ಇಂಗ್ಲೆಂಡ್ ಬೌಲರ್ಗಳು ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ತಾಳ್ಮೆಯ ಆಟವನ್ನು ಆಡಿದ ಸಲುವಾಗಿಯೇ ಅಮೋಘವಾದ ಜಯವನ್ನು ಸಾಧಿಸಿದರು, ಇಂಗ್ಲೆಂಡ್ ಬೌಲರ್ಗಳಿಗಿರುವ ತಾಳ್ಮೆ ವಿರಾಟ್ ಕೊಹ್ಲಿಗೆ ಇಲ್ಲ ಎಂದು ಸಂಜಯ್ ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ.
* ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಆರ್ ಅಶ್ವಿನ್ ಅವರನ್ನು ಸೇರಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಓವಲ್ ಟೆಸ್ಟ್ನಲ್ಲಿ ಆರ್ ಅಶ್ವಿನ್ ಸರಣಿಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿಯಲಿದ್ದಾರೆ ಎಂದು ದಿನೇಶ್ ಕಾರ್ತಿಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
* ಟಿ20 ವಿಶ್ವಕಪ್ಗೆ ಭಾರತ ತಂಡ ಆಯ್ಕೆಯ ಬಗ್ಗೆ ಎಎನ್ಐ ಜೊತೆ ಮಾತನಾಡಿದ ಮೂಲವೊಂದು ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಬಳಿಕ ತಂಡ ಆರಿಸಲಾಗುತ್ತದೆ ಎಂದು ಮಾಹಿತಿ ನೀಡಿದೆ. "ಮುಂದಿನ ಸೋಮವಾರ ಅಥವಾ ಮಂಗಳವಾರ ಟಿ20 ವಿಶ್ವಕಪ್ ಭಾರತ ತಂಡ ಪ್ರಕಟಿಸಲು ನಾವು ಎದುರು ನೋಡುತ್ತಿದ್ದೇವೆ. ಆದರೆ ದಿನಾಂಕ ಇನ್ನೂ ಖಾತರಿಯಾಗಿಲ್ಲ. ಆದರೆ ಮುಂದಿನ ಶುಕ್ರವಾರದೊಳಗೆ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಯಾಕೆಂದರೆ ಸೆಪ್ಟೆಂಬರ್ 10 ತಂಡಗಳನ್ನು ಪ್ರಕಟಿಸಲು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಂತಿಮ ದಿನವೆಂದು ಘೋಷಿಸಿದೆ," ಎಂದು ಮೂಲ ತಿಳಿಸಿದೆ. ಜಾಗತಿಕ ಮಟ್ಟದ ಕುತೂಹಲಕಾರಿ ಟೂರ್ನಿ ಟಿ20 ವಿಶ್ವಕಪ್ಗಾಗಿ ಸದ್ಯ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಮಾತ್ರ ತಮ್ಮ ತಂಡ ಪ್ರಕಟಿಸಿವೆ.
* ಟೆಸ್ಟ್ ಕ್ರಿಕೆಟ್ ಪುರುಷರ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಹಿಂದಿಕ್ಕಿದ್ದಾರೆ. 5ನೇ ರ್ಯಾಂಕಿಂಗ್ನಲ್ಲಿರುವ ರೋಹಿತ್ 773 ರೇಟಿಂಗ್ ಪಾಯಿಂಟ್ಸ್ ಕಲೆ ಹಾಕಿದ್ದರೆ, 6ನೇ ಶ್ರೇಯಾಂಕದಲ್ಲಿರುವ ವಿರಾಟ್ 766 ಪಾಯಿಂಟ್ಸ್ ಗಳಿಸಿದ್ದಾರೆ. ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ರೋಹಿತ್ ಕ್ರಮವಾಗಿ 36, 12, 83, 21, 19, 59 ರನ್ ಗಳಿಸಿದ್ದರೆ, ವಿರಾಟ್ ಕ್ರಮವಾಗಿ ವಿರಾಟ್ 0, 42, 20, 7, 55 ರನ್ ಗಳಿಸಿದ್ದರು. ಕಳಪೆ ಬ್ಯಾಟಿಂಗ್ ನೀಡಿದ್ದರಿಂದ ನಂ.1 ಸ್ಥಾನದಲ್ಲಿದ್ದ ಕೊಹ್ಲಿ ಹಂತ ಹಂತವಾಗಿ ಕೆಳ ಕುಸಿಯತೊಡಗಿದ್ದಾರೆ. ಇದಕ್ಕೂ ಮುನ್ನ ಕೊಹ್ಲಿ 5ನೇ ಸ್ಥಾನದಲ್ಲಿದ್ದರು.
* ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಗುರುವಾರ ನಡೆಯಲಿದೆ. ಈ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಉಪನಾಯಕ ಹಾಗೂ ವಿಕೆಟ್ ಕೀಪರ್ ಜೋಸ್ ಬಟ್ಲರ್ ಹೊರಗುಳಿಯಲಿದ್ದಾರೆ. ಹೀಗಾಗಿ ಇಂಗ್ಲೆಂಡ್ ತಂಡಕ್ಕೆ ನೂತನ ಉಪನಾಯಕನನ್ನು ಹೆಸರಿಸಲಾಗಿದೆ. ಆಲ್ರೌಂಡರ್ ಮೊಯೀನ್ ಅಲಿ ಆತಿಥೇಯ ತಂಡದ ನೂತನ ಉಪನಾಯಕನಾಗಿ ಜವಾಬ್ಧಾರಿಯನ್ನು ವಹಿಸಲಿದ್ದಾರೆ.
* ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಗುರುವಾರದಿಂದ ಆರಂಭವಾಗಲಿದೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ಸ್ಕ್ವಾಡ್ನಲ್ಲಿ ಪ್ರಮುಖ ಸೇರ್ಪಡೆ ಆಗಿದೆ. ಮೀಸಲು ಆಟಗಾರನಾಗಿ ಪ್ರವಾಸಕೈಗೊಂಡಿರುವ ಪ್ರಸಿದ್ಧ್ ಕೃಷ್ಣ ಟೀಮ್ ಇಂಡಿಯಾ ಸ್ಕ್ವಾಡ್ಗೆ ಸೇರ್ಪಡೆಯಾಗಿದ್ದಾರೆ. ಹೀಗಾಗಿ ನಾಲ್ಕನೇ ಟೆಸ್ಟ್ನ ಆಡುವ ಬಳಗದ ಆಯ್ಕೆಗೆ ಪ್ರಸಿದ್ಧ್ ಕೃಷ್ಣ ಕೂಡ ಲಭ್ಯವಾಗಲಿದ್ದಾರೆ.
ಓವಲ್ ಟೆಸ್ಟ್: ಪ್ರಸಿದ್ಧ್ ಕೃಷ್ಣ ತಂಡಕ್ಕೆ ಸೇರ್ಪಡೆಯಾಗಲು ಕಾರಣ ಬಿಚ್ಚಿಟ್ಟ ಬೌಲಿಂಗ್ ಕೋಚ್
* ತವರಿನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಚುಟುಕು ಸರಣಿಯಲ್ಲಿ 4-1 ಅಂತರದಿಂದ ಸರಣಿ ಗೆಲುವಿನ ಬಳಿಕ ನ್ಯೂಜಿಲೆಂಡ್ ವಿರುದ್ಧವೂ ಬಾಂಗ್ಲಾದೇಶ ಇದೇ ರೀತಿಯ ಪ್ರದರ್ಶನ ಮುಂದುವರಿಸಿದೆ. ಐದು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಅಮೋಘ ಗೆಲುವು ಸಾಧಿಸಿದೆ. ಇದು ಟಿ20 ಮಾದರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶ ಗೆದ್ದ ಮೊದಲ ಪಂದ್ಯ ಎಂಬುದು ಮತ್ತೊಂದು ವಿಶೇಷ. 11ನೇ ಪ್ರಯತ್ನದಲ್ಲಿ ಬಾಂಗ್ಲಾದೇಶ ಈ ಸಾಧನೆ ಮಾಡಿದೆ.
* ಇಡೀ ಅಫ್ಘಾನಿಸ್ತಾನದ ಆಡಳಿತವನ್ನು ತನ್ನ ಹಿಡಿತಕ್ಕೆ ತಂದುಕೊಂಡ ಬಳಿಕ ತಾಲಿಬಾನ್ ಇದೇ ಮೊದಲ ಬಾರಿಗೆ ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ಆಡಲು ಅನುಮತಿ ನೀಡಿದೆ. ಇದರೊಂದಿಗೆ ತಾಲಿಬಾನ್ ಆಡಳಿತದಲ್ಲಿ ಅಫ್ಘಾನ್ ಕ್ರಿಕೆಟ್ ತಂಡ ಎಂದಿನಂತೆ ಕ್ರಿಕೆಟ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಆಶಾಭಾವನೆ ಮೂಡಿದೆ.