ಗಾಯಾಳು ಧವನ್ ಜಾಗಕ್ಕೆ ಮತ್ತೊಬ್ಬ ಸ್ಫೋಟಕ ಬ್ಯಾಟ್ಸ್ಮನ್ ಸೇರ್ಪಡೆ?

ಲಂಡನ್, ಜೂನ್ 11: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿರುವ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಅವರ ಬದಲಿಗೆ ವಿಕೆಟ್ ಕೀಪರ್ ಹಾಗೂ ಸ್ಫೋಟಕ ಬ್ಯಾಟ್ಸ್ಮನ್ ರಿಷಬ್ ಪಂತ್ ಅವರು ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ.
ಶಿಖರ್ ಧವನ್ ಎಡಗೈ ಹೆಬ್ಬೆರಳಿಗೆ ತೀವ್ರ ಗಾಯವಾಗಿರುವುದರಿಂದ ಅವರು ಮೂರು ವಾರಗಳ ವಿಶ್ರಾಂತಿ ಪಡೆಯಬೇಕಾಗಿದೆ. ಹೀಗಾಗಿ ಅವರಿಂದ ತೆರವಾದ ಸ್ಥಾನಕ್ಕೆ ಮತ್ತೊಬ್ಬ ಆಟಗಾರನನ್ನು ಸೇರಿಸಿಕೊಳ್ಳಲು ಬಿಸಿಸಿಐ ಮುಂದಾಗಲಿದೆ. ಧವನ್ ಅವರ ವೈದ್ಯಕೀಯ ವರದಿ ಬಂದ ಬಳಿಕ ಅದನ್ನು ಐಸಿಸಿಗೆ ಸಲ್ಲಿಸಿ ಬೇರೆ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಲಿದೆ.
ಧವನ್ ಅವರು ವಿಶ್ವಕಪ್ ಮುಗಿಯುವ ಒಳಗೆ ಸಂಪೂರ್ಣವಾಗಿ ಚೇತರಿಸಿಕೊಳ್ಳದೆ ಇದ್ದರೆ ಬೇರೆ ಆಟಗಾರನ ಆಯ್ಕೆ ಅನಿವಾರ್ಯವಾಗಲಿದೆ. ಇದರಿಂದ ಧವನ್ ಜಾಗಕ್ಕೆ ಯಾವ ಆಟಗಾರನನ್ನು ಆಯ್ಕೆ ಮಾಡಬಹುದು ಎಂಬ ಕುತೂಹಲ ಮೂಡಿದೆ.
ಧವನ್ ಅವರ ಸ್ಥಾನಕ್ಕೆ ಬ್ಯಾಟ್ಸ್ಮನ್ ಆಯ್ಕೆಗೆ ಆದ್ಯತೆ ನೀಡಬೇಕಿದೆ. ಈಗಾಗಲೇ ತಂಡದಲ್ಲಿರುವ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಮತ್ತು ಆಲ್ರೌಂಡರ್ ವಿಜಯ್ ಶಂಕರ್ ನಡುವೆ ಪೈಪೋಟಿಯಿದೆ. ಈ ನಡುವೆ ಧವನ್ ಸ್ಥಾನಕ್ಕೆ ಆಯ್ಕೆಯಾಗುವ ಆಟಗಾರ ಕೂಡ ಈ ಕ್ರಮಾಂಕದಲ್ಲಿ ಸ್ಥಾನ ಗಿಟ್ಟಿಸಲು ಹೋರಾಟ ನಡೆಸಬೇಕಿದೆ. ಕ್ರಮಾಂಕದಲ್ಲಿ ಬದಲಾವಣೆ ಮಾಡಿ ಧೋನಿ ಮುಂಬಡ್ತಿ ಪಡೆಯುವ ಯೋಜನೆ ರೂಪಿಸಿದರೆ, ಮತ್ತೊಬ್ಬ ಆಲ್ರೌಂಡರ್ ರವೀಂದ್ರ ಜಡೇಜಾ ಕೂಡ ತಂಡದಲ್ಲಿ ಸ್ಥಾನ ಗಿಟ್ಟಿಸಿದರೂ ಅಚ್ಚರಿಯಿಲ್ಲ.

ರೋಹಿತ್ ಜತೆ ರಾಹುಲ್ ಆರಂಭ
ತಂಡದ ನಾಲ್ಕನೆಯ ಕ್ರಮಾಂಕದ ಆಟಗಾರನ ಸಮಸ್ಯೆ ತಲೆದೋರಿದಾಗ ಕೆ.ಎಲ್. ರಾಹುಲ್ ಅವರನ್ನು ಈ ಸ್ಥಾನಕ್ಕೆ ಸೂಕ್ತ ಎಂದು ಆಯ್ಕೆ ಮಾಡಲಾಗಿತ್ತು. ಆರಂಭಿಕ ಆಟಗಾರನಾಗಿರುವ ರಾಹುಲ್, ಈ ಕೊರತೆಯನ್ನು ನೀಗಿಸುತ್ತಿದ್ದಾರೆ. ಆದರೆ, ಧವನ್ ಗಾಯದಿಂದ ಹೊರಹೋಗಬೇಕಿರುವುದರಿಂದ ರೋಹಿತ್ ಶರ್ಮಾ ಅವರೊಂದಿಗೆ ಆರಂಭಿಕರಾಗಿ ರಾಹುಲ್ ಕಣಕ್ಕಿಳಿಯಬೇಕಾಗುತ್ತದೆ. ಆಗ ನಾಲ್ಕನೆಯ ಕ್ರಮಾಂಕ ಮತ್ತೆ ತೆರವಾಗಲಿದೆ.

ನ್ಯೂಜಿಲೆಂಡ್ ವಿರುದ್ಧ ಯಾರಿಗೆ ಅವಕಾಶ?
ಸ್ಕ್ಯಾನ್ ವರದಿ ಬರುವವರೆಗೂ ಧವನ್ ಇಂಗ್ಲೆಂಡ್ನಲ್ಲಿಯೇ ಇರಲಿದ್ದಾರೆ. ಹೀಗಾಗಿ ಜೂನ್ 13ರಂದು ನಡೆಯಲಿರುವ ಭಾರತ-ನ್ಯೂಜಿಲೆಂಡ್ ತಂಡಗಳ ನಡುವಿನ ಪಂದ್ಯದಲ್ಲಿ ಧವನ್ ಅವರ ಬದಲಿ ಆಟಗಾರ ತಂಡವನ್ನು ಸೇರಿಕೊಳ್ಳುವುದು ಕಷ್ಟ. ಇದರಿಂದ ಕಾರ್ತಿಕ್ ಅಥವಾ ವಿಜಯ ಶಂಕರ್ ಈ ಕ್ರಮಾಂಕದಲ್ಲಿ ಆಡುವ ಸ್ಥಾನ ಪಡೆಯುವ ಸಾಧ್ಯತೆ ಇದೆ.
ಆಸೀಸ್ಗೂ ಗಾಯದ ಬರೆ, ಸ್ಟೊಯ್ನಿಸ್ ಬದಲಿಗೆ ಮತ್ತೊಬ್ಬ ಆಲ್ರೌಂಡರ್ ಎಂಟ್ರಿ

ಮೂವರು ಆಟಗಾರರಲ್ಲಿ ಯಾರು?
ಮೂಲಗಳ ಪ್ರಕಾರ ರಿಸರ್ವ್ ಆಟಗಾರರ ಪಟ್ಟಿಯಲ್ಲಿರುವ ಸ್ಫೋಟಕ ಬ್ಯಾಟ್ಸ್ಮನ್ ರಿಷಬ್ ಪಂತ್ ಅವರಿಗೆ ಬಿಸಿಸಿಐ ಬುಲಾವ್ ನೀಡುವ ಸಾಧ್ಯತೆ ಹೆಚ್ಚಾಗಿದೆ. ಬಲಗೈ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಅವರ ಹೆಸರೂ ಈ ಸ್ಥಾನಕ್ಕೆ ಕೇಳಿಬಂದಿದೆ. ಅಂಬಟಿ ರಾಯುಡು ನಾಲ್ಕನೆಯ ಕ್ರಮಾಂಕದಲ್ಲಿ ಆಡಿ ಅನುಭವ ಹೊಂದಿದ್ದರೂ ವಿಶ್ವಕಪ್ಗೆ ತಮ್ಮನ್ನು ಆಯ್ಕೆ ಮಾಡದೆ ಇರುವುದಕ್ಕೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಕಾರಣಕ್ಕೆ ಅವರನ್ನು ಪರಿಗಣಿಸುವ ಸಾಧ್ಯತೆ ಕಡಿಮೆ.

ಪಂತ್ಗೆ ಅವಕಾಶ
ರಿಷಬ್ ಪಂತ್ ಅವರನ್ನು ವಿಶ್ವಕಪ್ನಿಂದ ಕೈಬಿಟ್ಟಿದ್ದಕ್ಕೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದರು. ಪಂತ್ ಕೂಡ ಬೇಸರ ತೋಡಿಕೊಂಡಿದ್ದರು. ಈಗ ಧವನ್ ಅವರ ಗಾಯ ರಿಷಬ್ ಪಂತ್ ಅವರಿಗೆ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲು ದಾರಿ ಮಾಡಿಕೊಟ್ಟಿದೆ. ಧವನ್ ಅವರ ಗಾಯದ ಸ್ವರೂಪದ ಕುರಿತ ವರದಿ ಬಂದ ಬಳಿಕ ತಂಡದ ಮ್ಯಾನೇಜ್ಮೆಂಟ್ ಅವರ ಬದಲಿಗೆ ಬೇರೆ ಆಟಗಾರನ ಆಯ್ಕೆಗೆ ಅಧಿಕೃತ ಮನವಿ ಸಲ್ಲಿಸಲಿದೆ. ಆಗ ಪಂತ್ ಅವರಿಗೆ ಆದ್ಯತೆ ನೀಡಲಿದೆ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮ ವರದಿ ಹೇಳಿವೆ.
ಡಿವಿಲಿಯರ್ಸ್ ಕರೆ ಮಾಡಿದ್ದರು, ಆದರೆ ಕಾಲ ಮಿಂಚಿಹೋಗಿತ್ತು: ಡು ಪ್ಲೆಸಿಸ್

ಪಂತ್ ಆಯ್ಕೆಗೆ ಪೀಟರ್ಸನ್ ಸಲಹೆ
ಶಿಖರ್ ಧವನ್ ಅವರ ಸ್ಥಾನಕ್ಕೆ ರಿಷಬ್ ಪಂತ್ ಅವರನ್ನು ಆಯ್ಕೆ ಮಾಡುವಂತೆ ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಸಲಹೆ ನೀಡಿದ್ದಾರೆ. 'ಶಿಖಾ ವಿಶ್ವಕಪ್ನಿಂದ ಹೊರಹೋಗುತ್ತಿದ್ದಾರೆ. ಕೂಡಲೇ ಪಂತ್ ಅವರನ್ನು ಕರೆಯಿಸಿಕೊಳ್ಳಿ. ಕೆಎಲ್ ರಾಹುಲ್ ಆರಂಭಿಕನಾಗಿ ಮತ್ತು ಪಂತ್ 4ನೇ ಕ್ರಮಾಂಕದಲ್ಲಿ... ಎಂದು ಪೀಟರ್ಸನ್ ಟ್ವೀಟ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications