
ಪುಣೆ, ಡಿಸೆಂಬರ್ 4: ಸತತ ಮೂರು ಡ್ರಾಗಳಿಗೆ ತೃಪ್ತಿ ಪಟ್ಟಿರುವ ಒಡಿಶಾ ಎಫ್ಸಿ ಇಲ್ಲಿನ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಬುಧವಾರ (ಡಿಸೆಂಬರ್ 4) ಬೆಂಗಳೂರು ಎಫ್ ಸಿ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಜಯದಾಖಲಿಸುವ ಗುರಿ ಹೊಂದಿದೆ.
ಎಟಿಕೆ ಮತ್ತು ಕೇರಳ ಬ್ಲಾಸ್ಟರ್ಸ್ ವಿರುದ್ಧ ಗೋಲಿಲ್ಲದ ಡ್ರಾ ಹಾಗೂ ಚೆನ್ನೈಯಿನ್ ಎಫ್ ಸಿ ವಿರುದ್ಧ 2-2 ಡ್ರಾ ದ ನಂತರ ಜೋಸೆಫ್ ಗೊಂಬಾವ್ ಪಡೆ ಹಾಲಿ ಚಾಂಪಿಯನ್ನರ ವಿರುದ್ಧ ಜಯ ಗಳಿಸುವ ಹಂಬಲದೊಂದಿಗೆ ಅಂಗಣಕ್ಕೆ ಇಳಿಯಲಿದೆ. ಫಲಿತಾಂಶಕ್ಕಾಗಿ ಹಾತೊರೆಯುತ್ತಿರುವ ಗೊಂಬಾವ್ ಬೆಂಗಳೂರು ವಿರುದ್ಧ ಕಠಿಣ ಸವಾಲನ್ನು ಎದುರಿಸಬೇಕಾಗಿದೆ. ಇದುವರೆಗೂ ನಡೆದಿರುವ ಪಂದ್ಯಗಳಲ್ಲಿ ಗೊಂಬಾವ್ ಪಡೆ ಒಂದೇ ರೀತಿಯ ಆಟವನ್ನು ಪ್ರದರ್ಶಿಸಿತ್ತು. ಆದರೆ ಉತ್ತಮವಾಗಿ ಆಡಿದರೂ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಿಲ್ಲ. ಈಗ ಡ್ರಾ ಗಿಂತ ತಂಡಕ್ಕೆ ಜಯದ ಅಗತ್ಯ ಹೆಚ್ಚಾಗಿದೆ. ಬೆಂಗಳೂರು ಲೀಗ್ ನಲ್ಲಿ ಇದುವರೆಗೂ ಸೋಲು ಕಂಡಿಲ್ಲ, ಉತ್ತಮ ಡಿಫೆನ್ಸ್ ವಿಭಾಗವನ್ನು ಕಂಡಿರುವ ತಂಡ ಎದುರಾಳಿಗೆ ನೀಡಿದ್ದು ಕೇವಲ ಎರಡು ಗೋಲು.
''ಬೆಂಗಳೂರು ವಿರುದ್ಧ ಆಡುವುದೇ ಅದ್ಭುತ . ಬಲಿಷ್ಠ ತಂಡವಾಗಿರುವ ಬೆಂಗಳೂರು ಐಎಸ್ ಎಲ್ ನಲ್ಲಿ ಪ್ರಸಕ್ತ ಚಾಂಪಿಯನ್ ಕೂಡ, ಎರಡೂ ತಂಡಗಳು ಒಂದೇ ಮಾದರಿಯ ಆಟವನ್ನು ಆಡುತ್ತಿರುವುದರಿಂದ ನಾಳೆಯ ಪಂದ್ಯ ಕುತೂಹಲವೆನಿಸಿದೆ, ಈ ಪಂದ್ಯಕ್ಕಾಗಿ ನಾವು ಉತ್ತಮ ರೀತಿಯಲ್ಲಿ ಸಜ್ಜಾಗಿದ್ದೇವೆ, ಅದೇ ರೀತಿ ತಂಡದ ಮನಸ್ಥಿತಿಯೂ ಉತ್ತಮವಾಗಿದೆ,'' ಎಂದು ಗೊಂಬಾವ್ ಹೇಳಿದ್ದಾರೆ.

ಅರಿದಾನೆ ಸ್ಯಾಂಟನ ಅವರನ್ನೇ ಹೆಚ್ಚು ಆತುಕೊಂಡಿರುವ ಒಡಿಶಾ, ಅವರಿಂದ ನಾಲ್ಕು ಗೋಲಿನ ಯಶಸ್ಸು ಕಂಡಿದೆ. ಬೆಂಗಳೂರಿನ ಬ್ಯಾಕ್ ಲೈನ್ ಗೆ ತಡೆಯೊಡ್ಡಲು ಅವರು ಸಮರ್ಥರೆನಿಸಿದ್ದಾರೆ. ಅದೇ ರೀತಿ ಕ್ಸಿಸ್ಕೋ ಹೆರ್ನಾಂಡೀಸ್ ಬೆಂಗಳೂರಿಗೆ ಸವಾಲಾಗುವ ಆಟಗಾರ. ಅವರು ಕೂಡ ಇದುವರೆಗೂ ಮೂರು ಗೋಲು ಗಳಿಸಿ ತಂಡದ ಯಶಸ್ಸಿನಲ್ಲಿ ಭಾಗಿಯಾಗಿದ್ದಾರೆ. ತನ್ನ ಮಾಜಿ ತಂಡದ ವಿರುದ್ಧ ಹೇಗೆ ಆಡಬೇಕೆಂಬುದನ್ನು ಅರಿತಿರುವ ಹೆರ್ನಾಂಡೀಸ್ ಪಾತ್ರ ನಾಳೆಯ ಪಂದ್ಯದಲ್ಲಿ ಪ್ರಮುಖವಾಗಿದೆ.
ಎರಡೂ ತಂಡಗಳಲ್ಲಿ ಉತ್ತಮ ಮಿಡ್ ಫೀಲ್ಡ್ ಆಟಗಾರರು ಇರುವುದರಿಂದ ಇತ್ತಂಡಗಳ ನಡುವಿನ ಹೋರಾಟ ಕುತೂಹಲಕ್ಕೆ ಸಾಕ್ಷಿಯಾಗಲಿದೆ. ಮಾರ್ಕೊಸ್ ಟೆಬರ್, ವಿನೀತ್ ರಾಯ್, ಹಾಗೂ ಹೆರ್ನಾಂಡೀಸ್ ತಂಡದ ಬೆನ್ನೆಲುಬಾಗಿದ್ದಾರೆ. ಅದಕ್ಕೆ ಪ್ರತಿಯಾಗಿ ಬೆಂಗಳೂರು ತಂಡದಲ್ಲಿ ಎರಿಕ್ ಪಾರ್ಥಲು , ಡಿಮ್ಯಾಸ್ ಡೆಲ್ಗಡೊ ಮತ್ತು ರಫಾಯೆಲ್ ಅಗಸ್ಟೊ ಬಲಿಷ್ಠರೆನಿಸಿದ್ದಾರೆ.
''ಪಂದ್ಯದ ಮೇಲೆ ಹಿಡಿತ ಸಾಧಿಸಲು ಒಡಿಶಾ ನಮ್ಮ ವಿರುದ್ಧ ಸೆಣೆಸಲಿದೆ, ಆದ್ದರಿಂದ ನಾಳೆಯ ಪಂದ್ಯ ಕುತೂಹಲದಿಂದ ಕೂಡಿರುತ್ತದೆ. ಜೋಸೆಫ್ ಗೊಂಬಾವ್ ಅವರು ಕಠಿಣ ಶ್ರಮ ವಹಿಸುತ್ತಿದ್ದಾರೆ. ಅವರೊಬ್ಬ ಪ್ರಾಮಾಣಿಕವ್ಯಕ್ತಿ ಹಾಗೂ ಉತ್ತಮ ಕೋಚ್, ಅವರು ಆಕ್ರಮಣಕಾರಿ ಫುಟ್ಬಾಲ್ ಆಟವನ್ನು ಇಷ್ಟಪಡುತ್ತಾರೆ,'' ಎಂದು ಬೆಂಗಳೂರು ತಂಡದ ಪ್ರಧಾನ ಕೋಚ್ ಕಾರ್ಲೆಸ್ ಕ್ವಾಡ್ರಟ್ ಹೇಳಿದ್ದಾರೆ.
ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 1-1 ಗೋಲಿನಿಂದ ಡ್ರಾ ಗಳಿಸಿ ಬೆಂಗಳೂರು ಇಲ್ಲಿಗೆ ಆಗಮಿಸಿತು. ರಾಬಿನ್ ಸಿಂಗ್ ಕೊನೆಯ ಕ್ಷಣದಲ್ಲಿ ಗಳಿಸಿದಗೋಳು ಬೆಂಗಳೂರಿನ ಜಯವನ್ನು ಕಸಿದುಕೊಂಡಿತು. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಪಂದ್ಯದುದ್ದಕ್ಕೂ ಪ್ರಭುತ್ವ ಸಾಧಿಸಿತ್ತು, ಹಾಗೆ ನೋಡಿದರೆ ಹೆಚ್ಚು ಗೋಲು ಗಳಿಸಬಹುದಾಗಿತ್ತು.
ಸುನಿಲ್ ಛೆಟ್ರಿ ಗೋಲು ಗಳಿಸಲು ಆರಂಭಿಸಿಯೂ ಬೆಂಗಳೂರು ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಗೋಲು ಗಾಳಿಸಲಿಲ್ಲ. ಮೈಕೆಲ್ ಒನವು ಮತ್ತು ಆಶಿಕ್ ಕುರುನಿಯನ್ ಗಾಯ ಗೊಂಡಿರುವುದು ತಂಡಕ್ಕೆ ತುಂಬಲಾರದ ನಷ್ಟವಾಗಿದೆ. ಉದಾಂತ್ ಸಿಂಗ್ ಕೂಡ ತಮ್ಮ ಹೆಸರಿನಲ್ಲಿ ದಾಖಲಿಸಿಕೊಂಡಿರುವುದು ಕೇವಲ ಒಂದು ಗೋಲು.
''ನಾವು ಹೆಚ್ಚಿನ ಪಂದ್ಯಗಳಲ್ಲಿ ಪ್ರಭುತ್ವ ಸಾಧಿಸಿದ್ದೇವೆ. ನಾವು ಆ ಪಂದ್ಯಗಳಲ್ಲಿ ಜಯದ ಯಶಸ್ಸು ಕಾಣಬಹುದಾಗಿತ್ತು. ಕೆಲವೊಂದು ಸಂಗತಿಗಳಲ್ಲಿ ನಾವು ಉತ್ತಮವಾಗಿ ಆಡಿಲ್ಲ, ಅವುಗಳ ವಿಷಯದಲ್ಲಿ ನಾವು ಇನ್ನೂ ಕೆಲಸ ಮಾಡಬೇಕಾಗಿದೆ, ಗೋಲು ಗಳಿಸದೆ ಇರುವ ಬಗ್ಗೆ ನನಗೆ ಚಿಂತೆ ಇಲ್ಲ, ಸುನಿಲ್ ಅನುಭವಿ ಆಟಗಾರ, ಅವರು ನಮಗೆ ಪರಿಹಾರ ನೀಡಿದ್ದಾರೆ. ಆಶಿಕ್ ಹಾಗೂ ಉದಾಂತ್ ಯುವ ಆಟಗಾರರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ,'' ಎಂದು ಕ್ವಾಡ್ರಟ್ ಹೇಳಿದರು.