ಕಾರವಾರ, ಮೇ 28: ಬದಲಾಗುತ್ತಿರುವ ಕಾಲದಲ್ಲಿ ಮಹಿಳೆಯರು ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಬರೀ ಪುರುಷರಿಗೆ ಮಾತ್ರವೆನಿಸಿದ್ದ ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರೂ ಪಾಲ್ಗೊಳ್ಳುತ್ತಿದ್ದಾರೆ.
ಶಿಕ್ಷಣ ಮತ್ತು ಆಧುನಿಕತೆ ಬೆಳೆದಂತೆ ಮಹಿಳೆಯರು ಚಿಕ್ಕ ವಯಸ್ಸಿನಲ್ಲಿರುವಾಗಲೇ ಕ್ರೀಡಾ ಕ್ಷೇತ್ರಕ್ಕೆ ಸೇರಿಕೊಳ್ಳುತ್ತಿದ್ದಾರೆ. ಇದರಿಂದ ಇಂದು ಕಾಮನ್ವೆಲ್ತ್, ಒಲಿಂಪಿಕ್, ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಮಹಿಳಾ ಕ್ರೀಡಾಪಟುಗಳನ್ನು ನೋಡಬಹುದು. ಕ್ರೀಡಾ ಕ್ಷೇತ್ರದ ಎಲ್ಲ ಆಟಗಳಲ್ಲಿ ಮಹಿಳೆಯರು ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ದೈಹಿಕ ಕ್ಷಮತೆ ಹೊಂದಿರುವ ವಾಲಿಬಾಲ್ ಕ್ರೀಡೆಯಲ್ಲಿ ಮಹಿಳೆಯರು ಭಾಗವಹಿಸುತ್ತಿದ್ದಾರೆ.
ನಮ್ಮೂರ ಪ್ರತಿಭೆ: ಕುಸ್ತಿಯಲ್ಲಿ 'ಕರ್ನಾಟಕದ ಕಿಶೋರಿ'ಯಾದ ಹಳಿಯಾಳದ ಸುಜಾತಾ ಪಾಟೀಲ್
ಅದೇ ರೀತಿ ಬಾಲ್ಯದಲ್ಲೇ ವಾಲಿಬಾಲ್ ಕ್ರೀಡೆ ಬಗ್ಗೆ ಆಸಕ್ತಿ ಹೊಂದಿದ್ದ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ಕಾನಗೋಡದ ಲಲಿತಾ ನಾಯ್ಕ, ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಕ್ರೀಡಾ ಸ್ಫೂರ್ತಿ ಮೆರೆದಿದ್ದಾರೆ.
ಲಲಿತಾ ನಾಯ್ಕ ಸಿದ್ದಾಪುರ ತಾಲ್ಲೂಕಿನ ಕಾನಗೋಡ ಗ್ರಾಮದ ಅಜ್ಜಪ್ಪ ನಾಯ್ಕ ಹಾಗೂ ಸರೋಜಾ ನಾಯ್ಕ ದಂಪತಿಯ ಕಿರಿಯ ಪುತ್ರಿ. ಮನೆಯಲ್ಲಿ ಬಡತನವಿದ್ದರೂ ತಮ್ಮ ಇಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂಬ ಹಂಬಲ ಈ ದಂಪತಿಯದ್ದು. ಇದರ ನಡುವೆಯೇ ಲಲಿತಾ ನಾಯ್ಕ, ವಾಲಿಬಾಲ್ ಕಲಿತು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು.
ಅಜ್ಜಪ್ಪ ನಾಯ್ಕ ಪುತ್ರಿ ಲಲಿತಾ ನಾಯ್ಕ್, ಧಾರವಾಡದ ಜೆಎಸ್ಎಸ್ ವಿದ್ಯಾಗಿರಿ ಕಾಲೇಜಿನಲ್ಲಿ ದ್ವಿತೀಯ ಪಿಯು ಅಧ್ಯಯನ ಮಾಡಿದ್ದಾರೆ. ಪುತ್ರ ಶಶಿಕುಮಾರ್ ಕಾರವಾರದಲ್ಲಿ ಎಂಎಸ್ಸಿ ಮಾಡಿದ್ದಾರೆ.
ಕ್ರೀಡಾ ಶಾಲೆಗೆ ಆಯ್ಕೆ
ಲಲಿತಾ ನಾಯ್ಕ್ ಕಾನಗೋಡದಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವಾಗಲೇ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದರು. ಇದನ್ನು ಗಮನಿಸಿದ ಪಾಲಕರು ಹಾಗೂ ಶಿಕ್ಷಕರು, ಕ್ರೀಡೆಯಲ್ಲಿ ಭಾಗವಹಿಸಲು ಅವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದರು. ಅದರ ಪರಿಣಾಮವಾಗಿ ವಿವಿಧ ಕ್ರೀಡಾಕೂಟಗಳಲ್ಲಿ ವಾಲಿಬಾಲ್ ತಂಡಗಳಲ್ಲಿ ಭಾಗವಹಿಸಿದ್ದ ಅವರು, ಉತ್ತಮ ಆಟಗಾರರಾಗಿ ಹೊರಹೊಮ್ಮಿದ್ದರು.
ಅಷ್ಟರಲ್ಲೇ ಬೆಂಗಳೂರಿನ ಜಯಪ್ರಕಾಶ ನಾರಾಯಣ ಕ್ರೀಡಾ ಶಾಲೆಗೆ ಎಂಟನೇ ತರಗತಿಯ ಪ್ರವೇಶಕ್ಕೆ ಕರೆಯಲಾಗಿದ್ದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಅಲ್ಲಿಯೂ ಆಯ್ಕೆಯಾದರು. ಎಸ್ಎಸ್ಎಲ್ಸಿಯವರೆಗೆ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲೂ ಭಾಗವಹಿಸಿದ್ದರು.
2018ರಲ್ಲಿ ರಾಜ್ಯ ಜೂನಿಯರ್ ವಾಲಿಬಾಲ್ ತಂಡಕ್ಕೆ ಆಯ್ಕೆಯಾಗಿ, ರಾಜಸ್ಥಾನದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಿದರು. ಅದೇ ವರ್ಷದಲ್ಲಿ ಚಂಡೀಗಡದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು. 'ಖೇಲೋ ಇಂಡಿಯಾ' ಕ್ರೀಡಾಕೂಟದಲ್ಲೂ ಭಾಗವಹಿಸಿದ್ದಾರೆ.
ಲಲಿತಾ ನಾಯ್ಕ್ಗೆ ಹಲವು ಪ್ರಶಸ್ತಿ
ರಾಷ್ಟ್ರಮಟ್ಟದಲ್ಲಿ ಕ್ರೀಡಾ ಸಾಧನೆ ತೋರುತ್ತಿರುವ ಲಲಿತಾ ಅವರಿಗೆ ಈಗಾಗಲೇ ಹಲವು ಪ್ರಶಸ್ತಿಗಳು ಸಂದಿವೆ. ವಿವಿಧ ಸಂಘ- ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ. ಎರಡು ರಾಷ್ಟ್ರೀಯ ಪ್ರಮಾಣಪತ್ರವನ್ನೂ ಹೊಂದಿರುವ ಅವರಿಗೆ, ಇತ್ತೀಚಿಗೆ ಸಿದ್ದಾಪುರದ ತರಳಿ ಮಠವು 'ತರಳಿ ಪ್ರಶಸ್ತಿ'ಯನ್ನೂ ನೀಡಿದೆ.