ಕಾರವಾರ, ಮೇ 19: ಉತ್ತರ ಕನ್ನಡ ಜಿಲ್ಲೆ ಕುಮಟಾದ 'ದಯಾನಿಲಯ ವಿಶೇಷ ಶಾಲೆ'ಯ ವಿದ್ಯಾರ್ಥಿ ಸಂದೇಶ್ ಹರಿಕಂತ್ರ 'ಒಲಿಂಪಿಕ್ಸ್ (ವಿಶೇಷ) ವರ್ಲ್ಡ್ ಗೇಮ್ಸ್'ಗೆ ಆಯ್ಕೆಯಾಗಿದ್ದರು ಎಂಬುದು ರಾಜ್ಯಕ್ಕೆ ಹೆಮ್ಮೆಯ ವಿಷಯ.
ನಮ್ಮೂರ ಪ್ರತಿಭೆ: ಎರಡನೇ ಬಾರಿಗೆ ಟಿಸಿಎಸ್ ವಿಶ್ವ 10ಕೆ ಮ್ಯಾರಥಾನ್ ಓಡಿದ 94 ವರ್ಷದ ದತ್ತಾತ್ರೇಯ
ಅವರಿಗೆ ಈಗ 21 ವರ್ಷ. 18 ವರ್ಷಗಳಿರುವಾಗ ವಿಶೇಷ ಮಕ್ಕಳ ಸಾಲಿನಲ್ಲಿ ಗುರುತಿಸಿಕೊಂಡಿದ್ದ ಅವರಿಗೆ 'ದಯಾನಿಲಯ' ಆಶ್ರಯ ನೀಡಿತ್ತು. 2019ರ ಮಾರ್ಚ್ 14ರಿಂದ 21ರವರೆಗೆ ಗಲ್ಫ್ ರಾಷ್ಟ್ರದ ಅಬುದಾಬಿಯಲ್ಲಿ ನಡೆದಿದ್ದ ವಿಶೇಷ ಒಲಿಂಪಿಕ್ಸ್ನ 'ಟೇಬಲ್ ಟೆನ್ನಿಸ್'ಗೆ ಅವರು ಪ್ರವೇಶಾವಕಾಶ ಪಡೆದುಕೊಂಡಿದ್ದರು, ಈ ಸ್ಪರ್ಧೆಗಾಗಿ ಇನ್ನಷ್ಟು ತಯಾರಿ ನಡೆಸಿದ್ದರು.
ಸಾಧನೆಗೆ ದೇಹದ ವಿಕಲತೆ ಅಡ್ಡಿ ಬರಲ್ಲ
"ಇಲ್ಲಿ ಹಲವು ವಿಶೇಷ ಮಕ್ಕಳಿದ್ದಾರೆ. ಆದರೆ, ಸಂದೇಶ್ ಅವರೆಲ್ಲರಿಗಿಂತಲೂ ಬಹಳ ಚುರುಕು. ಪ್ರತಿದಿನ ಸುಮಾರು ಆರು ಗಂಟೆಗಳ ಕಾಲ 'ಟೇಬಲ್ ಟೆನ್ನಿಸ್' ತರಬೇತಿ ಪಡೆಯುತ್ತಾನೆ. ಶಾಲೆಯಲ್ಲಿ ಕಲಿಸುವ ವೃತ್ತಿಪರ ಶಿಕ್ಷಣದ ಜತೆಗೆ, ಕ್ರೀಡಾ ತರಬೇತಿಯನ್ನೂ ಪಡೆದು ಸಾಧನೆಗೆ ದೇಹದ ವಿಕಲತೆ ಅಡ್ಡಿ ಬರುವುದಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾನೆ. ಆ ಮೂಲಕ ಒಲಿಂಪಿಕ್ಸ್ನಲ್ಲಿ ಪ್ರವೇಶ ಪಡೆದಿದ್ದಾನೆ," ಎಂದು ಸಂಸ್ಥಾಪಕ ಸಿರಿಲ್ ಲೋಪಿಸ್ ಹೆಮ್ಮೆಯಿಂದ ಹೇಳಿದ್ದರು.
ಬಡ ಕುಟುಂಬ
ಸಂದೇಶ್ ಹರಿಕಂತ್ರ, ಕುಮಟಾ ತಾಲ್ಲೂಕಿನ ಬೆಟ್ಕುಳಿಯ ಕೃಷ್ಣ ಹಾಗೂ ಮಹಾಲಕ್ಷ್ಮಿ ದಂಪತಿಯ ಪುತ್ರ. ತಂದೆ ಕೃಷ್ಣ ಮೀನುಗಾರಿಕೆಗೆ ತೆರಳುತ್ತಾರೆ. ತಾಯಿ ಮಹಾಲಕ್ಷ್ಮಿ ಮೀನು ಮಾರಾಟದಲ್ಲಿ ತೊಡಗಿಕೊಳ್ಳುತ್ತಾರೆ. ಇಬ್ಬರೂ 'ಅಂಬಿಗರ ಕಾಯಕ'ದಿಂದ ಬರುವ ಅಲ್ಪ-ಸ್ವಲ್ಪ ಆದಾಯದಿಂದಲೇ ಬದುಕಿನ ಬಂಡಿ ನಡೆಸುತ್ತಿದ್ದಾರೆ.
ಈ ನಡುವೆ ಸ್ಪಷ್ಟವಾಗಿ ಮಾತನಾಡಲು ಬಾರದ, ಮಂದ ಬುದ್ಧಿಯವರಾಗಿದ್ದ ಸಂದೇಶ್ ಅವರನ್ನು ನೋಡಿಕೊಳ್ಳಲು ಪಾಲಕರಿಗೆ ಕಷ್ಟ ಎನಿಸಿತ್ತು. ಹೀಗಾಗಿ ಏಳು ವರ್ಷಗಳ ಹಿಂದೆ 'ದಯಾನಿಲಯ'ಕ್ಕೆ ದಾಖಲಿಸಿದರು. ಇದೀಗ ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಒಲಿಂಪಿಕ್ಸ್ನ 'ಟೇಬಲ್ ಟೆನಿಸ್'ಗೆ ಕರ್ನಾಟಕದಿಂದ ಕ್ರೀಡಾಳು ಆಯ್ಕೆಯಾಗಿರುವುದು ಇತಿಹಾಸದಲ್ಲೇ ಇದು ಮೊದಲ ಬಾರಿಯಾಗಿದೆ.
ಗುರುವಾದ ಅಳ್ವೆಕೋಡಿಯ ಸಿರಿಲ್ ಲೋಪಿಸ್
ಕುಮಟಾದ ತಾಲ್ಲೂಕಿನ ಅಳ್ವೆಕೋಡಿಯ ಸಿರಿಲ್ ಲೋಪಿಸ್, ಮಾಹಿತಿ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಬಿ.ಇಡಿ ಮಾಡಿದ್ದಾರೆ. ಗಲ್ಫ್ನ ಕೊಲ್ಲಿಯ ಅಬುಧಾಬಿಯ ಬ್ಯಾಂಕ್ವೊಂದರಲ್ಲಿ ಸಿಕ್ಕಿದ್ದ ಉದ್ಯೋಗವನ್ನು ತ್ಯಜಿಸಿದ ಅವರು, ತಮ್ಮ ಊರಿನಲ್ಲೇ 'ದಯಾನಿಲಯ'ವನ್ನು ಸ್ಥಾಪಿಸಿದರು. ಇಲ್ಲಿರುವ ಬುದ್ಧಿಮಾಂದ್ಯ, ಅಂಗವಿಕಲ ಮಕ್ಕಳನ್ನು ಅರ್ಥ ಮಾಡಿಕೊಂಡು, ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಇದೀಗ ಸಂದೇಶ ಅವರಿಗೂ ಕೂಡ ಸಿರಿಲ್ ಲೋಪಿಸ್ ಗುರುವಾಗಿದ್ದರು.
ಪಂಜಾಬ್ನ ರಾಷ್ಟ್ರೀಯ ಕ್ರೀಡಾ ಸಂಸ್ಥೆ ಹಾಗೂ ಗ್ವಾಲಿಯರ್ನ ರಾಷ್ಟ್ರೀಯ ದೈಹಿಕ ಶಿಕ್ಷಣ ಸಂಸ್ಥೆಯಲ್ಲಿ ಸಿರಿಲ್ ಟೇಬಲ್ ಟೆನಿಸ್ ತರಬೇತಿ ಪಡೆದುಕೊಂಡಿದ್ದಾರೆ. ಹೀಗಾಗಿ, ಶಾಲೆಯ ಮಕ್ಕಳನ್ನೂ ಕ್ರೀಡೆಯಲ್ಲಿ ಸಾಧನೆ ತೋರುವಂತೆ ತರಬೇತಿ ನೀಡುತ್ತಿದ್ದಾರೆ.
ಸಂದೇಶ್ ಹರಿಕಂತ್ರ ಕ್ರೀಡಾ ಸಾಧನೆ:
* ಕುಮಟಾ, ಕಾರವಾರದಲ್ಲಿ ನಡೆದ ವಿಶೇಷ ಮಕ್ಕಳ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಪ್ರಥಮ
* ಉಡುಪಿಯಲ್ಲಿ ನಡೆದ ವಿಭಾಗಮಟ್ಟದ ಸ್ಪರ್ಧೆಯಲ್ಲಿ ಪ್ರಥಮ
* ಬೆಂಗಳೂರು, ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಪ್ರಥಮ
* ಪಂಜಾಬ್, ಹರಿಯಾಣ, ಮಹಾರಾಷ್ಟ್ರ, ದೆಹಲಿ ಹಾಗೂ ರಾಜಸ್ಥಾನಗಳಲ್ಲಿ ನಡೆದ ಟೇಬಲ್ ಟೆನ್ನಿಸ್ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ