ನವದೆಹಲಿ, ಜೂನ್ 25: ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು 'ಟೋಕಿಯೊ ಒಲಿಂಪಿಕ್ಸ್ 2020'ಗೆ ಭಾರತೀಯ ಒಲಿಂಪಿಕ್ ತಂಡದ ಅಧಿಕೃತ ಆಶಯ ಗೀತೆಯನ್ನು ಲೋಕಾರ್ಪಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ರಸಪ್ರಶ್ನೆಗಳು, ಸೆಲ್ಫೀ ಪಾಯಿಂಟ್ಗಳು, ಸಂವಾದಗಳು ಮತ್ತು ಒಲಿಂಪಿಕ್ಸ್ ಕುರಿತ ಚರ್ಚೆಗಳಂತಹ ವಿವಿಧ ಚಟುವಟಿಕೆಗಳ ಮೂಲಕ ರಾಷ್ಟ್ರವ್ಯಾಪಿ #Cheer4India ಅಭಿಯಾನಕ್ಕೆ ಕ್ರೀಡಾಸಚಿವರು ಚಾಲನೆ ನೀಡಿದ್ದಾರೆ.
ಒಲಿಂಪಿಕ್ ದಿನದ ಸಂದರ್ಭದಲ್ಲಿ ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ನವದೆಹಲಿಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಾರತೀಯ ಒಲಿಂಪಿಕ್ ತಂಡದ ಅಧಿಕೃತ 'ಆಶಯ ಗೀತೆ'ಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಭಾರತ ಸರಕಾರದ ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ರವಿ ಮಿತ್ತಲ್, ಐಒಎ ಅಧ್ಯಕ್ಷ ನರೀಂದರ್ ಬಾತ್ರಾ, ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದ ಡಿಜಿ ಸಂದೀಪ್ ಪ್ರಧಾನ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಗೀತೆಯನ್ನು ಜನಪ್ರಿಯ ಹಿನ್ನಲೆ ಗಾಯಕ ಮೋಹಿತ್ ಚೌಹಾಣ್ ಸಂಯೋಜಿಸಿ ಹಾಡಿದ್ದಾರೆ. ಅವರ ಪತ್ನಿ ಶ್ರೀಮತಿ ಪ್ರತ್ನಾ ಗಹಿಲೋಟೆ ಅವರು ಈ ಗೀತೆಗೆ ಸಾಹಿತ್ಯ ರಚನೆ ಮಾಡಿದ್ದಾರೆ.
ಟೋಕಿಯೋ ಒಲಿಂಪಿಕ್ಸ್: ಭಾರತದ ಸಮವಸ್ತ್ರವನ್ನು ಅನಾವರಣಗೊಳಿಸಿದ ಕ್ರೀಡಾ ಸಚಿವ ಕಿರಣ್ ರಿಜಿಜು
ಆಶಯ ಗೀತೆ ಲೋಕಾರ್ಪಣೆ ಮಾಡಿದ ಕೇಂದ್ರ ಕ್ರೀಡಾ ಸಚಿವ ಶ್ರೀ ಕಿರಣ್ ರಿಜಿಜು ಅವರು ಈ ಬಗ್ಗೆ ಮಾತನಾಡಿದರು. "ಟೋಕಿಯೊ ಒಲಿಂಪಿಕ್ಸ್ಗೆ ಹೋಗುವ ಭಾರತೀಯ ಕ್ರೀಡಾಪಟುಗಳನ್ನು ಬೆಂಬಲಿಸಲು ಮತ್ತು ಪ್ರೇರೇಪಿಸಲು ಇಡೀ ರಾಷ್ಟ್ರವು ಒಗ್ಗೂಡಬೇಕು ಎಂಬುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯಾಗಿದೆ. ಇಂದು ಅಧಿಕೃತ ಆಶಯ ಗೀತೆಯ ಬಿಡುಗಡೆಯು ಈ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ" ಎಂದಿದ್ದಾರೆ.
"ಮೋಹಿತ್ ಚೌಹಾಣ್ ಸಂಯೋಜಿಸಿದ ಮತ್ತು ಹಾಡಿದ ಈ ಸ್ಪೂರ್ತಿಯ ಗೀತೆ ಪ್ರತಿಷ್ಠಿತ ವೇದಿಕೆಯಲ್ಲಿ ದೇಶಕ್ಕೆ ವೈಭವವನ್ನು ತರುವ ಪ್ರತಿಯೊಬ್ಬ ಕ್ರೀಡಾಪಟುವಿನ ಕನಸಿಗೂ ಉತ್ಸಾಹವನ್ನು ತುಂಬುತ್ತದೆ. ಕ್ರೀಡಾ ಸಚಿವಾಲಯವು ರಸಪ್ರಶ್ನೆಗಳು, ಸೆಲ್ಫೀ ಪಾಯಿಂಟ್ಗಳು, ಸಂವಾದಗಳು ಮತ್ತು ಒಲಿಂಪಿಕ್ಸ್ ಕುರಿತ ಚರ್ಚೆಗಳಂತಹ ವಿವಿಧ ಚಟುವಟಿಕೆಗಳ ಮೂಲಕ ರಾಷ್ಟ್ರವ್ಯಾಪಿ #Cheer4India ಅಭಿಯಾನವನ್ನು ಪ್ರಾರಂಭಿಸಿದೆ. ಭಾರತದ ಉನ್ನತ ಕ್ರೀಡಾಪಟುಗಳು ಭಾರತಕ್ಕೆ ಕೀರ್ತಿ ತರಲು ತಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಅವರನ್ನು ಹುರಿದುಂಬಿಸಲು ಪ್ರತಿಯೊಬ್ಬ ಭಾರತೀಯರೂ ಮುಂದೆ ಬಂದು ಈ ಆಂದೋಲನದಲ್ಲಿ ಪಾಲ್ಗೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ" ಎಂದು ಹೇಳಿದ್ದಾರೆ.