ಏಷ್ಯಾ ಕಪ್ 2022: ತಂಡದಲ್ಲಿದ್ದರೂ ಭಾರತದ ಈ ಮೂವರಿಗೆ ಆಡುವ ಅವಕಾಶ ದೊರೆಯುವುದು ಅನುಮಾನ!

ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಕೆಎಲ್ ರಾಹುಲ್ ನೇತೃತ್ವದ ಭಾರತ ತಂಡ ವೈಟ್ವಾಶ್ ಮೂಲಕ ವಶಕ್ಕೆ ಪಡೆದುಕೊಂಡಿದೆ. ಶುಬ್ಮನ್ ಗಿಲ್ ಅವರ ಅದ್ಭುತ ಪ್ರದರ್ಶನ ಹಾಗೂ ದೀಪಕ್ ಚಾಹರ್ ಅವರ ಕಮ್ಬ್ಯಾಕ್ ಭಾರತ ತಂಡಕ್ಕೆ ಈ ಟೂರ್ನಿಯಲ್ಲಿನ ಸಕಾರಾತ್ಮಕ ಅಂಶವಾಗಿದೆ. ಈ ಮೂಲಕ ಕೆಎಲ್ ರಾಹುಲ್ ನಾಯಕನಾಗಿ ಚೊಚ್ಚಲ ಸರಣಿ ಗೆದ್ದಂತಾಗಿದೆ.
ಇದೀಗ ಭಾರತ ತಂಡ ಏಷ್ಯಾ ಕಪ್ 2022ರ ಆವೃತ್ತಿಗೆ ಸಜ್ಜಾಗುತ್ತಿದ್ದು ಯುಎಇಗೆ ಹಾರಲು ಸಜ್ಜಾಗಿದೆ. ಆಗಸ್ಟ್ 27ರಿಂದ ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧದ ಪಂದ್ಯದೊಂದಿಗೆ ಈ ಸರಣಿಗೆ ಚಾಲನೆ ದೊರೆಯಲಿದ್ದು ಭಾರತದ ಅಭಿಯಾನ ಆಗಸ್ಟ್ 28ರಂದು ಪಾಕಿಸ್ತಾನದ ವಿರುದ್ಧದ ಪಂದ್ಯದ ಮೂಲಕ ಶುರುವಾಗಲಿದೆ. ದುಬೈ ಇಂಟರ್ನ್ಯಾಶನಲ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಈ ಟೂರ್ನಿಗೆ ಭಾರತದ 15 ಆಟಗಾರರ ತಂಡವನ್ನು ಈಗಾಗಲೇ ಘೋಷಣೆ ಮಾಡಲಾಗಿದ್ದು ರೋಹಿತ್ ಶರ್ಮಾ ನೇತೃತ್ವದಲ್ಲಿ ಇನ್ನೇನು ದುಬೈಗೆ ಹಾರಲು ಸಿದ್ದವಾಗಿದೆ.
ಇನ್ನು ಈ 15 ಆಟಗಾರರ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದರೂ ಭಾರತ ತಂಡದ ಈ ಮೂವರು ಆಟಗಾರರು ಏಷ್ಯಾ ಕಪ್ನ ಆಡುವ ಬಳಗದಲ್ಲಿ ಸ್ಥಾನ ಪಡೆಯುವುದು ಅನುಮಾನವೆನಿಸಿದೆ. ಯಾರು ಆ ಮೂವರು ಆಟಗಾರರು? ಮುಂದೆ ಓದಿ..

ಆಲ್ರೌಂಡರ್ ದೀಪಕ್ ಹೂಡಾ
ಬರೋಡಾದ ಕ್ರಿಕೆಟಿಗ ದೀಪಕ್ ಹೂಡಾ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡು ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರ. ಟೀಮ್ ಇಂಡಿಯಾದ ಅದೃಷ್ಟ ಎಂದು ಕರೆಸಿಕೊಂಡಿದ್ದಾರೆ ದೀಪಕ್ ಹೂಡಾ. ಇವರು ಭಾರತದ ಆಡುವ ಬಳಗದಲ್ಲಿ ಕಾಣಿಸಿಕೊಂಡ ಯಾವ ಪಂದ್ಯದಲ್ಲಿಯೂ ಭಾರತ ಈವರೆಗೆ ಸೋಲು ಕಂಡಿಲ್ಲ. ಆದರೆ ಭಾರತ ತಂಡದ ಮಧ್ಯಮ ಕ್ರಮಾಂಕದಲ್ಲಿ ಈಗಾಗಲೇ ಆಟಗಾರರು ತುಂಬಿದ್ದಾರೆ. ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಮಧ್ಯಮ ಕ್ರಮಾಂಕದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಹೀಗಾಗಿ ಅದ್ಭುತ ಫಾರ್ಮ್ನಲ್ಲಿದ್ದರೂ ಹೂಡಾ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆಯುವ ಸಾಧ್ಯತೆ ತೀರಾ ಕಡಿಮೆಯಿದೆ.

ಯುವ ಸ್ಪಿನ್ನರ್ ರವಿ ಬಿಷ್ಣೋಯ್
ಸಿಕ್ಕ ಅವಕಾಶದಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿರುವ ಆಟಗಾರರಲ್ಲಿ ರವಿ ಬಿಷ್ಣೋಯ್ ಕೂಡ ಒಬ್ಬರು. ಈ ಪ್ರದರ್ಶನದಿಂದಾಗಿಯೇ ಬಿಷ್ಣೋಯ್ ಏಷ್ಯಾಕಪ್ಗೆ ಆಯ್ಕೆ ಮಾಡಿರುವ 1ರ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಆದರೆ ಈ ಬಾರಿಯ ಏಷ್ಯಾ ಕಪ್ನಲ್ಲಿ ಭಾರತ ತಂಡದಲ್ಲಿ ಅನುಭವಿ ಹಾಗೂ ಉತ್ಕೃಷ್ಟ ದರ್ಜೆಯ ಸ್ಪಿನ್ನರ್ಗಳು ಅದ್ಭುತ ಫಾರ್ಮ್ನಲ್ಲಿದ್ದಾರೆ. ಆರ್ ಅಶ್ವಿನ್, ಯುಜುವೇಂದ್ರ ಚಾಹಲ್ ಮತ್ತು ರವೀಂದ್ರ ಜಡೇಜಾ ತಂಡದಲ್ಲಿದ್ದಾರೆ. ಹೀಗಾಗಿ ದೊಡ್ಡ ವೇದಿಕೆಯಲ್ಲಿ ರವಿ ಬಿಷ್ಣೋಯ್ ಸ್ಥಾನ ಪಡೆಯುವ ಸಾಧ್ಯತೆ ತೀರಾ ಕಡಿಮೆಯಿದೆ. ಈ ಆಟಗಾರರು ಗಾಯಗೊಂಡರೆ ಮಾತ್ರವೇ ಸ್ಥಾನ ದೊರೆಯಬಹುದು.

ಯುವ ವೇಗಿ ಆವೇಶ್ ಖಾನ್
ಐಪಿಎಲ್ನಲ್ಲಿ ನಿಡಿದ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ ಆವೇಶ್ ಖಾನ್ ಏಷ್ಯಾ ಕಪ್ನಲ್ಲಿ ಭಾಗವಹಿಸುವ ಭಾರತ ತಂಡದಲ್ಲಿ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಮಡದ ಪ್ರಮುಖ ವೇಗಿಗಳಾದ ಜಸ್ಪ್ರೀತ್ ಬೂಮ್ರಾ ಹಾಗೂ ಹರ್ಷಲ್ ಪಟೇಲ್ ಗಾಯಗೊಂಡಿರುವುದು ಕೂಡ ಆವೇಶ್ ಖಾನ್ಗೆ ಭಾರತ ತಂಡದಲ್ಲಿ ಸ್ಥಾನ ದೊರೆಯಲು ಪ್ರಮುಖ ಕಾರ್ಣವಾಗಿದೆ. ಆದರೆ ಇತ್ತೀಚೆಗೆ ಆವೇಶ್ ಖಾನ್ ಅವರಿಂದ ಪರಿಣಾಮಕಾರಿ ಪ್ರದರ್ಶನ ಬಂದಿಲ್ಲ. ಇನ್ನು ಯುಎಇ ಪಿಚ್ ಸ್ಪಿನ್ನರ್ಗಳಿಗೆ ಹೆಚ್ಚಿನ ನೆರವು ನೀಡುತ್ತಿರುವ ಕಾರಣ ಆವೇಶ್ ಖಾನ್ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಭಾರತ ಬಹುತೇಕ ಭುವನೇಶ್ವರ್ ಕುಮಾರ್, ಅರ್ಷ್ದೀಪ್ ಸಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ವೇಗಿಗಳ ಕೋಟಾದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.
ಏಷ್ಯಾಕಪ್ ಟೂರ್ನಿಗೆ ಪ್ರಕಟವಾದ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications