IPLಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ಗೆ ಆಘಾತ: 14 ಕೋಟಿಗೆ ಹರಾಜಾಗಿದ್ದ ದೀಪಕ್ ಚಹಾರ್ಗೆ ಗಾಯ

ಇದೇ ತಿಂಗಳಿನಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಬರೋಬ್ಬರಿ 14 ಕೋಟಿ ರೂಪಾಯಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹರಾಜಾಗಿದ್ದ ದೀಪಕ್ ಚಹಾರ್ ಐಪಿಎಲ್ಗೂ ಮುನ್ನ ಗಾಯಗೊಂಡಿರುವುದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗೆ ಆತಂಕ ಮೂಡಿಸಿದ್ದಾರೆ.
ಸ್ಟಾರ್ ಆಲ್ ರೌಂಡರ್ ಮತ್ತು ಪವರ್ ಪ್ಲೇ ಸ್ಪೆಷಲಿಸ್ಟ್ ದೀಪಕ್ ಚಹಾರ್ ಮಂಡಿರಜ್ಜು ಗಾಯದಿಂದ ಭಾರತ ತಂಡದಿಂದ ಹೊರಗುಳಿದಿದ್ದಾರೆ. ಭಾನುವಾರ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ T20I ನಲ್ಲಿ ತಮ್ಮ ಅಮೋಘ ಬೌಲಿಂಗ್ನೊಂದಿಗೆ ಪವರ್ಪ್ಲೇನಲ್ಲಿ ಎರಡು ನಿರ್ಣಾಯಕ ವಿಕೆಟ್ಗಳನ್ನು ಪಡೆದ ದೀಪಕ್ ಚಹಾರ್, ನಂತರ ಮಂಡಿರಜ್ಜು ಗಾಯದಿಂದ ಮೈದಾನವನ್ನು ತೊರೆದರು.

ಎರಡು ವಿಕೆಟ್ ಕಬಳಿಸಿ ಅಬ್ಬರಿಸಿದ್ದ ದೀಪಕ್ ಚಹಾರ್
ಓಪನರ್ಗಳಿಬ್ಬರನ್ನ ಪೆವಿಲಿಯನ್ಗೆ ಅಟ್ಟುವಲ್ಲಿ ಸ್ವಿಂಗ್ ಬೌಲರ್ ದೀಪಕ್ ಚಹಾರ್ ಯಶಸ್ವಿಯಾದ್ರು. ಕೈಲ್ ಮೇಯರ್ಸ್ 6, ಶೈ ಹೋಪ್ 8 ರನ್ಗಳಿಸಿ ವಿಕೆಟ್ ಒಪ್ಪಿಸಿದ್ರು.
ಎರಡು ವಿಕೆಟ್ ಪಡೆದು ಖುಷಿಯಲ್ಲಿದ್ದ ದೀಪಕ್ ಚಹಾರ್ ತನ್ನ 1.5ನೇ ಓವರ್ನ ಎಸೆತದಲ್ಲಿ ರನ್ ಅಪ್ ವೇಳೆ ಸ್ನಾಯು ಸೆಳೆತಕ್ಕೊಳಗಾಗಿ ಗಾಯಗೊಂಡರು. ಈ ವೇಳೆ ತಕ್ಷಣವೇ ಫಿಸಿಯೋ ಬಂದು ನೋಡಿ ಅವರನ್ನ ಪೆವಿಲಿಯನ್ಗೆ ಕರೆದುಕೊಂಡು ಹೋದರು. ದೀಪಕ್ ಚಹಾರ್ನ ಒಂದು ಎಸೆತದ ಬಾಕಿಯನ್ನ ವೆಂಕಟೇಶ್ ಅಯ್ಯರ್ ಪೂರೈಸಿದ್ರು, ಸಿಕ್ಸರ್ ಬಿಟ್ಟುಕೊಟ್ಟು ದುಬಾರಿಯಾದರು. ಆದ್ರೆ ನಂತರದ ಓವರ್ಗಳಲ್ಲಿ ಅಯ್ಯರ್ ಪೊಲಾರ್ಡ್, ಹೋಲ್ಡರ್ ವಿಕೆಟ್ ಪಡೆದು ಮಿಂಚಿದರು.

14 ಕೋಟಿ ನೀಡಿ ಖರೀದಿಸಿದ್ದ ಸಿಎಸ್ಕೆ
ಐಪಿಎಲ್ ಆಟಗಾರರ ಹರಾಜಿನಲ್ಲಿ ಹಣದ ಹೊಳೆಯನ್ನೇ ಹರಿಸಿದ ಸೂಪರ್ ಕಿಂಗ್ಸ್ ಬಲಗೈ ವೇಗದ ಬೌಲರ್ನ ಸೇವೆಯನ್ನು ಮರಳಿ ಪಡೆಯಲು ಬರೋಬ್ಬರಿ 14 ಕೋಟಿ ರೂ. ಖರ್ಚು ಮಾಡಿದೆ. ಸನ್ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಕಠಿಣ ಪೈಪೋಟಿ ನಡುವೆಯೂ ಸಿಎಸ್ಕೆ ಗರಿಷ್ಠ ಬಿಡ್ ಕೂಗುವಲ್ಲಿ ಯಶಸ್ವಿಯಾಯಿತು.
2011ರಲ್ಲಿ ಮೊದಲ ಬಾರಿ ಐಪಿಎಲ್ ಆಟಗಾರರ ಹಾರಜಿನಲ್ಲಿ ಕಾಣಿಸಿಕೊಂಡಿದ್ದ ದೀಪಕ್ ಚಹರ್ಗೆ ಆಗ 20 ಲಕ್ಷ ರೂ. ಮೂಲ ಬೆಲೆ ಸಿಕ್ಕಿತ್ತು. 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿದಾಗ ಕೇವಲ 80 ಲಕ್ಷ ರೂ. ಬೆಲೆ ಗಿಟ್ಟಿಸಿಕೊಂಡಿದ್ದರು. ಆದ್ರೆ ಈ ಸೀಸನ್ನಲ್ಲಿ ಜಾಕ್ಪಾಟ್ ಹೊಡೆದ ದೀಪಕ್ ಬರೋಬ್ಬರಿ 14 ಕೋಟಿ ರೂ. ತನ್ನ ಅಕೌಂಟ್ಗೆ ಸೇರಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ಗೆ ಭಾರೀ ನಷ್ಟ
ದೀಪಕ್ ಚಹಾರ್ ಗಾಯದ ಕಾರಣ ಐಪಿಎಲ್ 2022 ರ ಆರಂಭಿಕ ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಇದೇ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಭಾರಿ ನಷ್ಟವಾಗಲಿದೆ.
ಸಾಮಾನ್ಯವಾಗಿ ತೊಡೆಯ ಸ್ನಾಯುಗಳಲ್ಲಿನ ಗ್ರೇಡ್ 1 ಟಿಯರ್ಗೆ 6 ವಾರಗಳ ವಿಶ್ರಾಂತಿ ಬೇಕಾಗುತ್ತದೆ. ಗಾಯದ ಹಿನ್ನಲೆಯಲ್ಲಿ ಫೆಬ್ರವರಿ 24 ರಂದು ಶ್ರೀಲಂಕಾ ವಿರುದ್ಧದ ಮುಂಬರುವ ಟಿ20 ಸರಣಿಯನ್ನೂ ಅವರು ಕಳೆದುಕೊಳ್ಳಲಿದ್ದಾರೆ. ಅವರು ನೇರವಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಹೋಗಲಿದ್ದಾರೆ ಮತ್ತು ಅಲ್ಲಿ ಅವರು ಪುನರ್ವಸತಿ ಶಿಬಿರದಲ್ಲಿ ಭಾಗಿಯಾಗಲಿದ್ದಾರೆ.

ವೆಸ್ಟ್ ಇಂಡೀಸ್ ತಂಡವನ್ನ ವೈಟ್ವಾಶ್ ಮಾಡಿದ ಭಾರತ
ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ 185ರನ್ಗಳನ್ನ ಬೆನ್ನತ್ತುವಲ್ಲಿ ವೆಸ್ಟ್ ಇಂಡೀಸ್ ಎಡವಿದ ಪರಿಣಾಮ ಭಾರತ 3ನೇ ಟಿ20 ಪಂದ್ಯವನ್ನ 17 ರನ್ಗಳ ಜೊತೆಗೆ ಸರಣಿಯನ್ನ 3-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಈ ಮೂಲಕ ಏಕದಿನ ಕ್ರಿಕೆಟ್ ಸರಣಿ ಜೊತೆಗೆ ಟಿ20 ಸರಣಿಯಲ್ಲೂ ವಿಂಡೀಸ್ ಪಡೆಯನ್ನ ಭಾರತ ವೈಟ್ವಾಶ್ ಮಾಡಿದೆ.
ನಾಲ್ಕು ಬದಲಾವಣೆಯೊಂದಿಗೆ ಕಣಕ್ಕಿಳಿದಿದ್ದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡರು, ಸೂರ್ಯಕುಮಾರ್ ಯಾದವ್ ಮತ್ತು ವೆಂಕಟೇಶ್ ಅಯ್ಯರ್ ಬ್ಯಾಟಿಂಗ್ ನೆರವಿನಿಂದ 16 ರಿಂದ 20 ಓವರ್ಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಮತ್ತು ವೆಂಕಟೇಶ್ ಅಯ್ಯರ್ ವಿಂಡೀಸ್ ಬೌಲರ್ಗಳನ್ನ ಧೂಳೀಪಟ ಮಾಡಿದ್ದಲ್ಲದೆ ಡೆತ್ ಓವರ್ಗಳಲ್ಲಿ ಭಾರತದ ಪರ ದಾಖಲೆಯ ರನ್ ಕಲೆಹಾಕಿದ್ರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications