ನನ್ನ ಫಾರ್ಮ್ ಬಗ್ಗೆ ಚಿಂತೆಯಿಲ್ಲ, ಸೆಂಚುರಿ ಹೊಡೆದ್ರಷ್ಟೇ ಕೊಡುಗೆಯಲ್ಲ: ಅಜಿಂಕ್ಯ ರಹಾನೆ

ಕಾನ್ಪುರದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ತಯಾರಿ ಜೋರಾಗಿದೆ. ನವೆಂಬರ್ 25ರಂದು ಭಾರತ-ನ್ಯೂಜಿಲೆಂಡ್ ತಂಡಗಳು ಚುಟುಕು ಸಮರದ ಬಳಿಕ ಟೆಸ್ಟ್ ಕ್ರಿಕೆಟ್ ಆಡಲು ಕಣಕ್ಕಿಳಿಯಲಿವೆ. ಟಿ20 ಸರಣಿಯಲ್ಲಿ 3-0 ಅಂತರದಲ್ಲಿ ಭರ್ಜರಿ ಜಯ ಸಾಧಿಸಿರುವ ಭಾರತ ಟೆಸ್ಟ್ ಸರಣಿಯಲ್ಲೂ ಅದೇ ಪ್ರರ್ದಶನ ನೀಡಲು ಎದುರು ನೋಡುತ್ತಿದೆ.
ಪ್ರಮುಖ ಆಟಗಾರರ ಅನುಪಸ್ಥಿತಿಯ ನಡುವೆ ಭಾರತವು ಅಜಿಂಕ್ಯ ರಹಾನೆ ಮುಂದಾಳತ್ವದಲ್ಲಿ ಮುನ್ನಡೆಯಲಿದೆ. ಆದ್ರೆ ಸ್ವತಃ ನಾಯಕನೇ ಫಾರ್ಮ್ ಇಲ್ಲದೆ ಇರುವುದು ಟೀಕಾಕಾರರ ಬಾಯಿಗೆ ಆಹಾರವಾಗಿದೆ. ಅಜಿಂಕ್ಯ ರಹಾನೆ ಕಳೆದ 15 ಟೆಸ್ಟ್ ಪಂದ್ಯಗಳಲ್ಲಿ 25ಕ್ಕಿಂತ ಕಡಿಮೆ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ.
ಹೀಗಾಗಿ ರಹಾನೆ ಫಾರ್ಮ್ ಕೊರತೆ ಎದ್ದು ಕಾಣುತ್ತಿದ್ದು, ತನ್ನ ವೈಯಕ್ತಿಕ ಫಾರ್ಮ್ ಬಗ್ಗೆ ಚಿಂತೆಯಿಲ್ಲ, ಶತಕ ಸಿಡಿಸಿದರಷ್ಟೇ ತಂಡಕ್ಕೆ ಕೊಡುಗೆ ನೀಡಿದಂತಾಗುತ್ತದೆ ಎನ್ನುವುದು ನಿಜವಲ್ಲ ಎಂದು ನವೆಂಬರ್ 25 ರಿಂದ ಕಾನ್ಪುರ ಟೆಸ್ಟ್ನ ಮುನ್ನಾದಿನದಂದು ವರ್ಚುವಲ್ ಪತ್ರಿಕಾ ಸಂವಾದದಲ್ಲಿ ಟೀಂ ಇಂಡಿಯಾ ನಾಯಕ ರಹಾನೆ ಹೇಳಿದ್ದಾರೆ.
'' ನನ್ನ ಫಾರ್ಮ್ ಬಗ್ಗೆ ನನಗೆ ಯಾವುದೇ ಕಾಳಜಿ ಇಲ್ಲ. ನಾನು ತಂಡಕ್ಕೆ ಹೇಗೆ ಕೊಡುಗೆ ನೀಡಬಹುದು ಎಂಬುದರ ಕುರಿತು ಯೋಚಿಸುವುದು ನನ್ನ ಕೆಲಸ ಮತ್ತು ಕೊಡುಗೆ ಎಂದರೆ ನೀವು ಪ್ರತಿ ಪಂದ್ಯದಲ್ಲೂ 100 ರನ್ ಮಾಡಬೇಕು ಎಂದಲ್ಲ. ನಿರ್ಣಾಯಕ ಕ್ಷಣದಲ್ಲಿ 30 ರಿಂದ 40 ರನ್ ಅಥವಾ 50 ರಿಂದ 60 ರನ್ಗಳು ಬಹಳ ಮುಖ್ಯವಾದ ಕೊಡುಗೆಯಾಗಿದೆ'' ಎಂದು ರಹಾನೆ ಹೇಳಿದರು.
'' ನಾನು ಯಾವಾಗಲೂ ತಂಡದ ಬಗ್ಗೆ ಯೋಚಿಸುತ್ತೇನೆ ಮತ್ತು ನನ್ನ ಬಗ್ಗೆ ಎಂದಿಗೂ ಯೋಚಿಸುವುದಿಲ್ಲ. ನನಗೆ ಮುಂದೆ ಏನಾಗುತ್ತದೆ? ಅಥವಾ ಭವಿಷ್ಯದಲ್ಲಿ ಏನಾಗುತ್ತದೆ' ಎಂದು ಚಿಂತಿಸುವುದಿಲ್ಲ. ನಾನು ತುಂಬಾ ಅದೃಷ್ಟಶಾಲಿ ಮತ್ತು ಕೃತಜ್ಞನಾಗಿದ್ದೇನೆ ಎಂದು ನಾನು ಭಾವಿಸುತ್ತೇನೆ, ದೇಶವನ್ನು ಮುನ್ನಡೆಸುವುದು ನನಗೆ ಗೌರವವಾಗಿದೆ. ಹಾಗಾಗಿ ಏನಾಗುತ್ತದೆ ಎಂಬುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಭವಿಷ್ಯದಲ್ಲಿ ಏನಿದೆಯೋ ಅದು ಸಂಭವಿಸುತ್ತದೆ. ಒಂದು ನಿರ್ದಿಷ್ಟ ಕ್ಷಣದಲ್ಲಿ ನನ್ನ ಅತ್ಯುತ್ತಮವಾದದ್ದನ್ನು ನೀಡುವುದು ನನ್ನ ಗಮನವಾಗಿದೆ ಮತ್ತು ನಾನು ಪ್ರಯತ್ನಿಸಲಿದ್ದೇನೆ. " ಎಂದು ರಹಾನೆ ಫಾರ್ಮ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ರಹಾನೆಗಿದು ಮೊದಲ ಟೆಸ್ಟ್ ಪಂದ್ಯದ ನಾಯಕತ್ವ ಏನು ಅಲ್ಲ. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ ಸತತ ಎರಡನೇ ಟೆಸ್ಟ್ ಸರಣಿ ಗೆಲುವಿನಲ್ಲಿ ರಹಾನೆ ನಾಯಕತ್ವವು ಪ್ರಮುಖ ಪಾತ್ರವಹಿಸಿತ್ತು. ಆಸ್ಟ್ರೇಲಿಯಾದಲ್ಲಿ ನಡೆದ 2020-21ರ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಟೀಂ ಇಂಡಿಯಾ 2-1ರ ಅಂತರದಲ್ಲಿ ಗೆಲುವು ಸಾಧಿಸಿತು.
"ನಾನು ಬ್ಯಾಟಿಂಗ್ ಮಾಡುವಾಗ, ನಾನು ನಾಯಕನಾಗಿ ಅಲ್ಲ, ನಾನು ಬ್ಯಾಟ್ಸ್ಮನ್ ಆಗಿ ಚಿಂತಿಸುತ್ತೇನೆ ಮತ್ತು ನಾನು ಬ್ಯಾಟಿಂಗ್ನತ್ತ ಗಮನ ಹರಿಸುತ್ತೇನೆ ಮತ್ತು ಆ ಕ್ಷಣದಲ್ಲಿ ಉಳಿಯುತ್ತೇನೆ. ಆದರೆ ಒಮ್ಮೆ ನನ್ನ ಬ್ಯಾಟಿಂಗ್ ಮುಗಿದು ನಾವು ಫೀಲ್ಡಿಂಗ್ ಮಾಡಲು ಪ್ರಾರಂಭಿಸಿದ್ರೆ ನಾಯಕತ್ವ ಪ್ರಾರಂಭವಾಗುತ್ತದೆ "ಎಂದು ರಹಾನೆ ತಮ್ಮ ನಾಯಕತ್ವದ ತಂತ್ರ ವಿವರಿಸಿದರು.
"ನಾವು ಫೀಲ್ಡಿಂಗ್ ಮಾಡುವಾಗ ನಾವು ಯಾವ ರೀತಿಯ ಗೇಮ್ಪ್ಲಾನ್ ಅನ್ನು ಹೊಂದಿದ್ದೇವೆ ಅಥವಾ ನಾವು ಯಾವ ರೀತಿಯ ತಂತ್ರವನ್ನು ಹೊಂದಿದ್ದೇವೆ ಎಂಬುದರ ಕುರಿತು ನಾನು ಯೋಚಿಸುತ್ತೇನೆ, ಆದರೆ ನಾನು ಬ್ಯಾಟಿಂಗ್ ಮಾಡುವಾಗ ಅದು ಅಷ್ಟೆ'' ಎಂದು ಸ್ಪಷ್ಟಪಡಿಸಿದರು.
ಕೆ.ಎಲ್ ರಾಹುಲ್ ತಂಡದಿಂದ ಹೊರಬಿದ್ದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಹಾನೆ, ಈಗಾಗಲೇ ತಂಡದಿಂದ ಕೆಲವು ಆಟಗಾರರು ವಿಶ್ರಾಂತಿಗಾಗಿ ಆಟದಿಂದ ಹೊರಗುಳಿದಿದ್ದಾರೆ, ರಾಹುಲ್ ಕೂಡ ಮಿಸ್ ಆಗಿದ್ದಾರೆ. ಆದರೆ ಇದರಿಂದ ಯುವಕರಿಗೆ ಅವಕಾಶವಾಗಿದೆ ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications