ಮ್ಯಾಂಚೆಸ್ಟರ್ ಪಂದ್ಯದ ಕುರಿತಾಗಿ ಮನವಿ ಮಾಡಿಕೊಂಡಿದ್ದ ಕೊಹ್ಲಿ
ಭಾರತ ಮತ್ತು ಇಂಗ್ಲೆಂಡ್ ನಡುವೆ ಮ್ಯಾಂಚೆಸ್ಟರ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐದನೇ ಟೆಸ್ಟ್ ಪಂದ್ಯ ಆರಂಭವಾಗುವುದಕ್ಕೆ ಕೆಲ ಗಂಟೆಗಳು ಬಾಕಿ ಇರುವಾಗ ಪಂದ್ಯ ರದ್ದುಗೊಂಡು ಮುಂದೂಡಲ್ಪಟ್ಟಿತು. ಆದರೆ ಇದಕ್ಕೂ ಮುನ್ನ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಬಳಿ ಪಂದ್ಯವನ್ನು ಒಂದೆರಡು ದಿನಗಳ ಕಾಲ ಮುಂದೂಡುವಂತೆ ವಿರಾಟ್ ಕೊಹ್ಲಿ ಮನವಿಯನ್ನು ಮಾಡಿದ್ದರು. ತಂಡದಲ್ಲಿ ಕೊರೊನಾ ಭೀತಿಯಿದೆ, ಹೀಗಾಗಿ ಒಂದೆರಡು ದಿನಗಳ ಕಾಲ ಪಂದ್ಯವನ್ನು ಮುಂದೂಡಿದರೆ ಅನುಕೂಲವಾಗುತ್ತದೆ ಎಂಬ ನಿಟ್ಟಿನಿಂದ ವಿರಾಟ್ ಕೊಹ್ಲಿ ಈ ಮನವಿಯನ್ನು ಮಾಡಿದ್ದರು. ಆದರೆ ವಿರಾಟ್ ಕೊಹ್ಲಿ ಮನವಿಯನ್ನು ಪರಿಗಣಿಸದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಕೊಹ್ಲಿ ಸಲಹೆಯನ್ನು ತಳ್ಳಿ ಹಾಕಿ ಪಂದ್ಯವನ್ನು ಮುಂದಿನ ದಿನಗಳಲ್ಲಿ ನಡೆಸುತ್ತೇವೆಂದು ಹೇಳಿ ರದ್ದು ಮಾಡಿತು.
ಬಿಸಿಸಿಐ ಜೊತೆ ಮಾತುಕತೆ ನಡೆಸಿ ಪಂದ್ಯವನ್ನು ಮುಂದೂಡಿದ ಇಸಿಬಿ
ವಿರಾಟ್ ಕೊಹ್ಲಿ ಮನವಿಯನ್ನು ತಿರಸ್ಕರಿಸಿದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ನಂತರ ಬಿಸಿಸಿಐ ಅಧಿಕಾರಿಗಳ ಜೊತೆ ಮಾತುಕತೆಯನ್ನು ನಡೆಸಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಬೇಕಿದ್ದ ಐದನೇ ಟೆಸ್ಟ್ ಪಂದ್ಯವನ್ನು ಮುಂದಿನ ದಿನಗಳಲ್ಲಿ ಸೂಕ್ತ ಸಮಯ ನೋಡಿಕೊಂಡು ನಡೆಸಲು ತೀರ್ಮಾನಿಸಿ ಪಂದ್ಯವನ್ನು ಮುಂದೂಡಿ ಘೋಷಣೆಯನ್ನು ಹೊರಡಿಸಿತು.
ಮುಂದೂಡಲ್ಪಟ್ಟಿರುವ ಪಂದ್ಯ ಯಾವಾಗ ನಡೆಯಬಹುದು?
ಸದ್ಯ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಪಂದ್ಯವನ್ನು ಮುಂದಿನ ದಿನಗಳಲ್ಲಿ ನಡೆಸಲು ತೀರ್ಮಾನಿಸಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮುಂದೂಡಿದೆ. ಆದರೆ ಹೀಗೆ ಮುಂದೂಡಲ್ಪಟ್ಟಿರುವ ಟೆಸ್ಟ್ ಪಂದ್ಯ ಯಾವಾಗ ನಡೆಯಲಿದೆ ಎಂಬ ಕುತೂಹಲ ಕ್ರೀಡಾಭಿಮಾನಿಗಳಲ್ಲಿ ಮೂಡಿದೆ. ಮೂಲಗಳ ಪ್ರಕಾರ ಮುಂದಿನ ವರ್ಷ ಟೀಮ್ ಇಂಡಿಯಾ ಸೀಮಿತ ಓವರ್ಗಳ ಸರಣಿಯನ್ನಾಡಲು ಮತ್ತೆ ಇಂಗ್ಲೆಂಡ್ ಪ್ರವಾಸವನ್ನು ಕೈಗೊಳ್ಳಲಿದೆ, ಈ ಸಂದರ್ಭದಲ್ಲಿಯೇ ಪ್ರಸ್ತುತ ಮುಂದೂಡಲ್ಪಟ್ಟಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ನಡೆಯಲಿದೆ ಎಂಬ ಸುದ್ದಿ ಇದೆ.