IND vs NZ 3rd T20: ಅಹಮದಾಬಾದ್ ಪಿಚ್ ಬಗ್ಗೆ ಆಸಕ್ತಿಕರ ಮಾಹಿತಿ ನೀಡಿದ ಕ್ಯುರೇಟರ್: ಹೇಗಿರಲಿದೆ ಪಿಚ್?

ಭಾರತ ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯ ನಿರ್ಣಾಯಕ ಪಂದ್ಯಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದು ಗೆಲುವು ಸಾಧಿಸಿವೆ. ಇಂದಿನ (ಫೆಬ್ರವರಿ 1) ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಸರಣಿಯನ್ನು ಗೆಲ್ಲಲಿದೆ.
ಇನ್ನು, ಮೊದಲ ಎರಡು ಪಂದ್ಯಗಳಲ್ಲಿ ಕಠಿಣ ಪಿಚ್ಗಳನ್ನು ಬಳಸಲಾಗಿತ್ತು, ಅದರಲ್ಲೂ ಲಕ್ನೋದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಬ್ಯಾಟರ್ ಗಳು ಪ್ರತಿ ರನ್ ಗಳಿಸಲೂ ಕೂಡ ಕಷ್ಟಪಟ್ಟಿದ್ದರು. ನಾಯಕ ಹಾರ್ದಿಕ್ ಪಾಂಡ್ಯ ಪಿಚ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ನಂತರ ಪಿಚ್ ಸಿದ್ಧಪಡಿಸಿದ್ದ ಕ್ಯುರೇಟರ್ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ.
ರಾಂಚಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಕೂಡ ಪಿಚ್ ಬ್ಯಾಟಿಂಗ್ ಮಾಡಲು ಕಠಿಣವಾಗಿತ್ತು ಎಂದು ಹಾರ್ದಿಕ್ ಪಾಂಡ್ಯ ಅಸಮಾಧಾನ ವ್ಯಕ್ತಪಡಿಸಿದ್ದರು. ಸರಣಿಯ ಕೊನೆಯ ಪಂದ್ಯಕ್ಕೆ ಯಾವ ರೀತಿಯ ಪಿಚ್ ಇರಲಿದೆ ಎನ್ನುವ ಕುತೂಹಲ ಈಗ ಎಲ್ಲರಿಗೂ ಇದೆ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಕ್ಯುರೇಟರ್ ಈ ಬಗ್ಗೆ ಮಾತನಾಡಿದ್ದು, ಪಿಚ್ ಯಾವ ರೀತಿ ವರ್ತಿಸಲಿದೆ ಎನ್ನುವುದರ ಬಗ್ಗೆ ಮಾಹಿತಿ ನೀಡಿದ್ದಾರೆ.

ಚೇಸಿಂಗ್ ಮಾಡುವ ತಂಡಕ್ಕೆ ಲಾಭ
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡ 170-175 ರನ್ ಗಳಿಸಿದರೆ ಸವಾಲಿನ ಮೊತ್ತವಾಗಲಿದೆ ಎಂದು ಕ್ಯುರೇಟರ್ ಹೇಳಿದ್ದಾರೆ. ಅಲ್ಲದೆ, ಪಂದ್ಯದ ಸಮಯದಲ್ಲಿ ಇಬ್ಬನಿ ಬೀಳುತ್ತದೆ ಎಂದು ಕೂಡ ಅವರು ಹೇಳಿದ್ದಾರೆ.
ಒಂದು ವೇಳೆ ಇಬ್ಬನಿ ಬಿದ್ದರೆ ಚೇಸಿಂಗ್ ಮಾಡುವ ತಂಡವೇ ಇಲ್ಲಿ ನೆಚ್ಚಿನ ತಂಡವಾಗಿರಲಿದೆ. ಟಾಸ್ ಗೆಲ್ಲುವ ತಂಡದ ನಾಯಕ ಚೇಸಿಂಗ್ ಮಾಡುವ ಕಡೆಗೆ ಹೆಚ್ಚಿನ ಒಲವು ತೋರಲಿದ್ದಾರೆ. ಇಲ್ಲಿ ನಡೆದಿರುವ ಟಿ20 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಎರಡು ಬಾರಿ ಗೆಲುವು ಸಾಧಿಸಿದ್ದು, ಚೇಸಿಂಗ್ ಮಾಡುವ ತಂಡ ಮೂರು ಬಾರಿ ಗೆಲುವು ಸಾಧಿಸಿದೆ.

ಭಾರತವೇ ನೆಚ್ಚಿನ ತಂಡ
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಇದುವರೆಗೂ ಆರು ಪಂದ್ಯಗಳನ್ನಾಡಿದ್ದು, 4 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಎರಡು ಪಂದ್ಯಗಳಲ್ಲಿ ಸೋಲನುಭವಿಸಿದೆ.
2012ರಲ್ಲಿ ಹೊಸ ಕ್ರೀಡಾಂಗಣ ನಿರ್ಮಾಣಕ್ಕೆ ಮುನ್ನ ಇಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಭಾರತ 11 ರನ್ಗಳಿಂದ ಜಯ ಸಾಧಿಸಿತ್ತು. ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಮೂರು ಪಂದ್ಯಗಳಲ್ಲಿ ಗೆದ್ದು ಸರಣಿಯನ್ನು ವಶಪಡಿಸಿಕೊಂಡಿತ್ತು. ಅಂಕಿ ಅಂಶಗಳನ್ನು ನೋಡಿದರೆ ಭಾರತವೇ ಗೆಲ್ಲುವ ನೆಚ್ಚಿನ ತಂಡ ಎನಿಸಿದರೂ, ಬಲಿಷ್ಠವಾಗಿರುವ ಕಿವೀಸ್ ಪಡೆ ಭಾರತಕ್ಕೆ ಸವಾಲೊಡ್ಡುವ ಸಾಧ್ಯತೆ ಇದೆ.

ಪ್ಲೇಯಿಂಗ್ XIನಲ್ಲಿ ಬದಲಾವಣೆ
ಟಿ20 ಸರಣಿಯ ನಿರ್ಣಾಯಕ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಹಲವು ಬದಲಾವಣೆಗಳನ್ನು ನಿರೀಕ್ಷೆ ಮಾಡಬಹುದಾಗಿದೆ. ಬೌಲಿಂಗ್ಗೆ ಹೆಚ್ಚಿನ ನೆರವು ನೀಡಿದ್ದರಿಂದ ಲಕ್ನೋದಲ್ಲಿ ಹೆಚ್ಚುವರಿ ಬೌಲರ್ ಗಳನ್ನು ಆಡಿಸಲಾಗಿತ್ತು.
ನರೇಂದ್ರ ಮೋದಿ ಅಂಗಳದಲ್ಲಿ ಬ್ಯಾಟಿಂಗ್ಗೆ ಹೆಚ್ಚಿನ ನೆರವು ಸಿಗುವುದರಿಂದ ಬ್ಯಾಟರ್ ಗಳಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಮೊದಲ ಎರಡು ಪಂದ್ಯಗಳಲ್ಲಿ ಅವಕಾಶ ಪಡೆಯುವಲ್ಲಿ ವಿಫಲವಾಗಿದ್ದ ಪೃಥ್ವಿ ಶಾ ಇಂದಿನ ಪಂದ್ಯದಲ್ಲಿ ತಂಡದಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ಭಾರತ ಸಂಭಾವ್ಯ ಬಳಗ: ಶುಭಮನ್ ಗಿಲ್/ಪೃಥ್ವಿ ಶಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಿವಂ ಮಾವಿ, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications