ತಂಡದ ಬ್ಯಾಟಿಂಗ್ ಯೋಜನೆ ಬಗ್ಗೆ ಹೇಳಿದ ಬವುಮಾ
ಭಾರತದ ವಿರುದ್ಧದ ಸರಣಿಯಲ್ಲಿ ಮೊದಲ ಸೋಲು ಅನುಭವಿಸಿದ ಬಳಿಕ ಮಾತನಾಡಿದ ಟೆಂಬಾ ಬವುಮಾ ತಂಡದ ಬ್ಯಾಟಿಂಗ್ ಕಾರ್ಯವಿಧಾನದ ಬಗ್ಗೆ ಮಾತನಾಡಿದರು. "ಮೊದಲ ಎರಡು ಓವರ್ಗಳ ಕಾಲ ನಾವು ಯಾವಾಗಲೂ ಸೂಕ್ಷ್ಮವಾಗಿ ಗಮನಸಿಕೊಳ್ಳುತ್ತೇವೆ. ಅದಾದ ಬಳಿಕ ಉತ್ತಮ ಸಮಯವನ್ನು ನೋಡಿಕೊಂಡು ಇನ್ನಿಂಗ್ಸ್ನಲ್ಲಿ ಹಿಡಿತ ಸಾಧಿಸುವ ಪ್ರಯತ್ನವನ್ನು ನಡೆಸುತ್ತೇವೆ. ಈ ಮೂಲಕ ತಂಡದ ಬಿಗ್ ಹಿಟ್ ಆಟಗಾರರಿಗೆ ವೇದಿಕೆಯನ್ನು ಸೃಷ್ಟಿಸುತ್ತೇವೆ" ಎಂದಿದ್ದಾರೆ ಟೆಂಬಾ ಬವುಮಾ.
ಸ್ಪಿನ್ನರ್ಗಳು ನಮ್ಮನ್ನು ಒತ್ತಡಕ್ಕೆ ಸಿಲುಕಿಸಿದರು
ಇನ್ನು ಈ ಸಂದರ್ಭದಲ್ಲಿ ಟೆಂಬಾ ಬವುಮಾ ಭಾರತದ ಸ್ಪಿನ್ ವಿಭಾಗದ ಪ್ರದರ್ಶನದ ಬಗ್ಗೆ ಮಾತನಾಡಿದ್ದಾರೆ. "ಅವರ ಸ್ಪಿನ್ನರ್ಗಳು ನಮ್ಮನ್ನು ಒತ್ತಡಕ್ಕೆ ಸಿಲುಕಿಸಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಈ ಒತ್ತಡವನ್ನು ನಾವು ಅನುಭವಿಸಿರಲಿಲ್ಲ. ಇಲ್ಲಿನ ಪಿಚ್ ಸ್ಪಿನ್ನರ್ಗಳಿಗೆ ಹೆಚ್ಚು ಅನುಕೂಲವಾಗುವಂತೆ ಇತ್ತು. ಪರಿಸ್ಥಿತಿಯನ್ನು ತಮಗೆ ಅನುಕೂಲವಾಗುವಂತೆ ಬಳಸಿಕೊಂಡಿರುವುದಕ್ಕೆ ಭಾರತೀಯ ಸ್ಪಿನ್ನರ್ಗಳಿಗೆ ಮೆಚ್ಚುಗೆ ಸೂಚಿಸಲೇಬೇಕು. ಅವರ ನಾಯಕ ಸ್ಪಿನ್ನರ್ಗಳನ್ನು ಬೇಗನೆ ದಾಳಿಗೆ ಇಳಿಸಿದರು. ಆ ಯೋಚನೆ ಪಂದ್ಯದಲ್ಲಿ ನಮಗೂ ಅವರಿಗೂ ದೊಡ್ಡ ವ್ಯತ್ಯಾಸವನ್ನುಂಟು ಮಾಡಿತು" ಎಂದಿದ್ದಾರೆ ಟೆಂಬಾ ಬವುಮಾ.
ಹಾಗೆ ಮಾಡಿದಲ್ಲಿ ನಾವು ಮೂರ್ಖರು ಎನಿಸಿಕೊಳ್ಳುತ್ತೇವೆ
ಇನ್ನು ಈ ಸಂದರ್ಭದಲ್ಲಿ ಟೆಂಬಾ ಬವುಮಾ ಬ್ಯಾಟಿಂಗ್ ವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂಬ ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸಿದ್ದಾರೆ. ನಾವು ಮೊದಲ ಎರಡು ಪಂದ್ಯಗಳಲ್ಲಿ ನಮ್ಮ ಇದೇ ಯೋಜನೆಯಿಂದ ಗೆಲುವು ಸಾಧಿಸಿದ್ದೇವೆ. ಈಗ ಒಂದು ಸೋಲು ಅನುಭವಿಸಿದ ತಕ್ಷಣವೇ ನಮ್ಮ ಬ್ಯಾಟಿಂಗ್ ವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಯೋಚಿಸಿದರೆ ನಾವು ನಿಜಕ್ಕೂ ಮೂರ್ಖರಾಗುತ್ತೇವೆ ಎಂದಿದ್ದಾರೆ ಟೆಂಬಾ ಬವುಮಾ. ಮೂಲಕ ಮುಂದಿನ ಪಂದ್ಯಗಳಲ್ಲಿಯೂ ತಮ್ಮ ತಂಡದ ಬ್ಯಾಟಿಂಗ್ ವಿಧಾನ ಹೀಗೆಯೇ ಮುಂದುವರಿಯಲಿದೆ ಎಂಬುದನ್ನು ತಿಳಿಸಿದ್ದಾರೆ.
ಭಾರತ ತಂಡ ದುರ್ಬಲವಲ್ಲ
ಇನ್ನು ಭಾರತ ತಂಡದಲ್ಲಿ ಅನುಭವಿ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬೂಮ್ರಾ, ಕೆಎಲ್ ರಾಹುಲ್ ಅವರಂತಾ ಆಟಗಾರರು ಇಲ್ಲ. ಹಾಘಿದ್ದರೂ ಭಾರತ ತಂಡವನ್ನು ದುರ್ಬಲ ತಂಡ ಎಂದು ದಕ್ಷಿಣ ಆಫ್ರಿಕಾ ನಾಯಕ ಒಪ್ಪಿಕೊಳ್ಳಲಿಲ್ಲ. "ನಾನು ಈ ತಂಡವನ್ನು ದುರ್ಬಲ ಎಂದು ಅಂದುಕೊಂಡಿಲ್ಲ. ಈ ಎಲ್ಲಾ ಆಟಗಾರರು ತಮ್ಮ ದೇಶೀಯ ಕ್ರಿಕೆಟ್ನಲ್ಲಿ ಹಾಗೂ ಐಪಿಎಲ್ನಲ್ಲಿ ಅದ್ಭುತವಾಗಿ ಪ್ರದರ್ಶನ ನಿಡಿದ ಆಟಗಾರರಾಗಿದ್ದಾರೆ. ಅವರೆಲ್ಲರೂ ಗುಣಮಟ್ಟದ ಆಟಗಾರರಾಗಿದ್ದಾರೆ. ನಾವು ಉತ್ತಮವಾಗಿ ಆಡಿದರೆ ಮಾತ್ರವೇ ಗೆಲುವು ಸಾಧ್ಯ ಎಂಬುದು ನಮಗೆ ಅರಿವಿದೆ. ಹಾಗಾಗಿ ನಾವು ಮೊದಲ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದೇವೆ" ಎಂದಿದ್ದಾರೆ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ.