ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅದ್ಭುತ ಜಯ ಸಾಧಿಸಿದ ನಂತರ ಇದೀಗ ರೋಹಿಯ್ ಶರ್ಮಾ ನೇತೃತ್ವದ ಭಾರತ ತಂಡ ಮೂರು ಪಂದ್ಯಗಳ ಟಿ20 ಸರಣಿಯನ್ನು ತನ್ನ ವಶಕ್ಕೆ ಪಡೆಯುವ ಲೆಕ್ಕಾಚಾರದಲ್ಲಿದೆ. ಶುಕ್ರವಾರ ಈಡನ್ ಗಾರ್ಡನ್ನಲ್ಲಿ ಟಿ20 ಸರಣಿಯ ಎರಡನೇ ಪಂದ್ಯ ನಡೆಯಲಿದ್ದು ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೆ ರೋಹಿತ್ ಶರ್ಮಾ ಚುಟುಕು ಮಾದರಿಯಲ್ಲಿ ನಾಯಕತ್ವ ವಹಿಸಿಕೊಂಡು ಸತತ ಎರಡನೇ ಸರಣಿಯನ್ನು ಗೆದ್ದಂತಾಗುತ್ತದೆ.
ಈ ಸರಣಿಯಲ್ಲಿ ಭಾರತ ತಂಡದ ಕೆಲ ಪ್ರಮುಖ ಆಟಗಾರರು ಅಲಭ್ಯವಾಗಿದ್ದು ಕೆಎಲ್ ರಾಹುಲ್, ಜಸ್ಪ್ರೀತ್ ಬೂಮ್ರಾ ಮೊಹಮ್ಮದ್ ಶಮಿ ಹಾಗೂ ವಾಶಿಂಗ್ಟನ್ ಸುಂದರ್ ಆಡುತ್ತಿಲ್ಲ. ಹೀಗಾಗಿ ಕೆಲ ಪ್ರಮುಖ ಪ್ರಯೋಗಗಳನ್ನು ಮೊದಲ ಪಂದ್ಯದಲ್ಲಿ ನಡೆಸಿದೆ. ಇದರಲ್ಲಿ ಸ್ಪಿನ್ನರ್ ರವಿ ಬಿಶ್ನೋಯ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಮಿಂಚಿದ್ದರೆ ಇಶಾನ್ ಕಿಶನ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿ ಕಣಕ್ಕಿಳಿದರೂ ಸಣ್ಣ ಹಿನ್ನಡೆಯನ್ನು ಅನುಭವಿಸಿದ್ದು ಸ್ವಲ್ಪ ಮಟ್ಟಿಗೆ ಹಿನ್ನಡೆಯಂತೆ ಭಾಸವಾಗುತ್ತಿದೆ.
ಡೇವಿಡ್ ವಾರ್ನರ್ ನಂತರ ಆಸ್ಟ್ರೇಲಿಯಾದ ಮತ್ತೋರ್ವನ ಜೊತೆ ಸನ್ ರೈಸರ್ಸ್ ಕಿರಿಕ್!
ಆದರೆ ಮೊದಲ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಪವರ್ಪ್ಲೇನಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ್ದು ಪ್ರಮುಖ ಅಂಶವಾಗಿದೆ. ಕಳೆದ ಟಿ20 ವಿಶ್ವಕಪ್ನಲ್ಲಿ ಭಾರತ ಪವರ್ಪ್ಲೇಯನ್ನು ಉತ್ತಮವಾಗಿ ಬಳಸಿಕೊಳ್ಳಲು ವಿಫಲವಾದ ಬಳಿಕ ನಾಯಕ ರೋಹಿತ್ ಶರ್ಮಾ ಉದ್ಧೇಶ ಪೂರ್ವಕವಾಗಿ ಆಕ್ರಮಣಕಾರಿ ಆಟಕ್ಕೆ ಮೊರೆಹೋದಂತಿದೆ. ಮೊದಲ ಪಂದ್ಯದಲ್ಲಿ ಭಾರತ 158 ರನ್ಗಳ ಗುರಿ ಬೆನ್ನಟ್ಟಿದ ಸಂದರ್ಭದಲ್ಲಿ ರೋಹಿತ್ ಶರ್ಮಾ ಕೇವಲ 19 ಎಸೆತಗಳನ್ನು ಎದುರಿಸಿ 40 ರನ್ ಬಾರಿಸಲು ಯಶಸ್ವಿಯಾಗಿದ್ದರು. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ಸಣ್ಣ ಪ್ರಮಾಣದ ಕುಸಿತ ಕಂಡರೂ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಹಾಗೂ ವೆಂಕಟೇಶ್ ಐಯ್ಯರ್ ಅವರ ಸಮಯೋಚಿತ ಆಟದಿಂದಾಗಿ ಭಾರತ ಯಶಸ್ವಿಯಾಗಿ ರನ್ ಬೆನ್ನಟ್ಟುವಲ್ಲಿ ಯಶಸ್ವಿಯಾಗಿತ್ತು.
ಇನ್ನು ಮೊದಲ ಟಿ20 ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ನಡೆಸಿದ ಇಶಾನ್ ಕಿಶನ್ ಎರಡನೇ ಪಂದ್ಯದಲ್ಲಿಯೂ ಅವಕಾಶವನ್ನು ಪಡೆಯುತ್ತಾರೋ ಅಥವಾ ಯುವ ಆಟಗಾರ ಋತುರಾಜ್ ಗಾಯಕ್ವಾಡ್ಗೆ ಅವಕಾಶ ದೊರೆಯಲಿದೆಯಾ ಎಂಬುದು ಕುತೂಹಲ ಮೂಡಿಸಿದೆ. ಮೊದಲ ಪಂದ್ಯದ ಬಳಿಕ ನಾಯಕ ರೋಹಿತ್ ಶರ್ಮಾ ಇಶಾನ್ ಕಿಶನ್ ಅವರೊಂದಿಗೆ ಸುದೀರ್ಘ ಮಾತುಕತೆಯಲ್ಲಿ ತೊಡಗಿರುವುದು ಕಂಡು ಬಂದಿತ್ತು. ಹೀಗಾಗಿ ಇಶಾನ್ ಕಿಶನ್ ಮೇಲೆ ನಂಬಿಕೆಯಿಟ್ಟು ಮತ್ತೊಂದು ಅವಕಾಶ ದೊರೆಯುವ ಸಾಧ್ಯತೆ ಹೆಚ್ಚಿದೆ. ಇಬ್ಬರು ಆರಂಭಿಕರಿಂದ ಸ್ಪೋಟಕ ಆರಂಭ ದೊರೆತರೆ ಭಾರತ ತಂಡಕ್ಕೆ ಹೆಚ್ಚಿನ ಆತ್ಮವಿಶ್ವಾಸ ದೊರೆಯುವುದರಲ್ಲಿ ಅನುಮಾನವಿಲ್ಲ.
ಇನ್ನು ಮಾಝಿ ನಾಯಕ ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ರನ್ ಗಳಿಸಲು ಪರದಾಡುತ್ತಿರುವುದು ಕೂಡ ತಂಡಕ್ಕೆ ಸಣ್ಣ ಹಿನ್ನಡೆಯಾಗಿದೆ. 14 ಎಸೆತಗಳಲ್ಲಿ 17 ರನ್ ಬಾರಿಸಿದ್ದ ವಿರಾಟ್ ಕೊಹ್ಲಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದರೂ ದೊಡ್ಡ ಹೊಡೆತಕ್ಕೆ ಮುಂದಾಗಿ ಎದುರಾಳಿಗೆ ವಿಕೆಟ್ ಒಪ್ಪಿಸಿದ್ದರು. ಮಾಜಿ ನಾಯಕ ವಿರಾಟ್ ಕೊಹ್ಲಿ ದೊಡ್ಡ ಮೊತ್ತವನ್ನು ಗಳಿಸುವ ಜೊತೆಗೆ ಉತ್ತಮ ವೇಗವನ್ನು ಕೂಡ ಕಾಯ್ದುಕೊಳ್ಳುವ ಅಗತ್ಯವಿದೆ.
ಇನ್ನು ಭಾರತದ ಬೌಲಿಂಗ್ ವಿಭಾಗದ ಪ್ರದರ್ಶನ ಕೂಡ ಮೊದಲ ಪಂದ್ಯದಲ್ಲಿ ಅದ್ಭುತವಾಗಿತ್ತು. ಭುವನೇಶ್ವರ್ ಕುಮಾರ್ ಹಾಗೂ ದೀಪಕ್ ಚಾಹರ್ ಉತ್ತಮ ದಾಳಿ ಸಂಘಟಿಸಿದ್ದರೆ, ಹರ್ಷಲ್ ಪಟೇಲ್ ಅವರನ್ನು ಡೆತ್ ಓವರ್ನಲ್ಲಿ ಅದ್ಭುತವಾಗಿ ಬಳಸಿಕೊಳ್ಳಲು ಭಾರತ ಯಶಸ್ವಿಯಾಗಿತ್ತು. ಇನ್ನು ಸ್ಪಿನ್ನರ್ಗಳಲ್ಲಿ ಯುಜುವೇಂದ್ರ ಚಾಹಲ್ ಜೊತೆಗೆ ರವಿ ಬಿಶ್ನೋಯ್ ಗಮನಾರ್ಹ ಪ್ರದರ್ಶನ ನೀಡಿದ ಕಾರಣ ಎರಡನೇ ಪಂದ್ಯದಲ್ಲಿಯೂ ಈ ಜಫಡಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
ಈ ಕಾರಣದಿಂದಲೇ ನಾನು ನನ್ನ ಮಗನ ಪಂದ್ಯಗಳನ್ನು ವೀಕ್ಷಿಸುವುದಿಲ್ಲ ಎಂದ ಸಚಿನ್!
ಭಾರತ ಸಂಭಾವ್ಯ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ರಿಷಬ್ ಪಂತ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಚಹಾರ್, ಭುವನೇಶ್ವರ್ ಕುಮಾರ್, ರವಿ ಬಿಷ್ಣೋಯ್, ಹರ್ಷಲ್ ಪಟೇಲ್, ಯುಜುವೇಂದ್ರ ಚಾಹಲ್.