

ಕೊಲಂಬೋ, ಮಾರ್ಚ್ 18: ಮೂರು ರಾಷ್ಟ್ರಗಳ ಟಿ20 ಸರಣಿಯ ಅಂತಿಮ ಹಣಾಹಣಿ ರೋಚಕ ಅಂತ್ಯ ಕಂಡಿತು. ಕೊನೆ ಎಸೆತದಲ್ಲಿ ಸಿಕ್ಸರ್ ಬಾರಿಸಿ ಗೆಲುವು ಕಸಿದುಕೊಳ್ಳುವ ಚಾಲಾಕಿತನವನ್ನು ದಿನೇಶ್ ಕಾರ್ತಿಕ್ ತೋರುವ ಮೂಲಕ ಭಾರತಕ್ಕೆ ಜಯ ತಂದಿತ್ತರು.
ಭಾರತ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ, ನಿಗದಿತ 20 ಓವರ್ ಗಳಲ್ಲಿ 166/8 ಸ್ಕೋರ್ ಮಾಡಿತ್ತು. ಸುಲಭ ಜಯದ ನಿರೀಕ್ಷೆಯಲ್ಲಿದ್ದ ಭಾರತ ಹಲವು ಆತಂಕ ಕ್ಷಣಗಳನ್ನು ಎದುರಿಸಿತು. ಅಂತಿಮವಾಗಿ ಕೊನೆ ಓವರ್ ನಲ್ಲಿ ರೋಚಕ ಜಯ ಗಳಿಸಿತು. 8 ಎಸೆತಗಳಲ್ಲಿ 29ರನ್ (2 ಬೌಂಡರಿ, 3 ಸಿಕ್ಸರ್) ಸಿಡಿಸಿದ ಕಾರ್ತಿಕ್ ಅದ್ಭುತ ಪ್ರದರ್ಶನ ನೀಡಿದರು.
ರನ್ ಚೇಸ್ : ಕೊನೆ ಎರಡು ಓವರ್ ಗಳು ಪಂದ್ಯದ ಗತಿ ಬದಲಾಯಿಸಿತು. ರುಬೇಸ್ ಹುಸೇನ್ ಎಸೆದ 19ನೇ ಓವರ್ ನಲ್ಲಿ 6,4,6,0,2,4 ರನ್ ಗಳನ್ನು ದಿನೇಶ್ ಕಾರ್ತಿಕ್ ಚೆಚ್ಚಿದರು. ಹೀಗಾಗಿ, ಕೊನೆ ಓವರ್ ನಲ್ಲಿ 6 ಎಸೆತಗಳಲ್ಲಿ 12ರನ್ ಗಳಿಸುವ ಗುರಿಯನ್ನು ಭಾರತ ಪಡೆದುಕೊಂಡಿತು.

ನಾಯಕ ರೋಹಿತ್ ಶರ್ಮ 56ರನ್ (42ರನ್, 4ಬೌಂಡರಿ, 3 ಸಿಕ್ಸರ್), ಕೆಎಲ್ ರಾಹುಲ್ 24ರನ್ (14 ಎಸೆತ, 2 ಬೌಂಡರಿ, 1ಸಿಕ್ಸರ್), ಮನೀಶ್ ಪಾಂಡೆ 28ರನ್ ಅವರು ಚೇಸ್ ನಲ್ಲಿ ತಮ್ಮ ಕೊಡುಗೆ ನೀಡಿದರು.
ಇದಕ್ಕೂ ಮುನ್ನ ಟಾಸ್ ಗೆದ್ದ ಭಾರತದ ನಾಯಕ ರೋಹಿತ್ ಶರ್ಮ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಬಾಂಗ್ಲಾದೇಶ ಪರ ತಮೀಮ್ ಇಕ್ಬಾಲ್ 15, ಲಿಟಾನ್ ದಾಸ್ 11 ರನ್ ಗಳಿಸಿ ಆರಂಭ ಪಡೆದರೂ, ಭಾರತದ ಸ್ಪಿನ್ ದಾಳಿಗೆ ಶರಣಾದರು.
ಶಬ್ಬೀರ್ ರಹಮಾನ್ 77ರನ್ (50 ಎಸೆತಗಳು, 7 ಬೌಂಡರಿ, 4ಸಿಕ್ಸರ್), ಮಹಮುದುಲ್ಲಾ 21 ಹಾಗೂ ಮೆಹದಿ ಹಸನ್ 7 ಎಸೆತಗಳಲ್ಲಿ 19ರನ್ ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಭಾರತದ ಪರ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ 4 ಓವರ್ ಗಳಲ್ಲಿ 18 ರನ್ನಿತ್ತು 3 ವಿಕೆಟ್ ಕಬಳಿಸಿದರು. ಜಯದೇವ್ ಉನದ್ಕತ್ 2, ವಾಷಿಂಗ್ಟನ್ ಸುಂದರ್ 1 ವಿಕೆಟ್ ಗಳಿಸಿದರು.