ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬೆನ್ನಲ್ಲೇ ಭಾರತ ಪ್ರವಾಸವನ್ನು ಕೈಗೊಂಡಿರುವ ನ್ಯೂಜಿಲೆಂಡ್ ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಇತ್ತಂಡಗಳ ನಡುವಿನ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಈಗಾಗಲೇ ಮುಗಿದಿದ್ದು, ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಎಲ್ಲಾ 3 ಪಂದ್ಯಗಳಲ್ಲಿಯೂ ಜಯ ಸಾಧಿಸುವುದರ ಮೂಲಕ ವೈಟ್ ವಾಷ್ ಸಾಧನೆ ಮಾಡಿದೆ. ಅತ್ತ ಟೀಮ್ ಇಂಡಿಯಾ ವಿರುದ್ಧ ಟಿ ಟ್ವೆಂಟಿ ಸರಣಿಯಲ್ಲಿ ವೈಟ್ ವಾಷ್ ಮುಖಭಂಗ ಅನುಭವಿಸಿದ್ದ ನ್ಯೂಜಿಲೆಂಡ್ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಳ್ಳುವ ತವಕದಲ್ಲಿತ್ತು.
ಆದರೆ ಕಾನ್ಪುರದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಪ್ರಥಮ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿತು. ಹೌದು, ಉತ್ತಮ ಪ್ರದರ್ಶನ ನೀಡಿದರೂ ಕೂಡ ನ್ಯೂಜಿಲೆಂಡ್ ತಂಡದ ಅಂತಿಮ ವಿಕೆಟ್ ಪಡೆಯುವಲ್ಲಿ ವಿಫಲವಾದ ಟೀಂ ಇಂಡಿಯಾ ಗೆಲ್ಲುವ ಸನಿಹಕ್ಕೆ ಬಂದು ಅಂತಿಮವಾಗಿ ಪಂದ್ಯವನ್ನು ಕೈಚೆಲ್ಲಿತು. ನ್ಯೂಜಿಲೆಂಡ್ ತಂಡದ ಪರ ರಚಿನ್ ರವೀಂದ್ರ ಅಂತಿಮ ಹಂತದಲ್ಲಿ ಭಾರತೀಯ ಬೌಲರ್ಗಳು ಎಷ್ಟೇ ಕಠಿಣ ಪ್ರಯತ್ನ ನಡೆಸಿದರೂ ಕೂಡ ವಿಕೆಟ್ ಒಪ್ಪಿಸದೇ ತಂಡವನ್ನು ಸೋಲಿನ ಸುಳಿಯಿಂದ ಪಾರುಮಾಡಿದರು.
ಕೊಹ್ಲಿ ಏಕದಿನ ನಾಯಕತ್ವದ ಭವಿಷ್ಯ ಈ ವಾರವೇ ನಿರ್ಧಾರ; ಈ ಇಬ್ಬರು ಕೊಹ್ಲಿ ಬೇಡ ಎಂದರೆ ಹೊಸ ನಾಯಕ ಫಿಕ್ಸ್!
ಹೀಗೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಟೆಸ್ಟ್ ಸರಣಿಯಲ್ಲಿ ಇತ್ತಂಡಗಳು ಖಾತೆ ತೆರೆಯಲು ವಿಫಲವಾಗಿದ್ದು, ಇದೀಗ ಎರಡೂ ತಂಡಗಳು ಡಿಸೆಂಬರ್ 3ರಿಂದ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯದತ್ತ ಚಿತ್ತ ನೆಟ್ಟಿವೆ. ಸರಣಿಯ ಮೊದಲನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡ ಕಾರಣ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿಯನ್ನು ಕೈವಶಪಡಿಸಿಕೊಳ್ಳಲಿದೆ. ಹೀಗಾಗಿ ಈ ತಂಡಗಳ ನಡುವೆ ನಡೆಯಲಿರುವ ದ್ವಿತೀಯ ಟೆಸ್ಟ್ ಪಂದ್ಯ ಸಾಕಷ್ಟು ಕುತೂಹಲ ಮತ್ತು ಚರ್ಚೆಗಳಿಗೆ ಕಾರಣವಾಗಿದೆ.
ಇನ್ನು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಕಾನ್ಪುರದಲ್ಲಿ ನಡೆದಿದ್ದ ಪ್ರಥಮ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ ವಿಶ್ರಾಂತಿ ತೆಗೆದುಕೊಂಡಿದ್ದರು. ಹಾಗೂ ಇದೀಗ ದ್ವಿತೀಯ ಟೆಸ್ಟ್ ಪಂದ್ಯದ ಮೂಲಕ ಟೀಮ್ ಇಂಡಿಯಾವನ್ನು ಮರಳಿ ಸೇರಿಕೊಳ್ಳಲಿರುವ ವಿರಾಟ್ ಕೊಹ್ಲಿ ನಾಯಕ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಕಳೆದ ವಾರವೇ ಮುಂಬೈ ತಲುಪಿದ್ದ ವಿರಾಟ್ ಕೊಹ್ಲಿ ಕ್ರಿಕೆಟ್ ಕೌನ್ಸಿಲ್ ಆಫ್ ಇಂಡಿಯಾದಲ್ಲಿ ಅಭ್ಯಾಸ ನಡೆಸುತ್ತಿದ್ದರು.
ಹಾಗೂ ಇತ್ತೀಚೆಗಷ್ಟೇ ಭಾರತ ಮತ್ತು ನ್ಯೂಜಿಲೆಂಡ್ ತಂಡದ ಆಟಗಾರರು ಮುಂಬೈ ನಗರ ತಲುಪಿ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅಭ್ಯಾಸಗಳಲ್ಲಿ ತೊಡಗಿಕೊಂಡಿದ್ದರು. ಆದರೆ ಪಂದ್ಯ ಆರಂಭವಾಗಲು ಇನ್ನೇನು 1 ದಿನ ಮಾತ್ರ ಬಾಕಿ ಇದೆ ಎನ್ನುವಾಗಲೇ ಮುಂಬೈ ನಗರದಲ್ಲಿ ನಿರಂತರವಾದ ಮಳೆ ಸುರಿದಿದೆ. ಪರಿಣಾಮ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣ ಸಂಪೂರ್ಣ ತೇವವಾಗಿದ್ದು ಇಂದು ( ಡಿಸೆಂಬರ್ 2 ) ನಡೆಯಬೇಕಿದ್ದ ಆಟಗಾರರ ಅಭ್ಯಾಸಕ್ಕೆ ಬ್ರೇಕ್ ಬಿದ್ದಿದೆ. ಹೌದು, ಬುಧವಾರ ರಾತ್ರಿಯಿಡೀ ಮುಂಬೈ ನಗರದಲ್ಲಿ ನಿರಂತರವಾಗಿ ಮಳೆ ಸುರಿದಿದ್ದು ಎರಡೂ ತಂಡಗಳ ಅಭ್ಯಾಸಕ್ಕೆ ಹೊಡೆತ ಬಿದ್ದಿದೆ.
ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ಗೆ ಕೊಹ್ಲಿ ಆಗಮನ; ಈ ಮೂವರಲ್ಲಿ ಯಾರು ತಂಡದಿಂದ ಹೊರಕ್ಕೆ?
ಸದ್ಯ ಮಳೆ ಪ್ರಮಾಣ ತಗ್ಗಿದರೂ ಕೂಡ ವಾಂಖೇಡೆ ಕ್ರಿಕೆಟ್ ಕ್ರೀಡಾಂಗಣ ಇನ್ನೂ ಕೂಡ ಸಹಜ ಸ್ಥಿತಿಗೆ ಮರಳಿಲ್ಲ. ಈ ಕುರಿತು ನ್ಯೂಜಿಲೆಂಡ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು ನಿನ್ನೆ ಸುರಿದ ಭಾರಿ ಮಳೆ ಮತ್ತು ರಾತ್ರಿಯಿಡಿ ಸುರಿದ ಮಳೆ ಕಾರಣದಿಂದಾಗಿ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣ ಒದ್ದೆಯಾಗಿದೆ. ಹೀಗಾಗಿ ಕಣಕ್ಕಿಳಿದು ಅಭ್ಯಾಸ ನಡೆಸಲಾಗುತ್ತಿಲ್ಲ ಎಂದು ಮುಂಬೈ ನಗರದ ಮಳೆಯ ಚಿತ್ರವೊಂದನ್ನು ಪೋಸ್ಟ್ ಮಾಡಿದೆ.
Yesterday’s rain and more overnight showers have left the Wankhede Stadium too wet for training today. The team will go to the ground this afternoon for a look around and to set up. #INDvNZ pic.twitter.com/gW1Lfjbrja
— BLACKCAPS (@BLACKCAPS) December 2, 2021
ಹೀಗೆ ಬುಧವಾರ ಪೂರ್ತಿ ಮುಂಬೈ ನಗರದಲ್ಲಿ ಸುರಿದ ನಿರಂತರ ಮಳೆಯ ಕಾರಣದಿಂದಾಗಿ ಇದೀಗ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ಆಟಗಾರರು ಅಭ್ಯಾಸ ನಡೆಸುವುದಕ್ಕೂ ಕೂಡ ತೊಂದರೆಯಾಗಿದ್ದು ದ್ವಿತೀಯ ಟೆಸ್ಟ್ ಪಂದ್ಯದ ಪ್ರಥಮ ದಿನದ ಮೇಲೂ ಕೂಡ ಈ ಮಳೆಯು ಪ್ರಭಾವ ಬೀರಲಿದೆ ಎನ್ನಲಾಗುತ್ತಿದೆ.