
ಸಿಎಸ್ಕೆಗೆ ಟಾಸ್ ಲಾಭ
ಸ್ವಿಂಗ್ ಮತ್ತು ಸ್ಪಿನ್ ಎರಡಕ್ಕೂ ನೆರವಾದ ಪಿಚ್ನಲ್ಲಿ ಮೊದಲು ಟಾಸ್ ಗೆದ್ದಿದ್ದು ಚೆನ್ನೈ ತಂಡಕ್ಕೆ ಲಾಭವಾಯಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 205 ರನ್ಗಳನ್ನು ಬೆನ್ನಟ್ಟುವಲ್ಲಿ ಚೆನ್ನೈ ತಂಡ ಯಶಸ್ವಿಯಾಗಿತ್ತು. ಆರ್ಸಿಬಿ ಬೌಲಿಂಗ್ ದುರ್ಬಲವಾಗಿರುವುದರಿಂದ ಎಷ್ಟು ರನ್ಗಳ ಗುರಿ ನೀಡಿದರೂ ಬೆನ್ನಟ್ಟುವ ವಿಶ್ವಾಸ ಚೆನ್ನೈ ನಾಯಕ ಎಂ.ಎಸ್. ಧೋನಿ ಅವರಲ್ಲಿತ್ತು. ಹೀಗಾಗಿ ಟಾಸ್ ಗೆದ್ದು ಚೇಸಿಂಗ್ ಆಯ್ದುಕೊಂಡರು. ಮೊದಲ ಇನ್ನಿಂಗ್ಸ್ನಲ್ಲಿ ಪಿಚ್ ಬೌಲರ್ಗಳಿಗೆ ಹೆಚ್ಚು ನೆರವಾಗುತ್ತಿತ್ತು.

ತರಾತುರಿಯಲ್ಲಿ ಔಟಾದ ಮೆಕಲಮ್
ಪಿಚ್ ಬೌಲರ್ಗಳಿಗೆ ನೆರವು ನೀಡುತ್ತಿದ್ದರಿಂದ ಆರ್ಸಿಬಿ ಬ್ಯಾಟ್ಸ್ಮನ್ಗಳು ವಿಕೆಟ್ ಕಳೆದುಕೊಳ್ಳದೆ ತುಸು ಎಚ್ಚರಿಕೆಯ ಆಟದ ಮೊರೆ ಹೋಗಬೇಕಿತ್ತು. ಆದರೆ ಆರಂಭಿಕ ಆಟಗಾರ ಬ್ರೆಂಡನ್ ಮೆಕಲಮ್ ಭರ್ಜರಿ ಹೊಡೆತ ಹೊಡೆಯಲು ಹೋಗಿ ಕೈಸುಟ್ಟುಕೊಂಡರು. ಇದು ತಂಡದ ಮೇಲೆ ಒತ್ತಡ ಬೀರಿತು.

ನಡೆಯದ ಕೊಹ್ಲಿ, ಎಬಿಡಿ ಆಟ
ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಆಡದಿದ್ದರೆ ಆರ್ಸಿಬಿ ತಂಡದ ಆಟವೇ ಇಲ್ಲ ಎಂಬ ಮಾತಿದೆ. ಅದು ಈ ಪಂದ್ಯದಲ್ಲಿ ಸಾಬೀತಾಯಿತು. ಕೊಹ್ಲಿ ಮತ್ತು ಎಬಿಡಿ ಇಬ್ಬರೂ ವೈಫಲ್ಯ ಕಂಡರು. ರವೀಂದ್ರ ಜಡೇಜಾ ಬೌಲಿಂಗ್ನಲ್ಲಿ ತೀರಾ ಸಾಧಾರಣ ಎಸೆತಕ್ಕೆ ಕೊಹ್ಲಿ ಬೌಲ್ಡ್ ಆಗಿದ್ದು ಅಚ್ಚರಿ ಮೂಡಿಸಿತು. ಆಟಕ್ಕೆ ಕುದುರುವ ಮೊದಲೇ ರಿವರ್ಸ್ ಸ್ವೀಪ್ ಮಾಡಲು ಹೋಗಿ ಎಬಿಡಿ ಸ್ಟಂಪ್ಔಟ್ ಆದರು. ಪಾರ್ಥಿವ್ ಪಟೇಲ್ ಮತ್ತು ಟಿಮ್ ಸೌಥಿ ಮಾತ್ರ ಹೋರಾಟದ ಮನೋಭಾವ ಪ್ರದರ್ಶಿಸಿದರು. ಇಬ್ಬರ ಹೊರತು ಬೇರಾರೂ ಎರಡಂಕಿಯ ಮೊತ್ತ ಸಹ ದಾಟಲಿಲ್ಲ.

ಆರಂಭ ಮತ್ತು ಕೊನೆಯಲ್ಲಿ ಹೋರಾಟ
ಟೂರ್ನಿಯ ಮೊದಲಿನಿಂದಲೂ ಆರ್ಸಿಬಿ ಆರಂಭಿಕ ಆಟಗಾರರ ವೈಫಲ್ಯದ ಸಮಸ್ಯೆ ಎದುರಿಸುತ್ತಿದೆ. ಮೊದಲ ಆರು ಓವರ್ಗಳಲ್ಲಿ ಉತ್ತಮ ರನ್ ಬರುತ್ತಿಲ್ಲ. ಇಷ್ಟು ಪಂದ್ಯಗಳಲ್ಲಿ ಬೆಂಚು ಕಾಯ್ದಿದ್ದ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ತಮ್ಮನ್ನು ಹೊರಗೆ ಕೂರಿಸಿದ್ದು ತಪ್ಪು ಎಂಬುದನ್ನು ತೋರಿಸಿಕೊಟ್ಟರು. ಒಂದೆಡೆ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಪಾರ್ಥಿವ್ ರನ್ ಕಲೆಹಾಕುತ್ತಾ ಸಾಗಿದರು. ಮೊದಲ ಪಂದ್ಯದಲ್ಲಿಯೇ ಅರ್ಧಶತಕ ಗಳಿಸಿದರು. ಮುಂಬೈ ವಿರುದ್ಧ ಚುರುಕಿನ ಬೌಲಿಂಗ್ನಿಂದ ಗೆಲುವು ತಂದುಕೊಟ್ಟಿದ್ದ ಟಿಮ್ ಸೌಥಿ ಈ ಬಾರಿ ಬ್ಯಾಟಿಂಗ್ನಲ್ಲಿ ಆರ್ಸಿಬಿಯ ಮರ್ಯಾದೆ ಉಳಿಸಿದರು. ನೂರು ರನ್ ಗಡಿ ದಾಟುವುದೂ ಕಷ್ಟವಾಗಿದ್ದಾಗ ಮೊಹಮದ್ ಸಿರಾಜ್ ಜತೆ ಒಂಬತ್ತನೇ ವಿಕೆಟ್ಗೆ 38 ರನ್ಗಳ ಜತೆಯಾಟ ನೀಡಿದರು.

ದುರ್ಬಲ ಬೌಲಿಂಗ್ ಪಡೆ
ಎದುರಾಳಿಗೆ ಸಣ್ಣ ಮೊತ್ತದ ಗುರಿ ನೀಡಿದ ಆರ್ಸಿಬಿಗೆ ಅದನ್ನು ಸಮರ್ಥಿಸಿಕೊಳ್ಳುವಂತಹ ಬೌಲಿಂಗ್ ಬಲ ಇರಲಿಲ್ಲ. ಚೆನ್ನೈ ತಂಡದಲ್ಲಿ ಡೇವಿಡ್ ವಿಲ್ಲಿ, ಲುಂಗಿ ನಿಡಿ, ರವೀಂದ್ರ ಜಡೇಜಾ, ಡ್ವೇಯ್ನ್ ಬ್ರಾವೊ, ಹರ್ಭಜನ್ ಸಿಂಗ್ ಅವರಂತಹ ಪರಿಣತ ಹಾಗೂ ಅನುಭವಿ ಬೌಲರ್ಗಳಿದ್ದರು. ಅದಕ್ಕೆ ಹೋಲಿಸಿದರೆ ಆರ್ಸಿಬಿ ಬಹಳ ದುರ್ಬಲ. ಚೆನ್ನೈ ಬ್ಯಾಟಿಂಗ್ ವೇಳೆಯೂ ಪಿಚ್ ಬೌಲರ್ಗಳ ಪರವಾಗಿತ್ತು. ಆರ್ಸಿಬಿ ಬೌಲರ್ಗಳು ಅದನ್ನು ಸದುಪಯೋಗಪಡಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ತಂಡದಲ್ಲಿ ಎದುರಾಳಿಗಳನ್ನು ಪರೀಕ್ಷೆಗೆ ಒಡ್ಡಬಲ್ಲ ಚಾಣಾಕ್ಷ ಬೌಲರ್ಗಳ ಕೊರತೆ ಕಾಡಿತು.

ಜಡೇಜಾ, ಹರ್ಭಜನ್ ಸ್ಪಿನ್
ಹಿಂದಿನ ಪಂದ್ಯಗಳಲ್ಲಿ ರವೀಂದ್ರ ಜಡೇಜಾ ತಮ್ಮ ಕಳಪೆ ಪ್ರದರ್ಶನದಿಂದ ಚೆನ್ನೈ ಅಭಿಮಾನಿಗಳ ಟೀಕೆಗೆ ಗುರಿಯಾಗಿದ್ದರು. ಅವರಿಂದ ತಂಡಕ್ಕೆ ಯಾವ ಕೊಡುಗೆ ಸಿಕ್ಕಿದೆ ಎಂದು ಪ್ರಶ್ನಸಿದ್ದರು. ಆರ್ಸಿಬಿ ಬ್ಯಾಟ್ಸ್ಮನ್ಗಳು ಕೆಟ್ಟ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸುವ ಮೂಲಕ ಜಡೇಜಾ ಅವರನ್ನು ಮತ್ತೆ ಮುನ್ನೆಲೆಗೆ ತಂದರು. ಹರ್ಭಜನ್ ಸಿಂಗ್ ಕೂಡ ತಮ್ಮ ಅನುಭವವನ್ನು ಬಳಸಿಕೊಂಡರು. ಇಬ್ಬರ ಎದುರು ರನ್ ಗಳಿಸಲು ಬ್ಯಾಟ್ಮನ್ಗಳು ಪರದಾಡಿದರು.

ಯಶಸ್ಸು ಬಳಸಿಕೊಳ್ಳುವಲ್ಲಿ ವಿಫಲ
ಚೆನ್ನೈ ಆರಂಭದಲ್ಲಿ ಎಚ್ಚರಿಕೆಯ ಆಟಕ್ಕೆ ಮುಂದಾಯಿತು. ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದ ವಾಟ್ಸನ್ ಬಳಿಕ ನಿಧಾನಗತಿ ಆಟ ನಡೆಸಿದರು. ಬೇಗನೆ ವಿಕೆಟ್ ಕೂಡ ಒಪ್ಪಿಸಿದರು. ಇದರ ಲಾಭವನ್ನು ಆರ್ಸಿಬಿ ಬೌಲರ್ಗಳನ್ನು ಪಡೆದುಕೊಳ್ಳಲಿಲ್ಲ. ಅಂಬಾಟಿ ರಾಯುಡು ಮತ್ತು ಸುರೇಶ್ ರೈನಾ ಅವರಿಗೆ ತಳವೂರಲು ಅವಕಾಶ ನೀಡಿದರು. ಬಳಿಕ ಈ ಆಟಗಾರರು ರನ್ ವೇಗ ಹೆಚ್ಚಿಸಿದರು.

ಮತ್ತೆ ಗೆಲ್ಲಿಸಿದ ಧೋನಿ
ಚೆನ್ನೈ ಮೂರು ವಿಕೆಟ್ಗಳನ್ನು ಕಡಿಮೆ ರನ್ ಅಂತರದಲ್ಲಿ ಕಳೆದುಕೊಂಡಿತು. ಆಗ ರನ್ ಗತಿ ಸಹ ಕಡಿಮೆಯಾಯಿತು. ಈ ಸಂದರ್ಭದಲ್ಲಿ ಧೋನಿ ಮತ್ತು ಬ್ರಾವೊ ಮೇಲೆ ಒತ್ತಡ ಹೇರಲು ಆರ್ಸಿಬಿಗೆ ಸಾಧ್ಯವಾಗಲಿಲ್ಲ. ಕೆಲವು ಎಸೆತಗಳನ್ನು ವ್ಯರ್ಥ ಮಾಡಿದಾಗ ಆರ್ಸಿಬಿಗೆ ಅವಕಾಶ ಒಲಿದಿತ್ತು. ಆದರೆ ಸ್ಪಿನ್ನರ್ ಮುರುಗನ್ ಅಶ್ವಿನ್ ಒಂದೇ ಓವರ್ನಲ್ಲಿ ಸಿಕ್ಸರ್ ಮತ್ತು ಬೌಂಡರಿ ನೀಡಿದರು. 18ನೇ ಓವರ್ನಲ್ಲಿ ಗೆಲ್ಲಲು 22ರನ್ ಬೇಕಿದ್ದಾಗ ಕೊಹ್ಲಿ, ಚಾಹಲ್ ಕೈಗೆ ಚೆಂಡು ಒಪ್ಪಿಸಿದರು. ಚಾಹಲ್ ಮೋಡಿಯ ಭರವಸೆ ತಲೆಕೆಳಗಾಯಿತು. ಚೆನ್ನೈಗೆ ಬೇಕಿದ್ದ ಎಲ್ಲ ರನ್ಗಳನ್ನೂ ಒಂದೇ ಓವರ್ನಲ್ಲಿ ಬಿಟ್ಟುಕೊಟ್ಟ ಚಾಹಲ್, ಪಂದ್ಯ ರೋಚಕತೆಯ ಹಂತಕ್ಕೆ ತಲುಪುವುದನ್ನು ತಪ್ಪಿಸಿದರು.


Click it and Unblock the Notifications