ಎಲ್ಲವೂ ಅವರ ವಿರುದ್ಧವಾಗಿಯೇ ನಡೆಯುತ್ತಿದೆ: ಸಿಎಸ್ಕೆಯ ವೈಫಲ್ಯಕ್ಕೆ ಕಾರಣ ಬಿಚ್ಚಿಟ್ಟ ಚೋಪ್ರ!

ಈ ಬಾರಿಯ ಐಪಿಎಲ್ನ ಲೀಗ್ ಹಂತದ ಕೊನೆಯ ಎರಡು ಪಂದ್ಯಗಳು ಮಾತ್ರವೇ ಬಾಕಿಯಿದ್ದು ಎರಡು ಪಂದ್ಯಗಳು ಕೂಡ ಇಂದು ನಡೆಯಲಿದೆ. ಇಂದಿನ ಎರಡು ಪಂದ್ಯಗಳು ಕೂಡ ಏಕಕಾಲದಲ್ಲಿಯೇ ಆರಂಭವಾಗಲಿದ್ದು ಐಪಿಎಲ್ ಆಯೋಜಕರ ಈ ನಡೆ ಕುತೂಹಲ ಮೂಡಿಸಿದೆ. ಟೂರ್ನಿಯ ಈ ಹಂತದಲ್ಲಿ ಸಾಕಷ್ಟು ಕುತೂಹಲ ಕಾರು ಏರುಪೇರುಗಳು ನಡೆದಿದ್ದು ತಂಡಗಳ ಪ್ರದರ್ಶನದಲ್ಲಿಯೂ ಇದು ಬಿಂಬಿತವಾಗಿದೆ. ಅದರಲ್ಲೂ ಲೀಗ್ ಹಂತದ ಅಂತಿಮ ಘಟ್ಟದಲ್ಲಿ ಒಂದು ತಂಡ ಸತತವಾಗಿ ಅನುಭವಿಸಿದ ಹಿನ್ನಡೆ ಐಪಿಎಲ್ ಅಭಿಮಾನಿಗಳಿಗೂ ಅಚ್ಚರಿ ಮೂಡಿಸಿದೆ.
ಈ ಬಾರಿಯ ಐಪಿಎಲ್ನ ಆರಂಭದಿಂದಲೇ ಅಮೋಘ ಪ್ರದರ್ಶನ ನೀಡಿದ ತಂಡವೆಂದರೆ ಅದು ಚೆನ್ನೈ ಸೂಪರ್ ಕಿಂಗ್ಸ್. 2020ರ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಬಳಿಕ ಈ ಬಾರಿ ಅದ್ಭುತ ರೀತಿಯಲ್ಲಿ ಐಪಿಎಲ್ನಲ್ಲಿ ಸಿಎಸ್ಕೆ ಕಮ್ಬ್ಯಾಕ್ ಮಾಡಿತ್ತು. ಟೂರ್ನಿಯ ಅಗ್ರಸ್ಥಾನವನ್ನು ಕೂಡ ಸಂಪಾದಿಸಿತ್ತು. ಆದರೆ ಅಂತಿಮ ಹಂತದಲ್ಲಿದಲ್ಲಿ ಚೆನ್ನೈ ಸಂಪೂರ್ಣವಾಗಿ ವಿಫಲವಾಗುತ್ತಾ ಬಂದಿದೆ. ಸೋಲಿನ ಮೇಲೆ ಸೋಲು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಸ್ಥಾನವನ್ನು ಡೆಲ್ಲಿಗೆ ಬಿಟ್ಟುಕೊಟ್ಟಿದ್ದು ಎರಡನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಈ ಸೋಲಿನ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಪ್ರತಿಕ್ರಿಯಿಸಿದ್ದಾರೆ.

ಎಲ್ಲವೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧವಾಗಿದೆ
ಕ್ರಿಕೆಟ್ ಕಾಮೆಂಟೇಟರ್ ಹಾಗೂ ವಿಶ್ಲೇಷಕರಾಗಿರುವ ಆಕಾಶ್ ಚೋಪ್ರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಗ್ಗೆ ಮಾತನಾಡಿದ್ದಾರೆ. ಈ ಬಾರಿಯ ಐಪಿಎಲ್ನ ಅಂತಿಮ ಘಟ್ಟದ ವೇಳೆಗೆ ಎಲ್ಲವೂ ತಂಡದ ವಿರುದ್ಧವಾಗಿಯೇ ನಡೆಯುತ್ತಿದೆ ಎಂದಿದ್ದಾರೆ. ಅದರಲ್ಲೂ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳ ವೈಫಲ್ಯವನ್ನು ಆಕಾಶ್ ಚೋಪ್ರ ಬೊಟ್ಟು ಮಾಡಿದ್ದಾರೆ. ಮಧ್ಯಮ ಕ್ರಮಾಂಕದ ಆಟಗಾರರಿಂದ ನಿಯಮಿತವಾಗಿ ರನ್ ಹರಿದುಬರಬೇಕಿದೆ ಎಂದಿದ್ದಾರೆ ಆಕಾಶ್ ಚೋಪ್ರ.

ವೈಫಲ್ಯವನ್ನು ಬಿಚ್ಚಿಟ್ಟ ಚೋಪ್ರ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ವೈಫಲ್ಯವನ್ನು ಅನುಭವಿಸುತ್ತಿದ್ದಾರೆ. "ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ ಮೊಯೀನ್ ಅಲಿ ಯುಎಇನಲ್ಲಿ ರನ್ಗಳಿಸಲು ಪರದಾಡುತ್ತಿದ್ದಾರೆ ಎಂದು. ರಾಬಿನ್ ಉತ್ತಪ್ಪ ಅವರನ್ನು ನೀವು ಆಡಿಸಿದಿರಿ ಸಿಕ್ಕ ಎರಡು ಅವಕಾಶದಲ್ಲಿಯೂ ಅವರು ರನ್ಗಳಿಸಲು ವಿಫಲವಾದರು. ಅಂಬಾಟಿ ರಾಯುಡು ಟೂರ್ನಿಯಲ್ಲಿ ರನ್ಗಳಿಸಿದ್ದಾರಾದರೂ ಕೊನೆಯ ಪಂದ್ಯವಲ್ಲಿ ವಿಫಲವಾದರು. ನಂತರ ಎಂಎಸ್ ಧೋನಿ ಕಣಕ್ಕಿಳಿದರೂ ಅವರ ಬ್ಯಾಟ್ನಿಂದಲೂ ರನ್ ಬಂದಿಲ್ಲ. ಆದರೆ ಫಾಪ್ ಡು ಪ್ಲೆಸಿಸ್ ಮಾತ್ರ 76 ರನ್ಗಳಿಸಿ ಏಕಾಂಗಿಯಾಗಿ ಹೋರಾಟವನ್ನು ಮಾಡಿದ್ದಾರೆ" ಎಂದು ಆಕಾಶ್ ಚೋಪ್ರ ಚೆನ್ನೈ ದಾಂಡಿಗರ ವೈಫಲ್ಯವನ್ನು ಬೊಟ್ಟು ಮಾಡಿದ್ದಾರೆ.

ಮಧ್ಯಮ ಕ್ರಮಾಂಕದ ವೈಫಲ್ಯ
ಮುಂದುವರಿದು ಮಾತನಾಡಿದ ಆಕಾಶ್ ಚೋಪ್ರ "ನೀವು ಪಂದ್ಯದಲ್ಲಿ ಗೆಲುವು ಸಾಧಿಸಬಹುದು ಎನ್ನಲು ರನ್ಗಳನ್ನೇ ಗಳಿಸುತ್ತಿಲ್ಲ. ಪದೇ ಪದೇ ಒಂದೇ ಸಮಸ್ಯೆ ನಿಮ್ಮನ್ನು ಕಾಡುತ್ತಿದೆ. ಅದರಲ್ಲೂ ಮಧ್ಯಮ ಕ್ರಮಾಂಕ ತೀರಾ ಕಳಪೆ ಪ್ರದರ್ಶನ ನೀಡುತ್ತಿದೆ. ನಿಮ್ಮ ಮಧ್ಯಮ ಕ್ರಮಾಂಕದ ವೈಫಲ್ಯ ಇದೇ ರೀತಿ ಮುಂದಿವರಿದರೆ ಯಾರಿಂದಲೂ ಕಾಪಾಡಲು ಸಾಧ್ಯವಿಲ್ಲ. ನಿಮ್ಮ ಆರಂಭಿಕ ಆಟಗಾರರು ವೈಫಲ್ಯವನ್ನು ಅನುಭವಿಸಿದರೆ ನಿಮ್ಮನ್ನು ಕಾಪಾಡಲು ಸಾಧ್ಯವಿಲ್ಲ. ಇದು ನಿಜವಾದ ಪರಿಸ್ಥಿತಿ" ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೈಫಲ್ಯಕ್ಕೆ ಕಾರಣವನ್ನು ಚೋಪ್ರ ಬಿಚ್ಚಿಟ್ಟಿದ್ದಾರೆ.

ಚೆನ್ನೈಗೆ ಆರಂಭಿಕರೇ ಆಸರೆ
ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಅದ್ಭುತ ಪ್ರದರ್ಶನ ನೀಡಿರುವುದರ ಹಿಂದೆ ಆರಂಭಿಕ ಆಟಗಾರರ ಕೊಡುಗೆ ಪ್ರಮುಖವಾಗಿದೆ. ದಕ್ಷಿಣ ಆಫ್ರಿಕಾದ ಅನುಭವಿ ಆಟಗಾರ ಫಾಪ್ ಡು ಪ್ಲೆಸಿಸ್ ಹಾಗೂ ಭಾರತದ ಯುವ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಅದ್ಭುತವಾದ ಲಯದಲ್ಲಿದ್ದಾರೆ. ಬಹುತೇಕ ಪಂದ್ಯಗಳಲ್ಲಿ ಈ ಇಬ್ಬರು ಉತ್ತಮ ಪ್ರದರ್ಶಮನ ನೀಡಿದ್ದು ಇದು ಚೆನ್ನೈ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದೆ. ಆದರೆ ಈ ಇಬ್ಬರು ವೈಫಲ್ಯವನ್ನು ಕಂಡಲ್ಲಿ ಉಳಿದ ಆಟಗಾರರಿಂದ ಹೇಳಿಕೊಳ್ಳುವಂತಾ ಪ್ರದರ್ಶನ ಬರುತ್ತಿಲ್ಲ. ಫಾಪ್ ಡು ಪ್ಲೆಸಿಸ್ ಹಾಗೂ ಋತುರಾಜ್ ಗಾಯಕ್ವಾಡ್ ಈ ಇಬ್ಬರಿಂದಲೇ ಈ ಆವೃತ್ತಿಯಲ್ಲಿ ಬಹುತೇಕ 1100 ರನ್ಗಳು ಹರಿದು ಬಂದಿದೆ. ಉಳಿದ ಬ್ಯಾಟ್ಸ್ಮನ್ಗಳು ಮುಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಬೇಕಿದೆ. ಭಾರತದಲ್ಲಿ ನಡೆದ ಮೊದಲ ಚರಣದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಮೊಯೀನ್ ಅಲಿ ಯುಎಇನಲ್ಲಿ ರನ್ ಬರವನ್ನು ಅನುಭವಿಸುತ್ತಿದ್ದಾರೆ. ಇದು ಪ್ಲೇಆಫ್ ಹಂತದಲ್ಲಿ ಚೆನ್ನೈ ತಂಡಕ್ಕೆ ದುಬಾರಿಯಾಗುವ ಸಾಧ್ಯತೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications