ಪಂದ್ಯ ಸೋಲಲು ಇದೇ ಪ್ರಮುಖ ಕಾರಣ
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಸೋಲಿಗೆ ಪ್ರಮುಖ ಕಾರಣ ತಮ್ಮ ತಂಡದ ಕಳಪೆ ಫೀಲ್ಡಿಂಗ್ ಎಂದು ಕೆಎಲ್ ರಾಹುಲ್ ಬೇಸರ ವ್ಯಕ್ತಪಡಿಸಿದ್ದಾರೆ. ಎದುರಾಳಿ ತಂಡದ ಆಟಗಾರರು ಉತ್ತಮವಾಗಿ ಫೀಲ್ಡಿಂಗ್ ಮಾಡಿದರು, ಆದರೆ ನಮ್ಮ ತಂಡದ ಆಟಗಾರರು ಕಳಪೆ ಫೀಲ್ಡಿಂಗ್ ಮಾಡಿದರು, ಸುಲಭದ ಕ್ಯಾಚ್ಗಳನ್ನು ಕೈಚೆಲ್ಲುವುದರಿಂದ ತಂಡಕ್ಕೆ ಯಾವುದೇ ಉಪಯೋಗವಿಲ್ಲ ಎಂದು ರಾಹುಲ್ ಸೋಲಿಗೆ ಕಾರಣ ತಿಳಿಸಿದರು.
ಈತನಿಂದ ಪಂದ್ಯ ಸೋತೆವು
ಇನ್ನೂ ಮುಂದುವರೆದು ಮಾತನಾಡಿದ ಕೆಎಲ್ ರಾಹುಲ್ ಎರಡೂ ತಂಡಗಳ ನಡುವೆ ಇದ್ದ ಪ್ರಮುಖ ವ್ಯತ್ಯಾಸವೆಂದರೆ ಅದು ರಜತ್ ಪಾಟಿದಾರ್ ಶತಕ ಎಂದು ಹೇಳಿಕೆ ನೀಡಿದರು. ಯಾವುದೇ ತಂಡದ ಆಟಗಾರನೋರ್ವ ಅತ್ಯುತ್ತಮವಾಗಿ ಬ್ಯಾಟ್ ಬೀಸಿದರೆ ಆ ತಂಡ ಗೆಲುವು ಪಡೆಯಲಿದೆ ಎಂದ ರಾಹುಲ್ ಶತಕ ಸಿಡಿಸಿ ಅಬ್ಬರಿಸಿದ ರಜತ್ ಪಾಟಿದಾರ್ರಿಂದ ತಮ್ಮ ತಂಡ ಸೋಲುಂಡಿತು ಎಂದು ತಿಳಿಸಿದರು. ಪಾಟಿದಾರ್ 54 ಎಸೆತಗಳಲ್ಲಿ 112 ರನ್ ಬಾರಿಸಿ ಐಪಿಎಲ್ ಪ್ಲೇಆಫ್ನಲ್ಲಿ ವೇಗದ ಶತಕ ಬಾರಿಸಿದ ದಾಖಲೆ ಬರೆದರು.
ಕೊನೆಯವರೆಗೆ ಹೋರಾಟ ನಡೆಸಿ ಸೋತ ರಾಹುಲ್
ಇನ್ನು ಕೆಎಲ್ ರಾಹುಲ್ ತಮ್ಮ ತಂಡವನ್ನು ಗೆಲ್ಲಿಸಲು ಹರಸಾಹಸ ಪಟ್ಟರು. ಆರಂಭಿಕನಾಗಿ ಕಣಕ್ಕಿಳಿದು ಕೊನೆಯ ಹಂತದವರೆಗೂ ಹೋರಾಟ ನಡೆಸಿದ ರಾಹುಲ್ ತಂಡಕ್ಕೆ ಗೆಲುವನ್ನು ತಂದುಕೊಡುವಲ್ಲಿ ವಿಫಲರಾದರು. 58 ಎಸೆತಗಳನ್ನು ಎದುರಿಸಿದ ರಾಹುಲ್ 79 ರನ್ ಕಲೆಹಾಕಿ ಜೋಶ್ ಹೇಜಲ್ವುಡ್ ಎಸೆದ 19 ಓವರ್ನಲ್ಲಿ ವಿಕೆಟ್ ಒಪ್ಪಿಸಿದರು.