ನವದೆಹಲಿ, ನವೆಂಬರ್ 01: ಭಾರತದ ಬ್ಯಾಡ್ಮಿಂಟನ್ ತಾರೆ ಕಿದಂಬಿ ಶ್ರೀಕಾಂತ್ ಅವರ ಸಾಧನೆಯನ್ನು ಪರಿಗಣಿಸಿ ಅವರ ಹೆಸರನ್ನು ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
ಮಾಜಿ ಕ್ರೀಡಾ ಸಚಿವ, ಹಾಲಿ ಸಂಸದೀಯ ವ್ಯವಹಾರ ಖಾತೆ ಸಚಿವ ವಿಜಯ್ ಗೋಯಲ್ ಅವರು ಶ್ರೀಕಾಂತ್ ಹೆಸರನ್ನು ಶಿಫಾರಸು ಮಾಡಿ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ದೇಶದ ನಾಲ್ಕನೇ ಅತ್ಯುನ್ನತ ನಾಗರೀಕ ಪ್ರಶಸ್ತಿ ಪದ್ಮಶ್ರೀಗೆ ಶಿಫಾರಸು ಮಾಡಲು ಸೆಪ್ಟೆಂಬರ್ 15 ಕೊನೆದಿನಾಂಕವಾಗಿತ್ತು.

ಆದರೆ, ಒಂದೇ ವರ್ಷದಲ್ಲಿ ನಾಲ್ಕು ಸೂಪರ್ ಸೀರಿಸ್ ಪ್ರಶಸ್ತಿ ಗೆದ್ದ ಕಿದಂಬಿ ಶ್ರೀಕಾಂತ್ ಅವರ ಸಾಧನೆ ದೇಶದ ಯುವ ಜನಾಂಗಕ್ಕೆ ಸ್ಫೂರ್ತಿ ತುಂಬಲಿದೆ ಎಂದು ವಿಜಯ್ ಗೋಯಲ್ ಹೇಳಿದ್ದಾರೆ.
ಇಂಡೋನೇಷಿಯಾ ಓಪನ್, ಆಸ್ಟ್ರೇಲಿಯಾ ಓಪನ್ ಸೂಪರ್ ಸೀರಿಸ್ ಗೆದ್ದುಕೊಂಡಿದ್ದ ಶ್ರೀಕಾಂತ್, ಸಿಂಗಪುರ ಓಪನ್ ನಲ್ಲಿ ರನ್ನರ್ ಅಪ್ ಆಗಿದ್ದರು. ನಂತರ ಡೆನ್ಮಾರ್ಕ್ ಓಪನ್ ಗೆದ್ದರು. ಈಗ ಫ್ರೆಂಚ್ ಓಪನ್ ಸೂಪರ್ ಸಿರೀಸ್ ಗೆಲ್ಲುವ ಮೂಲಕ ಕಿದಂಬಿ ಶ್ರೀಕಾಂತ್ ಹೊಸ ಭಾರತೀಯ ದಾಖಲೆ ಬರೆದಿದ್ದಾರೆ.
ವಿಶ್ವದಲ್ಲಿ ನಾಲ್ವರು ಆಟಗಾರರು ಮಾತ್ರ ಒಂದೇ ವರ್ಷದಲ್ಲಿ ನಾಲ್ಕು ಸೂಪರ್ ಸೀರಿಸ್ ಗೆದ್ದುಕೊಂಡಿದ್ದಾರೆ. ಲೀ ಚಾಂಗ್ ವೈ, ಲಿನ್ ಡಾನ್ ಹಾಗೂ ಚೆನ್ ಲಾಂಗ್ ಅವರ ಸಾಲಿಗೆ ಶ್ರೀಕಾಂತ್ ಸೇರಿದ್ದಾರೆ.(ಪಿಟಿಐ)