ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಮತ್ತೆ ಭಾರತ ತಂಡಕ್ಕೆ ಮರಳುವ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ.
2022ರಲ್ಲಿ ಏಷ್ಯಾಕಪ್ ಸಂದರ್ಭದಲ್ಲಿ ಗಾಯಗೊಂಡಿದ್ದ ರವೀಂದ್ರ ಜಡೇಜಾ ಸುದೀರ್ಘ ಅವಧಿಯವರೆಗೆ ಕ್ರಿಕೆಟ್ನಿಂದ ದೂರವುಳಿದಿದ್ದಾರೆ. 2022ರ ಟಿ20 ವಿಶ್ವಕಪ್ಗೆ ಕೂಡ ಅವರು ಅಲಭ್ಯರಾಗಿದ್ದರು. ಬಾಂಗ್ಲಾದೇಶದ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದ ಜಡೇಜಾ ನಂತರ ಫಿಟ್ನೆಸ್ ಕಾರಣದಿಂದ ತಂಡದಿಂದ ಹೊರಗುಳಿಯಬೇಕಾಯಿತು.
2019ರ ಏಕದಿನ ವಿಶ್ವಕಪ್ ನಂತರ ರವೀಂದ್ರ ಜಡೇಜಾ ಸ್ಟಾರ್ ಆಲ್ರೌಂಡರ್ ಆಗಿ ಗುರುತಿಸಿಕೊಂಡರು. ಮೂರು ಮಾದರಿ ಕ್ರಿಕೆಟ್ನಲ್ಲಿ ಜಡೇಜಾ ಭಾರತ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಹಲವು ತಿಂಗಳುಗಳಿಂದ ಅವರು ಕ್ರಿಕೆಟ್ನಿಂದ ದೂರವಿದ್ದರೂ ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ನಂಬರ್ 1 ಆಲ್ರೌಂಡರ್ ಆಗಿದ್ದಾರೆ.
Rishabh Pant: 2023ರಲ್ಲಿ ರಿಷಬ್ ಪಂತ್ ಕ್ರಿಕೆಟ್ ಆಡೋದೆ ಅನುಮಾನ! ಆಸ್ಪತ್ರೆ ಕೊಟ್ಟ ಮಾಹಿತಿ ಏನು?
ಭಾರತ ಟೆಸ್ಟ್ ತಂಡದಲ್ಲಿ ಜಡೇಜಾ ಮುಖ್ಯ ಪಾತ್ರ ವಹಿಸುತ್ತಾರೆ. 7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಅವರು ತಂಡದ ಪ್ರಮುಖ ಬ್ಯಾಟಿಂಗ್ ಶಕ್ತಿ, ಒತ್ತಡದ ಸನ್ನಿವೇಶಗಳಲ್ಲಿ ಹಲವು ನಿರ್ಣಾಯಕ ಇನ್ನಿಂಗ್ಸ್ಗಳನ್ನು ಆಡಿದ್ದಾರೆ. ಟೆಸ್ಟ್ ಮಾತ್ರವಲ್ಲದೆ ಏಕದಿನ ಮತ್ತು ಟಿ20 ಮಾದರಿಯಲ್ಲಿ ಭಾರತ ತಂಡದ ಫಿನಿಶರ್ ಪಾತ್ರವನ್ನು ನಿಭಾಯಿಸಿದ್ದಾರೆ.
Sea you real soon pic.twitter.com/ThPKQdA0vr
— Ravindrasinh jadeja (@imjadeja) January 6, 2023
ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ವಾಪಸ್ ಸಾಧ್ಯತೆ
ಕಳೆದ ಒಂದು ವರ್ಷದಿಂದ ಅವರಿಗೆ ಗಾಯದ ಸಮಸ್ಯೆ ಕಾಡುತ್ತಿದೆ. ಈಗ ಸಂಪೂರ್ಣವಾಗಿ ಫಿಟ್ ಆಗಿರುವ ಜಡೇಜಾ ಮತ್ತೆ ತಂಡಕ್ಕೆ ವಾಪಸ್ ಬರಲು ಸಿದ್ಧವಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಅಥವಾ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಅವರು ಭಾರತ ತಂಡಕ್ಕೆ ಮರಳುವುದು ಖಚಿತವಾಗಿದೆ.
ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಈ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಸಮುದ್ರ ತೀರದಲ್ಲಿ ನಿಂತಿರುವ ಚಿತ್ರವನ್ನು ಹಂಚಿಕೊಂಡಿರುವ ಅವರು, ಆದಷ್ಟು ಬೇಗನೆ ನಿಮ್ಮನ್ನು ನೋಡುತ್ತೇನೆ ಎಂದು ಶೀರ್ಷಿಕೆ ನೀಡಿದ್ದಾರೆ.
ಸಿಎಸ್ಕೆ ತಂಡದಲ್ಲೇ ಉಳಿದ ಜಡೇಜಾ
2023ರ ಐಪಿಎಲ್ನಲ್ಲಿ ರವೀಂದ್ರ ಜಡೇಜಾ ಬೇರೆ ತಂಡದ ಪರವಾಗಿ ಆಡುವ ಸಾಧ್ಯತೆ ಇದೆ ಎನ್ನಲಾಗಿತ್ತು. 2022ರಲ್ಲಿ ರವೀಂದ್ರ ಜಡೇಜಾ ಸಿಎಸ್ಕೆ ನಾಯಕತ್ವ ವಹಿಸಿಕೊಂಡಿದ್ದರು. ಅವರ ನಾಯಕತ್ವದಲ್ಲಿ ಸಿಎಸ್ಕೆ ಸತತ ಸೋಲು ಕಂಡ ಕಾರಣ, ನಾಯಕತ್ವವನ್ನು ಮತ್ತೆ ಎಂಎಸ್ ಧೋನಿಗೆ ಬಿಟ್ಟುಕೊಟ್ಟಿದ್ದರು. ಮಾತ್ರವಲ್ಲದೆ ಗಾಯದ ಕಾರಣ ನೀಡಿ ಟೂರ್ನಿಯಿಂದ ಹೊರಬಿದ್ದಿದ್ದರು. 2023ರ ಐಪಿಎಲ್ನಲ್ಲಿ ಅವರು ಬೇರೆ ತಂಡಕ್ಕೆ ಆಡಲಿದ್ದಾರೆ ಎನ್ನುವ ಸುದ್ದಿ ಇದ್ದರೂ ಅಂತಿಮವಾಗಿ ಸಿಎಸ್ಕೆ ಅವರನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.